ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಮ್ಮ ಇತ್ತೀಚಿನ ಕನ್ನಡ ಸಾಹಿತ್ಯ ಓದುಗರು ಯಾರು?’ – ಚಲಂ ಕೇಳ್ತಾರೆ

ಚಲಂ

ನಮ್ಮ ಇತ್ತೀಚಿನ ಕನ್ನಡ ಸಾಹಿತ್ಯ ಓದುಗರು ಯಾರು?ಯಾರಾದರೂ ಒಂದು ಹೊಸ ಅಭಿರುಚಿಗೆ ಹೇಗೆ ಪ್ರವೇಶಿಸುತ್ತಾರೆ? ಈಗಿನವರು ಯಾರೂ ಓದುತ್ತಿಲ್ಲ ಎಂಬ ಗಂಭಿರ ಆರೋಪದ ಹಿನ್ನೆಲೆಯಲ್ಲಿ ಈಗ ಬರುತ್ತಿರುವ ಸಾಹಿತ್ಯ ಎಂತಹುದು ಎಂಬುದು ಕೂಡ ಮುಖ್ಯವಾಗುತ್ತದೆ.ತುಂಬಾ ಜನ ಲೇಖಕರು ಚೆನ್ನಾಗಿ ಬರೆಯುವವರೂ ಇರುವುದರ ನಡುವೆಯೇ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ.
ಹೊಸ ಓದುಗರ ಓಳಗೊಳ್ಳುವಿಕೆಗೆ ಬೇಕಾದಂತಹ ವಸ್ತುವಿನ ಬಗ್ಗೆ ಲೇಖಕರು ಗಮನಹರಿಸುತ್ತಿದ್ದಾರೆಯೇ?ಒಬ್ಬ ಲೇಖಕನಾದವನು ಯಾವ ಆದಾರದ ಮೇಲೆ ವಸ್ತುವಿನ ಆಯ್ಕೆ ಮಾಡಿಕೊಳ್ಳುತ್ತಾನೆ.ಅಂದರೆ ಜನರಿಗೆ ಬೇಕಾದ್ದನ್ನು ಕೊಡುತ್ತಿದ್ದೇನೆ ಅನ್ನುತ್ತಲೇ ತಾನು ಪ್ರಭಾವಿತನಾಗುತ್ತಿರುವ ವಿಚಾರದ ಬಗ್ಗೆಯೇ ಬರೆಯುತ್ತಾ ಹೋಗುತ್ತಿದ್ದಾನೆ.ಅಂದರೆ ಲೇಖನ ಅಭಿರುಚಿಯೇ ಓದುಗನ ಅಭಿರುಚಿ ಅನ್ನುವಂತಾಗಿದೆ.ಲೇಖಕ ಮತ್ತು ಓದುಗನ ಸಂಬಂಧವನ್ನು ಬೇರೆಯದೇ ರೀತಿಯಲ್ಲಿ ನೋಡಬಹುದಾದರೂ ನಾನು ಇಲ್ಲಿ ಮಾತನಾಡಬೇಕಿರುವ ವಿಚಾರದ ದೃಷ್ಟಿಯಿಂದ ಕೇವಲ ಈಗಾಗಲೇ ಒಪ್ಪಿಕೊಂಡ,ಹಾಗು ಈಗಾಗಲೇ ಓದುತ್ತಿರುವ ಓದುಗವಲಯವನ್ನು ಬಿಟ್ಟು ಮಾತನಾಡುತ್ತೇನೆ.
ಯಾವುದು ಸದ್ಯದ ತಲ್ಲಣಗಳಿಗೆ ಸ್ಪಂದಿಸುವುದಿಲ್ಲವೋ ಅಂತಹಾ ವಿಚಾರಗಳು ಹೊಸಬರನ್ನು ತಲುಪವಲ್ಲಿ ವಿಫಲವಾಗುತ್ತವೆ.ಆದರೆ ಕನ್ನಡ ಸಾಹಿತ್ಯದ ಮಟ್ಟಿಗಂತೂ ಯಾವ ಲೇಖಕರಿಗೂ ಕೂಡ ವರ್ತಮಾನದ ಸಮಸ್ಯೆಗಳು ಬೇಕಾಗಿರುವಂತೆ ಕಾಣುವುದಿಲ್ಲ.ಅದರಲ್ಲೂ ಸರ್ವೋಚ್ಚ ಅಧಿಕಾರವಾದ ರಾಜಕೀಯ ನಮ್ಮ ವಸ್ತಗಳಲ್ಲಿ ಕೇವಲ ವಿಡಂಬನೆಯ ಹಂತಕ್ಕೆ ಮಾತ್ರ ನಿಂತುಬಿಡುತ್ತದೆ.ಯಾವ ಲೇಖಕ ಸದ್ಯದ ತುತ್ತ ತುದಿಯ ಅಧಿಕಾರದ ಬಗ್ಗೆ ಮಾತನಾಡುವುದಿಲ್ಲವೋ ಅಲ್ಲಿಗೆ ಆತನೂ ಕೂಡ ಒಂದು ಸುರಕ್ಷಿತ ಜಾಗದಲ್ಲಿ ನಿಂತು ಬರೆಯುತ್ತಿದ್ದಾನೆ ಅಂತಲೇ ಅರ್ಥ.ಹಾಗು ಅಂತಹ ಬರಹಗಳು ಹೊಸಬರನ್ನು ಸೃಷ್ಟಿಸುತ್ತದೆ ಅಂತ ಯೋಚಿಸುವುದೂ ಸಾದ್ಯವಿಲ್ಲ.ಹೊಸಬರನ್ನು ಹುಟ್ಟುಹಾಕದ ಸಾಹಿತ್ಯಕ್ಕೆ ಹುಟ್ಟಿಸುವ ಅಂದರೆ ಸೃಷ್ಟಿಸುವ ಅರ್ಹತೆಯಿದೆ ಅಂತ ಹೇಗೆ ತಿಳಿಯುವುದು..?
ಇನ್ನು ಆಡಳಿತ ನಡೆಸುವವರ ಬಗ್ಗೆ ನಮ್ಮ ಲೇಖಕರ ನಿಲುವುಗಳು ಕೂಡ ಮೊದಲಿನಿಂದಲೂ ಅನುಮಾನಾಸ್ಪದವಾಗಿಯೇ ಇದೆ.ಸದ್ಯದ ರಾಜಕೀಯ ಸ್ಥಿತ್ಯಂತರದ ಬಗ್ಗೆ ಬರೆಯುವುದು ಲೇಖಕನಾದವನ ಕರ್ತವ್ಯ ಅಂತ ಅನ್ನಿಸುವುದಕ್ಕೆ ಸಾದ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ನಮ್ಮ ಸಾಹಿತ್ಯದ ಸೃಷ್ಟಿಕಾರ್ಯ ನಡೆಯುತ್ತಿದೆ.ಆಡಳಿತ ಹೇಗಿರಬೇಕು..? ಇದಕ್ಕಿಂತ ಭಿನ್ನವಾಗಿ,ರಚನಾತ್ಮಕವಾಗಿ ಮತ್ತು ಜನಮುಖಿಯಾಗಿ ಹೇಗಿರಬೇಕು ಎಂಬುದರ ಬಗ್ಗೆ ಬರವಣಿಗೆಯನ್ನು ನಿರೀಕ್ಷಿಸುವುದು ಸಾದ್ಯವೇ ಇಲ್ಲ ಅನ್ನುವಂತಾಗಿದೆ.ಮೊದಲೇ ಹೇಳಿದಂತೆ ತಮ್ಮನ್ನು ಆಳುತ್ತಿರುವ ವಿಚಾರದ ಬಗ್ಗೆ ನಮ್ಮ ನಿರ್ಲಕ್ಷ್ಯ ಎಷ್ಟರ ಮಟ್ಟಿಗಿರುತ್ತದೆಯೋ ಅಷ್ಟರ ಮಟ್ಟಿಗೆ ಆ ಸಾಹಿತ್ಯ ಸತ್ವಹೀನವಾಗಿರುತ್ತದೆ.ಗಮನಿಸಿ ಬೇಕಾದರೆ ಪ್ರತಿದಿನ ದಿನಪತ್ರಿಕೆಗಳಲ್ಲಿ ಬರುವ ಲೇಖನಗಳೇ ಮುಂದಿನ ಪುಸ್ತಕಗಳಾಗುತ್ತವೆ.ಅಂದರೆ ಪುಸ್ತಕಕ್ಕೆ ಅಂತ ಅದರದೇ ಆದ ಸ್ಥಾನ ಇಲ್ಲದಂತಾಗಿದೆ.ಪ್ರಸ್ತುತ ಸ್ಥಿತಿಯ ಬಗ್ಗೆ ತೆಳುವಾಗಿ ಬಂದು ಮತ್ತೆ ನಾಳೆ ಅವು ಬದಲಾಗುವ ಸನ್ನಿವೇಶದಲ್ಲೂ ಮುಂದೆ ಅವು ಪುಸ್ತಕವಾಗುವ ಅರ್ಹತೆಯನ್ನು ಪಡೆದುಕೊಂಡುಬಿಡುತ್ತವೆ.

ಹೊಸದನ್ನು ಹುಟ್ಟಿಸಲು ಸಾದ್ಯವಾಗದ ಯಾವುದಾದರೂ ಸರಿ ಅದರ ಸಮಸ್ಯೆ ಅಂತಹುದು.ಹೊಸದು ಹುಟ್ಟುವುದು ಸಾದ್ಯವಾಗುವುದು ನಮ್ಮನ್ನು ಆಳುವವರನ್ನು ಪ್ರಶ್ನಿಸುವುದರ ಮೂಲಕ ಅನ್ನುವುದನ್ನು ಮರೆಯುವಂತಿಲ್ಲ.
ನಮ್ಮನ್ನು ಆಳುವವರ ಬಗ್ಗೆ ಈಗಿನ ಸಾಹಿತಿಗಳು ಅಂತ ಅಲ್ಲ,ಈ ಹಿಂದಿನ ಸಾಹಿತಿಗಳೂ ಕೂಡ ಮಾತನಾಡಿಲ್ಲ.ಪಾಶ್ಚಾತ್ಯ ಲೇಖಕರ ಯಾರದೇ ಸಾಹಿತ್ಯ,ಆತ್ಮಕತೆಯನ್ನು ತೆಗೆದು ನೋಡಿ ಅಲ್ಲಿ ಅವರು ಆಳುವವರ ನಡುವೆ ನಡೆಸಿರುವ ಹೋರಾಟ, ಯುದ ರಾಜಕೀಯ ಕಾರಣಗಳಿಗಾಗಿಯೇ ಬರೆದ ಕುರುಹುಗಳು ಸಿಗುತ್ತವೆ.ಅದೇ ಕಾರಣಕ್ಕಾಗಿ ದೇಶವನ್ನೇ ಬಿಟ್ಟುಹೋದವರ ಸಂಖ್ಯೆಗೇನೂ ಕಡಿಮೆಯಿಲ್ಲ.ನಮ್ಮ ದೇಶದಲ್ಲಿ ಬರೆದ ಕಾರಣಕ್ಕೆ,ಅದರಲ್ಲೂ ಸದ್ಯದ ರಾಜಕೀಯದ ಬಗ್ಗೆ ಬರೆದು ದೇಶ ಬಿಟ್ಟವರು ಹುಡುಕಿದರೂ ಸಿಗುವುದಿಲ್ಲ.
ನಿಜ,ಬೇರೆ ದೇಶಗಳಲ್ಲಾಂದತೆ ನಮ್ಮ ದೇಶದವನ್ನು ಯುದ್ದ ಅಷ್ಟಾಗಿ ಕಾಡಲಿಲ್ಲ ಎನ್ನುವುದು ನಿಜವೇ ಆದರೂ,ಯಾರನ್ನು ಪ್ರಶ್ನಿಸದೇ ಇರುವಂತಹ ವಾತಾವರಣವೂ ನಮಗೆ ಇಲ್ಲದಂತಿಲ್ಲ.ಯಾರನ್ನೂ ಪ್ರಶ್ನಿಸದೆ ಇರುವಂತಹ ಪರಿಸ್ಥತಿ ಯಾವ ದೇಶದಲ್ಲೂ ಇರುವುದು ಸಾದ್ಯವಿಲ್ಲ..ಹಾಗಾದರೆ ನಮ್ಮ ದೇಶದಲ್ಲಿ ಅಂತಹಾ ಬರವಣಿಗೆ ಯಾಕೆ ಇಲ್ಲವೆಂಬುದು ಕೇಳಿಕೊಳ್ಳಲೇ ಬೇಕಾದ ಪ್ರಶ್ನೆ.
ನೆಹರೂ ಬಗ್ಗೆ,ಪಟೇಲರ ಬಗ್ಗೆ,ಗಾಂಧೀಜಿಯ ಬಗ್ಗೆ ಈಗ ಕೃತಿಗಳು ಬರುತ್ತಿರುವುದು ನಿಜ.ಆದರೆ ಅವರ ಕಾಲಘಟ್ಟದಲ್ಲಿ ಬಂದಿತ್ತಾ ..?ಅವರನ್ನು ಪ್ರಶ್ನಿಸುವ ಯಾವ ಕೃತಿಗಳು ಆಗಿನ ಕಾಲದಲ್ಲಿ ಬಂದಿದ್ದವು.ಮತ್ತೆ ಲೇಖನಗಳ ಮೂಲಕ್ಕೆ ಹೋಗಬೇಕಾಗುತ್ತದೆ ಅಷ್ಟೇ.ನಮ್ಮದು ಮೊದಲಿನಿಂದಲೂ ರಾಜಾಶ್ರಯದಲ್ಲಿ ಬೆಳೆದುಬಂದ ಸಾಹಿತ್ಯ ಅನ್ನುವುದು ಪದೇಪದೇ ನೆನಪಾಗುತ್ತದೆ.ರಾಜನ್ನನ್ನು ಪ್ರಶ್ನಿಸುವ ಗೋಜಿಗೇ ಹೋಗದ ಪ್ರಭುಪ್ರಿಯ ಲೇಖಕರ ನಾಡು ನಮ್ಮದು.ಇತಿಹಾಸವೂ ಇದನ್ನೇ ಹೇಳುತ್ತದೆ.ಆಗಿನಿಂದ ಶುರುವಾದ,ಈಗಲೂ ಓಳಗೇ ಪ್ರವಹಿಸುತ್ತಿರುವ ರಾಜನಾಂಪ್ರಿಯ ಸಾಹಿತ್ಯ ನಮ್ಮದು ಅನ್ನುವುದೇ ಸರಿ ಅನ್ನಿಸುತ್ತದೆ.
ಮುಂದೆ ಈದು ದಶಕಗಳ ನಂತರ ಈಗಿನ ವಿಷಯಗಳ ಕುರಿತು ಸಾಹಿತ್ಯ ಸೃಷ್ಟಿಯಾಗುತ್ತದೆ.ಈಗ ನೆಹರೂ ಬಗ್ಗೆ ಬರುತ್ತಿರುವಂತೆ.ಆದರೆ ಈಗ ನಮ್ಮ ಸಮಸ್ಯೆ ಏನು ಎಂಬುದರ ಬಗ್ಗೆ ಯಾರಿಗೆ ಗೊತ್ತಿದೆ ಹೇಳಿ.ಒಬ್ಬ ದೊಡ್ಡ ಸಾಹಿತಿ ಕೂಡ ಒಂದು ಇಲಾಖೆಯನ್ನು ಏನೂ ಮಾಡದ ಸ್ಥಿತಿಯಲ್ಲಿ ಬಂದು ನಿಂತಿದ್ದಾರೆ ಅನ್ನುವುದನ್ನು ನೋಡುತ್ತಲೇ ಇದ್ದೇವೆ.ಅದು ಯಾಕೆಂದರೆ ಮೊದಲಿನಿಂದ ನಮ್ಮ ಸಾಹಿತಿಗಳು ಪ್ರಭುತ್ವವನ್ನು ಪ್ರಶ್ನಿಸುವುದಿಲ್ಲ ಅನ್ನುವುದು ಆಳುವವರ ಮನಸ್ಸಿಗೂ ಬಂದಿರುತ್ತದೆ.
ಒಂದೆಡೆ ಕಾರ್ಪೊರೇಟ್ ಲೆವೆಲ್ಲಿನ ಫ್ಯಾಷನ್ನಿನ ಸಮಸ್ಯೆಗಳೇ ಇಂದಿನ ಸಾಹಿತ್ಯವಾಗುತ್ತಿದ್ದರೆ,ಮತ್ತೊಂದೆಡೆ,ತಮ್ಮ ಧಾರ್ಮಿಕ ನಂಬಿಕೆಗಳ ಪುನರ್ ಪ್ರತಿಷ್ಟಾಪಿಸುವಂತಹ ಸಾಹಿತ್ಯದಲ್ಲಿ ನಮ್ಮ ಲೇಖಕ ಆಸಕ್ತಿ ಕೇಂದ್ರೀಕೃತವಾಗಿದೆ.ನಮ್ಮನ್ನು ಆಳುವವರ  ಅಂದರೆ ಯಾವುದೇ ಪಕ್ಷವಾಗಿರಲಿ,ನಾಯಕನಾಗಿರಲಿ ಅವನ ಸುತ್ತಮುತ್ತಲಿನ ವಾತಾವರಣವನ್ನು ಕಟ್ಟಿಕೊಡುತ್ತಾ ಅದು ರಚನಾತ್ಮಕವಾಗಿ ಹೇಗಿರಬೇಕೆಂಬುದನ್ನು ಸೂಚಿಸುವ ಯಾವ ಕೃತಿಗಳು ಸಿಗುವುದಿಲ್ಲ.(ಇಲ್ಲಿ ಕೆಲವು ಲಾಡುಗಳ ಬಗ್ಗೆ,ಇನ್ನು ಕೆಲವರ ಬಗ್ಗೆ ಬಂದ ಪುಸ್ತಕಗಳನ್ನು ಸೃಜನಶೀಲ ಅಲ್ಲ ಅನ್ನುವ ಕಾರಣಕ್ಕಾಗಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.)ಇನ್ನು ಹೊಸಓದುಗರನ್ನು ಸೃಷ್ಟಿಯಾಗಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಲ್ಲಿ ಆತನಿಗೆ ಗೊತ್ತಿರುವ ವಿಚಾರಕ್ಕೆ ಕೈ ಹಾಕಿದರೆ ಮಾತ್ರ ಅವನು ಓದುತ್ತಾನಲ್ಲವೇ..?ಇಲ್ಲಾ ಈಗ ಓದುತ್ತಿರುವವರನ್ನು ಮಾತ್ರ ನೋಡಿಕೊಳ್ಳಿ ಅನ್ನುವಂತಿದ್ದರೆ,ಹೊಸ ಓದುಗರ ಸೃಷ್ಟಿಗೆ ಕಾರಣವೇ ಬೇರೆ ಇದೆ ಅನ್ನುವಂತಾದರೆ ಅವರು ಎಂತಹಾ ಓದುಗರು ಅನ್ನುವ ಕುತೂಹಲ ನನಗೂ ಇದೆ.
 

‍ಲೇಖಕರು G

28 January, 2014

2 Comments

  1. Anonymous

    Good Writing.

  2. K G Krupal

    ಕನ್ನಡದಲ್ಲಿ ವೃತ್ತಿಪರ ಭಾಷೆಗೆ ಪ್ರೋತ್ಸಾಹವಿಲ್ಲ, ಇಲ್ಲಿ ಕೇವಲ ಕಥೆ, ಕವನ, ಕಾದಂಬರಿಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಸಹ ವೃತ್ತಿಪರ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ನೀಡದೆಯಿದ್ದಲ್ಲಿ ಭಾಷೆ ಬೆಳವಣಿಗೆ ಸಾಧ್ಯವಿಲ್ಲ. ಕಾನೂನು ಸಾಹಿತ್ಯ, ವೈದ್ಯಕೀಯ ಸಾಹಿತ್ಯ, ಅರ್ಥ ಸಾಹಿತ್ಯ, ತಾಂತ್ರಿಕ ಸಾಹಿತ್ಯ ಮುಂತಾದವು ಬೆಳೆದಲ್ಲಿ ಮಾತ್ರ ಎಲ್ಲಾ ವಲಯಗಳಲ್ಲೂ ಭಾಷೆ ಬೆಳವಣಿಗೆ ಸಾಧ್ಯ. ಇಂದು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುವಂತಹ ಪದಗಳ ಅವಶ್ಯಕತೆ ಅತಿ ಹೆಚ್ಚಾಗಿದೆ. ಜನಸಾಗರದ ಅವಶ್ಯಕತೆಗಳಿಗೆ ಸ್ಪಂದಿಸುವ ವಿಷಯಗಳ ಸಾಹಿತ್ಯ ಇಂದು ತೀರಾ ಅಗತ್ಯವಾಗಿದೆ. ಅಂತಹ ಸಾಹಿತ್ಯ ಒದಗಿಸಿದಲ್ಲಿ ಓದುಗರ ಸಂಖ್ಯೆ ಸ್ವಯಂಪ್ರೇರಿತವಾಗಿ ಹೆಚ್ಚುತ್ತದೆ.K

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading