‘ನಮ್ಮಮ್ಮ ಅಂದ್ರೆ ನನಗಿಷ್ಟ’ ಎಂಬ ಆತ್ಮ ಸಾಂಗತ್ಯದ ಖಾಸಗಿ ಮಾತು..

ಗಿರಿಜಾ ಶಾಸ್ತ್ರಿ

Gay ಗಳಾದವರಿಗೆ ಬಹುಶಃ ಗಂಡು ಗರ್ವ (male ego) ಇರುವುದಿಲ್ಲವೇನೋ. ಯಾಕೆಂದರೆ ಆಳುವುದಕ್ಕೆ, ಅಧಿಕಾರ ಚಲಾಯಿಸುವುದಕ್ಕೆ ಅವರಡಿ ಒಂದು ಹೆಣ್ಣು ಇರುವುದಿಲ್ಲವಲ್ಲ? (ಮಹಾ ಗರ್ವಿಷ್ಠರಾದ ಗೇ ಗಳನ್ನು ನೋಡಿರುವೆ ಅದು ಬೇರೆ ಮಾತು)

‘ಅವಧಿ’ಯ ‘ಚಾಕ್ ಸರ್ಕಲ್’ ನಲ್ಲಿ ಜಿ ಎನ್ ಮೋಹನ್ ಮತ್ತು ವಸುಧೇಂದ್ರ ಅವರ ಸ್ವಾರಸ್ಯಕರ ಪಟ್ಟಾಂಗ ನಡೆದಿತ್ತು. ವಸುಧೇಂದ್ರ ಅವರ ಆಪ್ತವಾದ ದನಿ, ಸರಳತೆ, ಹಾಸ್ಯ ಪ್ರಜ್ಞೆ, ಪಕ್ಕದ ಮನೆ ಗೋಪಾಲಣ್ಣನ ಹಾಗೆ ತೋರುವ ಆತ್ಮೀಯತೆಯನ್ನು ಗಮನಿಸುತ್ತಾ ಇರುವಾಗ ಮೇಲಿನ ಭಾವ ಮನಸ್ಸಿಗೆ ಹೊಳೆಯಿತು.

ವಸುಧೇಂದ್ರ ಜನಮನವನ್ನು ತಟ್ಟಿದ್ದೇ ‘ನಮ್ಮಮ್ಮ ಅಂದ್ರೆ ನನಗಿಷ್ಟ’ ದ ಮೂಲಕ. ಅವರ ‘ಕೆಂಪುಗಿಣಿಯ’ ನೆನಪಾಗುತ್ತದೆ (ಹಂಪಿ ಎಕ್ಸಪ್ರೆಸ್). ಆಧುನಿಕತೆ, ಪ್ರಕೃತಿ ವ್ಯಾಪಾರದ ಮೇಲೆ ಎಸಗುವ ಕ್ರೌರ್ಯವನ್ನು ಹೇಳುವ ಕತೆ ಅದು.

ಮಾನವೀಯ ಮೌಲ್ಯಗಳನ್ನು ಆತುಕೊಳ್ಳದ ಕತೆಗಾರ, ಕತೆಗಾರ್ತಿಯರು ನಿಜವಾಗಿ ಕತೆಗಾರರೇ ಅಲ್ಲ.

“ನಮ್ಮ ಅಮ್ಮನ ನ್ಯಾಪ್ಕಿನ್ನನ್ನು ನಾನು ಬದಲಿಸುತ್ತಿದ್ದೆ” ಎಂಬ ವಸುಧೇಂದ್ರ ಅವರು ತಮ್ಮ ಪ್ರಬಂಧಗಳಲ್ಲಿ ಹೇಳಿಕೊಂಡ ಮಾತುಗಳನ್ನು ಮೋಹನ್ ನೆನೆಪಿಸಿದರು. ಮೋಹನ್ ಅವರ ಅನುಭವವೂ ಅದೇ ಅಗಿದ್ದುದೇ ಅದಕ್ಕೆ ಕಾರಣವಿರಬೇಕು.

ಕತೆಗಾರ ಕೇವಲ ಕಲಾವಿದ ಮಾತ್ರ ಅಲ್ಲ ಅವನು ಮನುಷ್ಯನೂ ಆಗಿರಬೇಕು, ಆಗಿರುತ್ತಾನೆ ಎನ್ನುವುದಕ್ಕೆ ಇದು ಒಳ್ಳೆಯ ನಿದರ್ಶನ.

ನನ್ನ ಅಣ್ಣ ಕೂಡ ಅಮ್ಮನ ಕಡೆಯ ದಿನಗಳಲ್ಲಿ ಅವರ ನ್ಯಾಪಿ ಬದಲಾಯಿಸುತ್ತಿದ್ದ. ಸ್ನಾನ ಮಾಡಿಸುತ್ತಿದ್ದ. ಅಮ್ಮನಿಗೆ ಯಾವಾಗಲೂ ಮಲಬದ್ಧತೆಯ ಸಮಸ್ಯೆ. ಹೀಗಾಗಿ ವಿಸರ್ಜನೆ ಕಷ್ಟವಾದಾಗಲೆಲ್ಲಾ ಕೈಗವಸು ಹಾಕಿ ಕೈಯಿಂದ ಮಲವನ್ನು ತೆಗೆಯುತ್ತಿದ್ದ.

“ಮೊಲೆ ಮುಡಿ, ಗಡ್ಡ ಮೀಸೆ”ಗಳ ನಡುವಿನ ಭೇದ ಅಳಿಸಿ ಹೋಗಿತ್ತು. ಎರಡು ಆತ್ಮಗಳ ಸಾಂಗತ್ಯ ಮಾತ್ರ ಮೇರೆವರಿದಿತ್ತು.

ಪಕ್ಕದಲ್ಲೇ ಮಹಿಳೆಯರ ಒಂದು ಸುಸಜ್ಜಿತ ವೃದ್ಧಾಶ್ರಮವೂ ಇತ್ತು. ಅಮ್ಮ ಅಲ್ಲಿನ ಸದಸ್ಯೆಯರ ಜೊತೆ, ಸಂಜೆ ಹೊತ್ತಲ್ಲಿ ಹರಟೆ ಹೊಡೆಯುವ, ಅವರಿಗೆ ‘ಗೊಜ್ಜು ಬಜ್ಜಿ’ ಇತ್ಯಾದಿಗಳನ್ನು ಕೊಂಡೊಯ್ಯುವ ಸ್ನೇಹಿತೆಯಾದರೇ ಹೊರತು, ಪುಣ್ಯಕ್ಕೆ ಅದರ ಸದಸ್ಯೆಯಾಗುವ ದೌರ್ಭಾಗ್ಯ ಮಾತ್ರ ಬರಲಿಲ್ಲ.

ಇಂದಿಗೂ ಆಶ್ರಮ ಗಿಜಿಗುಡುತ್ತಿದೆ. ಧನ ಮದ, ಯೌವ್ವನ ಮದಗಳನ್ನು ತುಂಬಿಕೊಂಡು ತಲೆ ಗಿರ್ ಆದವರಿಂದ….

ತಾಯಿ ತಂದೆಯರಿಗೆ ತೀರ್ಥಯಾತ್ರೆ ಮಾಡಿಸಿ ನಮ್ಮ ಹಮ್ಮನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ಕಡೆಗಾಲದಲ್ಲಿ ಅವರ ನ್ಯಾಪಿ ಬದಲಾಯಿಸುವುದೇ ಶ್ರೇಷ್ಠವಾದುದು. ನ್ಯಾಪಿ ಬದಲಾಯಿಸದೇ ಥೂ.. ಛೀ.. ವಾಸನೆಯೆಂದು ದೂರ ಸರಿದು, ಸತ್ತಮೇಲೆ ಅದ್ಧೂರಿಯಾಗಿ ವೈಕುಂಠ ಸಮಾರಾಧನೆ ಮಾಡುವ ದೊಡ್ಡಪ್ಪಂದಿರೇ ಹೆಚ್ಚು ತುಂಬಿರುವಾಗ, ನ್ಯಾಪಿ ಬದಲಾಯಿಸುವ ‘ಚಿಕ್ಕಣ್ಣಂದಿ’ರ ಬಗ್ಗೆ ಮಾತನಾಡಲೇ ಬೇಕು

‘(ಕತೆಗಳಲ್ಲಿ) ಅಮ್ಮನಿಂದ ಬಿಡಿಸಿಕೊಳ್ಳುವುದೇ ಕಷ್ಟವಾಯಿತು’ ಎನ್ನುವ ವಸುಧೇಂದ್ರ ಅವರ ಮಾತುಗಳನ್ನು ಕೇಳಿದಾಗ ನನಗೆ ಬಿ ಆರ್ ಲಕ್ಷ್ಮಣರಾವ್ ಅವರ “ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು” ಕವಿತೆಯ ನೆನಪಾಯಿತು.

ಗಂಡುಗರ್ವಗಳನ್ನು ಕಳೆದುಕೊಂಡವರು ಮಾತ್ರ “ನಮ್ಮಮ್ಮ ಅಂದ್ರೆ ನನಗಿಷ್ಟ” ಎಂದು ಕೇವಲ ಬರೆದುಕೊಳ್ಳುವುದಿಲ್ಲ. ಹಾಗೆ ಬದುಕುತ್ತಾರೆ. ಇದು ಆತ್ಮ ಸಾಂಗತ್ಯದ ಖಾಸಗಿ ಮಾತು.

‍ಲೇಖಕರು Avadhi

December 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಚಾಕ್ ಸರ್ಕಲ್ನ ಸಂವಾದಕ್ಕೆ ಪೂರಕವಾದ ಲೇಖನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: