ರಾಜಶೇಖರ ಬಂಡೆ
ನನ್ನ ಮನೆ ಬಾಗಿಲಿಗೆ ತೋರಣವ ಬಿಗಿದಿಲ್ಲ
ಅಸಲು ಹಿತ್ತಲಿನಲ್ಲಿ ಗಿಡವೆ ಇಲ್ಲ
ಹೊಸಲಿನೊಳಗಡೆ ಕಾಲ ಇಡುವವನ ಎದೆಗೊರಗಿ
ಕಥೆ ಕೇಳುವಂಥ ದಿನ ಬರಲೆ ಇಲ್ಲ
ಸೀರೆಗೆಲ್ಲಿಯ ಕೊಂಡಿ ಸೆರಗಿಗೆಲ್ಲಿದೆ ತುಡಿತ
ಜೋಪಾನ ಮಾಡುವುದ ಕಲಿತೆ ಇಲ್ಲ
ಹರಿದ ರವಿಕೆಯ ತೂತು ಮೈತೋರಿದಾಗೆಲ್ಲ
ನಾಚಿ ನಿಗುರವ ಮೊಲೆಗೆ ಮನಸೆ ಇಲ್ಲ
ಎಷ್ಟು ಜಡ ದೇಹಗಳು ರಕ್ಕಸರ ಬೀಜಗಳು
ಯಾವ ಎದೆಗೂಡಿನಲು ಹೃದಯವಿಲ್ಲ
ಉಣ್ಣುವುದ ಬಲ್ಲವರು ಉಳಿಸಿ ಹೋದುದದೆಲ್ಲ
ಮಾತನೆತ್ತದ ನನಗೆ ಮುಟ್ಟೆ ಇಲ್ಲ
ರೋಮದೆದೆಗಳ ಶಾಖ ಸುಡುತಲಿದೆ ಪ್ರತಿದಿನವು
ಹೇಳಿಕೊಳ್ಳುವ ತೆವಲು ನನ್ನದಲ್ಲ
ಕುದಿವ ಕೋಪಗಳನ್ನ ಮಂಚದಡಿ ಮುಚ್ಚಿಟ್ಟು
ತರೆದು ನೋಡಿದರದಕೆ ಗೆಲುವೆ ಇಲ್ಲ
ಬದುಕ ಬಲ್ಲೆನೊ ಏನೊ ನಿಮ್ಮಗಳ ಹೊರತಾಗಿ
ಬಿಸಿಲ ತೋಟದ ಬಳ್ಳಿ ಬಳಗದಲ್ಲಿ
ಹಿಂಡಿದೆದೆಗಳು ಉಸಿರ ಎಳೆದೆಳೆದು ಬಿಡುವಾಗ
ಸತ್ತ ಹೂವಿನ ಗೋರಿ ಮಗ್ಗುಲಲ್ಲಿ.
ಕಡಿಮೆಯಾಗುತ್ತಿರುವ ಹಸಿರ ನೆತ್ತರು ,ಬಡವನ ಸಾವಿನ ಸೂತಕ ಇನ್ನೆಲ್ಲಿ ತಳಿರು ತೋರಣ.ಇವತ್ತು ಮರಗಳ ಕಡಿದು ಗೋರಿಗಳು ಕಟ್ಟುತ್ತಿರುವ ಕಟುಕರ ಪೀಳಿಯ ಮನಸುಗಳು.
ಸೃಜನಶೀಲ ಕವಿತೆ
ಭಾವತುಂಬಿದ ಕವನ ,ಓದಿದ ಮನಸು ತುಂಬ ಭಾರ. ಜಗಕೆ ಕನ್ನಡಿ ಹಿಡಿದ ಸಾರ್ಥ್ ಕ್ಯ ಕವನಕ್ಕೆ ಲಭಿಸಿದೆ.
ಕನ್ನಡ ಕಾವ್ಯ ಪರಂಪರೆಯ ಕೆ.ಎಸ್.ನ, ಸು.ರಂ ಎಕ್ಕುಂಡಿ ನೆನಪಾದರು.ಭಾವ ಮತ್ತು ಲಯದ ಬೆಸುಗೆ ಚೆನ್ನಾಗಿದೆ.ಅಭಿನಂದನೆಗಳು
ಕಾವ್ಯದ ಸೌಂದರ್ಯ ಜೊತೆಗೆ ಕ್ರೂರ ವಾಸ್ತವದ ಕ್ರೌರ್ಯ ಬೆಲ್ಲ ಬೇವಿನ ಹಾಗೆ ಜೊತೆಯಾಗಿವೆ.
ಯುಗಾದಿಯ ಬೆಳಗು ಕಣ್ಣು ಬಿಟ್ಟಾಗ ಓದಿದ್ದು ಈ ಕವನ. ರಾತ್ರಿ ಮಲಗುವಾಗ ಇದುವರೆಗೂ ನಡೆದು ಬಂದ ಯುಗಾದಿಯ ಚಿತ್ರಣ, ಪೃಕೃತಿಯ ಬದಲಾವಣೆ ಹಬ್ಬ ಆಚರಿಸುವ ಉತ್ಸಾಹ ಇರಲಿಲ್ಲ. ಯಾವ ಪೂವ೯ ತಯಾರಿ ಮಾಡಲಿಲ್ಲ, ತೋರಣ ಕಟ್ಟಿರಲಿಲ್ಲ, ಕವನ ಇದಕ್ಕೆ ಸಾಟಿಯಾಯಿತು. ಮಂಜಾದ ಕಣ್ಣು ಹೃದಯ ಭಾರ. ಕವನ ಮನ ಮುಟ್ಟುವಂತಿದೆ.