
ಎಚ್ ವಿ ಶ್ರೀನಿಧಿ
ಈಗೀಗ
ನನಗೆ ಎಲ್ಲೆಡೆ ಕಾಣುವುದು
ಅರೆ ನಿಮೀಲಿತ ನೇತ್ರದ,
ಪದ್ಮಾಸನದಲ್ಲಿ ಕೂತ,
ಗುಂಗುರು ಕೂದಲ ಬುದ್ಧ.
ಅಂತಸ್ತಿಗೆ ತಕ್ಕ ಆಕಾರ,
ಬಣ್ಣಕೊಪ್ಪುವ ಪರಿಸರ;
ಬುದ್ಧನಿಗೆ ಕೊಳ್ಳುಬಾಕ ಸಂಸ್ಕೃತಿಯ
ಆಕರ್ಷಕ ಸರಕು.

ಆಧುನಿಕರ ಹೊಸ ಸೂತ್ರ
ಆಸೆಯೆ ದುಃಖಕ್ಕೆ ಮೂಲ
ಮನೆ ಕಟ್ಟುವುದು ಖಚಿತ, ಸಿಕ್ಕಿದರೆ ಮಾತ್ರ
ಕಡಿಮೆ ಬಡ್ಡಿ ದರದ ಗೃಹಸಾಲ.
ರೆಸಾರ್ಟ್ , ರಿಯಲ್ಎಸ್ಟೇಟ್,
ಶ್ರೀಮಂತರ ಬಂಗಲೆಗಳು,
ಶೊಕೇಸು, ಕೀಚೈನು.. ಹೀಗೆ
ಎಲ್ಲೆಡೆ ಸಲ್ಲುವ ಸಮತಾದೂತ.
ಸಂತೆಯಲು ನಿಶ್ಚಿಂತ ಧ್ಯಾನಸ್ಥನೀತ.
ವಿರಾಗಿಯೀಗ ಹಂಗಿನರಮನೆಯ ಗಿಣಿ,
ಮಾತೆತ್ತದಂತೆ ಆಗಿದೆ ಕಟ್ಟಪ್ಪಣೆ.
ಇನ್ನೇನಿದ್ದರೂ ಪ್ಲಾಸ್ಟಿಕ್ ಹೂವಿನ
ಸುಗಂಧ ಬುದ್ಧಚರಣಕ್ಕೆ ಸಮರ್ಪಣೆ.






0 Comments