ಎಚ್ ವಿ ಶ್ರೀನಿಧಿ
ಮನೆಯಿಂದ ಹೊರಬಿದ್ದೊಡನೆ
ಶರ್ಟಿನ ಒಳತೂರಿಸಿ, ಕುತ್ತಿಗೆ ಬಳಿ ಸುತ್ತಿಸಿ,
ಪ್ಯಾಂಟಿಗೆ ತುದಿಮುಟ್ಟಿಸಿ, ಕಿವಿಗೆ ಅಂಟಿಸುತ್ತೇನೆ
ನನ್ನ ಇಯರ್ ಫೋನು.
ಏರಿಸುತ್ತೇನೆ ವ್ಯಾಲೂಮು,
ಸೃಷ್ಟಿಸುತ್ತೇನೆ ವ್ಯಾಕೂಮು,
ಕೊಡುವುದಿಲ್ಲ ಯಾರಿಗೂ ತೊಂದರೆ,
ಓಗೊಡುವುದಿಲ್ಲ ಯಾರು ಕರೆದರೆ,
ಎದುರಾಡುವುದಿಲ್ಲ ಯಾರೇನು ಅಂದರೆ,
ಬಿಡುವುದಿಲ್ಲ ಬಸ್ಸಿನಲ್ಲಿ ಸೀಟು,
ಮಹಿಳೆ, ವಯೋವೃದ್ಧರು ಬಂದರೆ.

ಹೆದರಬೇಡಿ,
ಸುಮ್ಮನೆ ಸಿನಿಮಾ ಹಾಡು ಕೇಳುತ್ತೇನೆ.
ವಿರಹಗೀತೆ ಬಂದರೆ, ಮ್ಲಾನವದನ.
ಕ್ರಾಂತಿಗೀತೆ ಬಂದರೆ, ಗಂಭೀರವದನ.
(ಸಲ್ಲಿಸಿಯಾಗಿದೆ ಸೋಶಿಯಲ್ ಮೀಡಿಯಾದಲ್ಲಿ ಯೋಧರಿಗೆ ನಮನ)
ಭಾವಗೀತೆ ಕೇಳಲಾರೆ, ನಾನಿನ್ನೂ ತರುಣ.
ಬಂಧಿಯಾಗಿರುವೆ ನಾನು, ಕೊಡಲಾರೆ ಬೇರೆಡೆ ಗಮನ.
ಹೊರಗಣ ಬಯಲಿಗೆ ಕಣ್ಣು ಮುಚ್ಚಿ,
ಒಳಗಣ ಆಲಯದ ಬಾಗಿಲು ಮುಚ್ಚಿ,
ನನ್ನನ್ನೆ ನಾ ತುಸು ಸಮಯ ಕೊಂದು,
ಶಬ್ಧಸೂತಕವನ್ನು ಆಚರಿಸುತ್ತೇನೆ.






ಕವನ ಚೆನ್ನಾಗಿದೆ. ನಿಜ , ಸೋಷಿಯಲ್ ಮೀಡಿಯಾದಲ್ಲೆ ಯುದ್ಧ , ಅಲ್ಲೆ ಸಂತಾಪ , ಅಲ್ಲೆ ಪ್ರಲಾಪ , ಅಲ್ಲೆ ವಾಂತಿ , ಅಲ್ಲೇ,,,,,
ಧನ್ಯವಾದಗಳು ಮೇಡಂ
ನಿಜ..ಎಲ್ಲವೂ ಸೋಶಿಯಲ್ ಮೀಡಿಯಾ..ಕವಿತೆ ಇಷ್ಟ ಆಯ್ತು