(ವೇಮುಲ ನೆನಪಿನಲ್ಲಿ)
ನನ್ನ ‘ನೀಲಿನಕ್ಷತ್ರ’ ಉರಿದುಹೋಯಿತು
ನಟ್ಟನಡುವಿನಲ್ಲಿ
ನಿಂತ ನಿಲುವಿನಲ್ಲೆ
ಸುಟ್ಟು ಕೊಂದರು….🔥
ಬಾಳಬೇಕಿತ್ತು
ಬೆಳಗಬೇಕಿತ್ತು
ಜಗತ್ತಿನ ಕತ್ತಲಿಗೆ ಕಂದೀಲು ಹಿಡಿಯಬೇಕಿತ್ತು
ಅಷ್ಟರಲ್ಲೇ ಕೊಂದರು
ಮಿಣಿ ಹಗ್ಗಕ್ಕೆ ಬೆಣ್ಣೆ ಸವರಲಾಗಿತ್ತು
ಪಾಷಾಣದ ಕಡಾಯಿಗಳನ್ನು ಮುಂದಿಡಲಾಗಿತ್ತು
ದಾರಿಗಳಿಗೆ ಜಾಲಿ ಮುಳ್ಳು ಎಳೆಯಲಾಗಿತ್ತು
ಅಪರಾತ್ರಿ ಕತ್ತಿ ಮಸೆತದ ಸದ್ದು ರಣಗುಡುತ್ತಿತ್ತು
ಸಾಗರದ ಆಳದಲ್ಲಿ
ಕರಿಗಾಳಿಯ ಮೆರವಣಿಗೆ ಹೊರಟಿತ್ತು…🌊
ನನ್ನ ‘ನೀಲಿನಕ್ಷತ್ರ’ ನಿಶ್ಯಸ್ತ್ರವಾಗಿ ಅಸ್ತಂಗತಗೊಂಡಿತು….😔😔
-ಎನ್.ರವಿಕುಮಾರ್ ಶಿವಮೊಗ್ಗ
ಜಡಗೊಂಡ ಅದೆಷ್ಟೋ
ಆತ್ಮಗಳ ಎಚ್ಚರಿಸಿದೆ
ದಲಿತ ದಮನಿತ ಮನಸ್ಸುಗಳ
ದನಿಯಾದೆ
ಅದೆಲ್ಲಿ; ಮಿನುಗಿ ಮರೆಯಾದೆ
ಓ ನಕ್ಷತ್ರದ ಧೂಳೆ
ನಿನ್ನ ಉಸಿರ ಹಸಿರ
ಅಳಿಸಿದರು
ಜಾತಿ ಜನಿವಾರದ ನೇಣು ಕುಳಿಕೆಯಲ್ಲಿ
ನಿನ್ನ ಧನಿಯ ಅವಡುಗಚ್ಚಿಸಿದರು
ಧರ್ಮದ ವಿಷವರ್ತುಲದಲ್ಲಿ
ಅದೆಲ್ಲಿ; ಮಿನುಗಿ ಮರೆಯಾದೆ
ಓ ನನ್ನ ನಕ್ಷತ್ರದ ಧೂಳೆ
ಜೀವನ್ಮರಣದ ಅಮರತೆಯೊಳಗೆ
ಮನಗೆದ್ದು ಮಸಣದ
ಮಿಲನ ಸಂಭ್ರಮದಲ್ಲಿ
ದಾಪುಗಾಲಕ್ಕಿದೆ
ಓ ನಕ್ಷತ್ರದ ಧೂಳೆ
ಏಕೆ ಮಿನುಗಿ ಮರೆಯಾದೆ
ಸಮತೆಯ ಜ್ಯೋತಿ
ಬೆಳಗುವಾತುರದಲ್ಲಿ
ಕೇಸರಿ, ಖಾಕಿ ಚೆಡ್ಡಿಗಳ
ಅಸೂಯೆ ಕುಚೋದ್ಯಕ್ಕೆ ಬಲಿಯಾಗಿ
ಬಾಡಿತು ಬೆಳಗಿದ ಬೆಳಕೇ
ಮೊಳಗಿತು ಅಹಿಂಸೆಯ ಧ್ವನಿ
ಏಕೆ ಮಿನುಗಿ ಮರೆಯಾದೆ
ಓ ನಕ್ಷತ್ರದ ಧೂಳೆ
ಆರಿದ ಒಂದು ಬೆಳಗು
ನೂರು ದೀಪಕ್ಕೆ ದಾರಿಯಾದೆ
ಎಲ್ಲಿ ಹೋದೆ
ಏಕೆ ಮಿನುಗಿ ಮರೆಯಾದೆ
ಓ ನಕ್ಷತ್ರದ ಧೂಳೆ
– ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ
0 ಪ್ರತಿಕ್ರಿಯೆಗಳು