ಗೀತಾ ಹೆಗ್ಡೆ
ಬಡಪಾಯಿ ನಾನು
ಯಾವುದೋ ಮೂಲೆಯಲ್ಲಿ
ಕಣ್ಣ ಹನಿ ತೊಟ್ಟಿಕ್ಕುತ್ತ
ಬಿಕ್ಕಳಿಕೆಯ ಕೂಗು
ನನಗೊಂದೆ ಕೇಳಿಸುವಂತೆ
ಬಿಕ್ಕಿ ಬಿಕ್ಕಿ ಅಳುತ್ತ
ಕಳೆದ ದಿನ ರಾತ್ರಿಗಳು ಅದೆಷ್ಟೋ!
ಯಾರೋ ಕೇಳಿದರು ನನಗೆ
ಮುಂದೇನು ಬದುಕಿನ ರೀತಿ
ನಾ ನಿಂತ ನೀರಾಗಿ ಇರುವೆನೆಂಬ ಆತಂಕವೊ
ಅಥವಾ ವ್ಯಂಗದ ಚಿತ್ತದ ಭಿತ್ತಿಯೊ
ಗೊತ್ತೇ ಆಗಲಿಲ್ಲ
ಆದರೆ
ದಿನಕ್ಕೊಮ್ಮೆಯಾದರೂ ನೆನಪು
ಕದ ತಟ್ಟುತ್ತಲೇ ಇತ್ತು
ವರುಷ ಐವತ್ತಾದರೂ.
ಬರೆದೆ ಬರೆದೆ
ಹರಿದು ಬಿಸಾಕಿದೆ
ನೆಲೆಯಿರಲಿಲ್ಲ ; ಧೈರ್ಯ ಮೊದಲೇ ಇಲ್ಲ
ಅದಾವ ಕಸದ ಗುಂಡಿ ಸೇರಿ
ಅಳುತ್ತಿವೆಯೊ ನನ್ನ ಕವಿತೆಗಳು
ಬನ್ನಿ ಬನ್ನಿ ಎಂದು ಅದೆಷ್ಟು
ಜೋರಾಗಿ ಕರೆದರೂ ಬರಲೊಲ್ಲವು
ಗೀಚಿದ ಅದ್ಭುತ ಆ ಹಳೆಯ ಕವಿತೆಗಳು
ನೆನಪಿಗೂ ಬಾರವು ಏಕೊ ಗೊತ್ತಿಲ್ಲ
ಈಗೆಷ್ಟೇ ಬರೆದರೂ ತೃಪ್ತಿ ಇಲ್ಲ
“ಓಲ್ಡ ಈಸ್ ಗೋಲ್ಡ್”
ಇದಂತೂ ನನ್ನ ಪಾಲಿಗೆ ಖರೇ ಮಾತು!
ನವಿಲಂತೆ ಗರಿ ಬಿಚ್ಚಿ ಹಾರಾಡುವ ಬರಹಗಳೇ
ಏಕೀ ಕುಣಿತ?
ತಾಣದ ಹುಲ್ಲುಗಾವಲಿನಲ್ಲಿ
ಕಾಲಿಗೆ ಗೆಜ್ಜೆ ಕಟ್ಟಿ ನೆಲೆ ಸಿಕ್ಕ ಅಹಂಕಾರವೆ!
ಕುಣಿರಿ ಕುಣಿರಿ ನೀವು ಅದೃಷ್ಟವಂತರು
ಅದರೆ ಕವಿ ಮನ ಹೇಳಿದಂತೆ
“ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”
ನನ್ನ ಮನಸ್ಸು ಆ ಹಳೆ ಪಳಯುಳಿಕೆಯಲ್ಲೆ
ನೆನಪಿರಲಿ!
0 ಪ್ರತಿಕ್ರಿಯೆಗಳು
Trackbacks/Pingbacks