ಅವ್ವನ ಅಂಗನವಾಡಿಯಲ್ಲಿ
ಮಂಗಳಸೂತ್ರ ನಾಟಕ
-ಅರುಣ್ ಜೋಳದಕೂಡ್ಲಿಗಿ

ನನ್ನವ್ವ ಸದ್ಯಕ್ಕೆ ಕೊಟ್ಟೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ.
ಇನ್ನೆರಡು ವರ್ಷದಲ್ಲಿ ನಿವೃತ್ತಿ. ಇಂತಹ ಹೊತ್ತಲ್ಲಿ ಕೂಡ್ಲಿಗಿ ತಾಲೂಕಿನ ಕೊಟ್ಟೂರು ವೃತ್ತದ ಕಾರ್ಯಕರ್ತೆಯರು ಸೇರಿ ಬಾಲ್ಯವಿವಾಹದ ಜಾಗೃತಿ ಮೂಡಿಸಲು ‘ಮಂಗಳ ಸೂತ್ರ’ ಎಂಬ ಕಿರು ನಾಟಕವನ್ನು ಸಿದ್ದಪಡಿಸಿ ಪ್ರಯೋಗಿಸುತ್ತಿದ್ದಾರೆ.
ಈ ನಾಟಕ ಜನಪ್ರಿಯವಾಗಿ ಈಗಾಗಲೇ ಮೂರು ಪ್ರದರ್ಶನ ಕಂಡಿದೆ, ಇನ್ನೂ ಅನೇಕ ಕಡೆಗಳಲ್ಲಿ ಪ್ರದರ್ಶನಕ್ಕೆ ಆಹ್ವಾನವಿದೆಯಂತೆ. ನಾಟಕದಲ್ಲಿ ನನ್ನವ್ವ ಹುಡುಗನ ತಂದೆಯ ಪಾತ್ರ ಮಾಡುತ್ತಾಳೆ, ಕಚ್ಚೆಪಂಚೆ ತೊಟ್ಟು ತಲೆಗೆ ಟವೆಲ್ಲ ಸುತ್ತಿದ ಗಂಡುವೇಷಧಾರಿ ಅವ್ವನನ್ನು ನೋಡಲು ಎಂಥದೋ ಪುಳಕ.
ಇಂದು ಬಳ್ಳಾರಿಯ ‘ಕನ್ನಡಪ್ರಭ’ ಪತ್ರಿಕೆಯ ಪ್ರಾದೇಶಿಕ ಪುಟದಲ್ಲಿ ಅವ್ವನ ನಾಟಕದ ವರದಿ ಓದಿ ಮತ್ತಷ್ಟು ಖುಷಿಯಾಯಿತು. ಈ ವಿಷ್ಯವನ್ನು ಅವ್ವನಿಗೆ ಹೇಳಿದಾಗ ಮತ್ತಷ್ಟೂ ಖುಷಿಪಟ್ಟಳು.
”ಏನೋ ನೋಡಪ್ಪಾ…ರಿಟೈರ್ ಆಗೋ ಹೊತ್ನಾಗ ನಾಟಕ ಆಡೋ ಯೋಗ ಬಂದೈತಿ” ಎಂದು ಹೇಳುವಾಗ ಅವ್ವ ಒಳಗೊಳಗೇ ಖುಷಿಪಟ್ಟಿತ್ತು.
ಈ ಪ್ರಯೋಗ ಮಾಡಿಸಿದ ಕೊಟ್ಟೂರು ವಲಯದ ಸೂಪರ್ ವೈಜರ್ ಮಂಗಳಾ ಅವರಿಗೆ ಅಭಿನಂದನೆಗಳು. ಈ ನಾಟಕ ಇನ್ನಷ್ಟು ಪ್ರಯೋಗವಾಗಿ, ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಲಿ..








ಥ್ಯಾಂಕ್ಯೂ..