ಜಿ ಪಿ ಬಸವರಾಜು
ಕೊರಾನಾ ದಿನಗಳ
ಕಡು ಏಕಾಂತದಲ್ಲಿ
ಹಗಲು ಇರುಳು
ನನ್ನನ್ನೇ ಸುತ್ತಿಕೊಂಡ
ನನ್ನ ನೆರಳು ಮಾತನಾಡಿತು,
‘ಕುಶಲವೇ, ನನ್ನ ನೆನಪಿದೆಯಾ?’
ನಿಜ ಹೇಳಬೇಕೆಂದರೆ
ನೆನಪಿರಲಿಲ್ಲ, ಎಲ್ಲೂ
ನೋಡಿದಂತಿರಲಿಲ್ಲ
ಪರ್ಕು ಪಬ್ಬು ಮಾಲು
ಥಿಯೇಟರು ಪಾರ್ಟಿ
ಎಲ್ಲಿಯೂ ಕಂಡಂತಿರಲಿಲ್ಲ
ನೋಡಿದೆ: ವಕ್ರ ವಕ್ರ
ಬಡಪಾಯಿ, ಸ್ವಂತಿಕೆ
ಇಲ್ಲ, ಮತ್ತೇನು ಹೇಳುವುದು?

ಕೈ ಕುಲುಕುವಂತಿಲ್ಲ
ಜೊತೆಗಾರನೂ ಅಲ್ಲ-
ಎಂದು ಸರಿದು ನಿಂತೆ
ಸೂರು ಹಾರುವಂತೆ ನಕ್ಕು
ದೊಡ್ಡ ಗಂಟಲಲ್ಲಿ ಹೇಳಿದ
ಹರಿತ ಖಡ್ಗ ಅವನ ನಾಲಿಗೆ:
ಜಗವೆಲ್ಲ ಸುತ್ತುವ ನೀನು
ನನ್ನನ್ನೇ ನೋಡಿಲ್ಲವಲ್ಲ,
ಒಮ್ಮೆಯೂ ಖುಲ್ಲಂಖುಲ್ಲ
ನನ್ನೊಳಗು ಹೊರಗು, ನನ್ನ
ಎತ್ತರ, ವಿಸ್ತಾರ ಎಲ್ಲ
ಗೊತ್ತಿದ್ದೂ ಮರೆತೆಯಲ್ಲ;
ಇರಲಿ ಬಿಡು, ನಮಸ್ಕಾರ
ನಿನಗಲ್ಲ, ನಮ್ಮಿಬ್ಬರನು ಹತ್ತಿರ
ತಂದು ನಿಲ್ಲಿಸಿದ ಕೊರೋನಾಗೆ






ಆತ್ಮ ಸಾಕ್ಷಾತ್ಕಾರ