ಮನು ಗುರುಸ್ವಾಮಿ
ಸದಾ ನಡೆಯುತ್ತಿರುತ್ತೇನೆ
ದ್ವೇಷದಿಂದ ಅಂತರ ಬಯಸಿ
ಇಚ್ಛೆಗಳ ಸಮಯಕೆ ಮಾರಿ
ಸ್ವೇಚ್ಛೆ ಬದುಕ ಕಟ್ಟಿಕೊಳ್ಳಲು !
ಕೆಚ್ಚಿನ ನುಡಿಗಲ್ಲ; ಹಕ್ಕಿಗಳ
ಹಾಡಿಗೆ ಮನ ಸೋಲುತ್ತೇನೆ;
ಹೂಗಳನ್ನು ಮುದ್ದಿಸುತ್ತೇನೆ
ತಂಗಾಳಿಯ ಅಪ್ಪುತ್ತೇನೆ !
ಹರಿಯುವ ನದಿಗಳ ಮೇಲೆ,
ಆವರಿಸಿದ ಮಲೆಗಳ ಮೇಲೆ
ಸುರಿಯುವ ಮಳೆಗಳ ಮೇಲೆ
ಪದ್ಯ ಕಟ್ಟಿ ಹಾಡುತ್ತೇನೆ !
ಹೃದಯ ಬಿಚ್ಚಿ ಮಾತನಾಡಿದರೆ
ಕಿವಿಗೊಟ್ಟು ಕೇಳುತ್ತೇನೆ;
ಹೊಟ್ಟೆಕಿಚ್ಚಿನ ಮಾತುಗಳಿಗೆ
ಕರವೆತ್ತಿ ಮುಗಿದು; ಬಿಳ್ಕೊಡುತ್ತೇನೆ !
ಕೈ ಕೈ ಮೀಲಾಯಿಸಬಹುದು
ನಾನೂ ನೀನೂ,
ಇಬ್ಬರಲ್ಲಿ ಯಾರೇ ಗೆದ್ದರೂ,
ಖುಷಿ ಸಂಚಾರಿ ಭಾವ;
ಈ ಸತ್ಯವ ಅರಿತ್ತಿದ್ದೇನೆ !
ಮನಸ್ತಾಪವಿಲ್ಲದ ಬದುಕಿಲ್ಲ;
ಇಲ್ಲಿ, ಕಲಹವಿಲ್ಲದ ಒಲವಿಲ್ಲ
ಅದಾಗ್ಯೂ,
ಗದ್ದಲವೇ ಇರದ ದಿಕ್ಕಿನತ್ತ
ನನ್ನ ಚಿತ್ತ,
ಸಾಗುತ್ತಿದ್ದೇನೆ; ಕೋಪ,
ತಾಪಗಳಿಂದ ಅಂತರ ಬಯಸಿ
0 ಪ್ರತಿಕ್ರಿಯೆಗಳು