ಎಚ್ ಎಂ ಮಹೇಂದ್ರ ಕುಮಾರ್
ಶುದ್ಧೋದನನ ಪುತ್ರ
ಸಿದ್ದಾರ್ಥನಿಗೆ
ವೃದ್ಧಾಪ್ಯ, ದುಃಖ,
ರೋಗ-ರುಜಿನಗಳು, ಸಾವಿಲ್ಲದ
ಹುಟ್ಟಿನ, ಅಮರತ್ವ
ಪಡೆಯುವ
ಮಹದಾಸೆ!
ಅರಮನೆ, ಅರಸೊತ್ತಿಗೆ,
ಅಷ್ಟೈಶ್ವರ್ಯ, ಸುಖ,
ಪುತ್ರ ರಾಹುಲ, ಉಸಿರಾದ ಪತ್ನಿ,
ಮಗಧ ಸಾಮ್ರಾಜ್ಯವನ್ನು ಬಿಟ್ಟು
ಕತ್ತಲಲ್ಲಿ ಕಾಡು ಸೇರಿದ
ಸಿದ್ಧಾರ್ಥನಿಗೆ
ಬುದ್ಧನಾಗುವ ದೊಡ್ಡಆಸೆ!
ತನ್ನಾಸೆಗಾಗಿ, ಛಳಿಗಾಳಿ,
ಮಳೆಬಿಸಲು
ಲೆಕ್ಕಿಸದೇ ವೃಕ್ಷದಡಿ
ಕಣ್ಣುಮುಚ್ಚಿ ಕೂತ
ಸಿದ್ಧಾರ್ಥ, `ಬುದ್ಧ’ನಾಗಿ,
ಬೋಧಿಸಿದ್ದು, `ಆಸೆಯೇ ದುಃಖಕ್ಕೆ
ಮೂಲ ಕಾರಣ’! ಎಂದು.
ನಮ್ಮ, ಸಿದ್ಧಾರ್ಥನಿಗೆ,
ಹೆಂಡತಿ, ಮಕ್ಕಳು, ಸಂಸಾರ, ಜವಾಬ್ದಾರಿ
ಹೊಣೆಗಾರಿಕೆ, ಮನೆ, ಅಯ್ಯೋ,
ಏನನ್ನೂ, ಎಲ್ಲರನ್ನೂ ಥಟ್ಟನೇ ಬಿಟ್ಟು
ಎದ್ದು ಹೋಗದೇ, ಇದ್ದಲ್ಲೇ
`ಬುದ್ಧ’ನಾಗುವ ಮಹದಾಸೆ.
ಸಿದ್ಧಾರ್ಥ ಬುದ್ಧನಾಗದೇ ಇದ್ದಲ್ಲಿ
ಸಾಮ್ರಾಟನೋ, ಚಕ್ರವರ್ತಿಯೋ
ಆಗಿ, ಯುದ್ಧ ಸಾರುತ್ತಿದ್ದ, ಅಲ್ಲವೇ?
ನಮ್ಮ ಸಿದ್ದಾರ್ಥನೂ,
`ಬುದ್ಧ’ನಾಗುವುದನ್ನು ಕೈಬಿಟ್ಟಿಲ್ಲ,
ಏನಾಗುವನೋ?
ಅವನಿಗೂ ಅಗಣಿತ ಆಸೆಗಳಿವೆ,
ಆಕಾಂಕ್ಷೆಗಳೂ ಇವೆ
ಮೈತುಂಬಿದ ಯೌವ್ವನವಿದೆ,
ಮದವೂ ಇದೆ, ಅಹಂಕಾರವೂ ಇದೆ,
ವೈರಾಗ್ಯವೂ ಇದೆ, ಆದರೂ
ಏನಾದಾನೋ? ಎಂಬ
ಭಯ ಅನೇಕರಲ್ಲಿದೆ.
`ಬುದ್ಧ’ನ ಜಪದಲ್ಲಿ
ಮುಗುಳ್ನಗು ತುಳುಕುತ್ತಿದೆ.





0 Comments