ಜನ ಗಣ ಮನ
–ಅಕ್ಕಿಮಂಗಲ ಮಂಜುನಾಥ
ಜನ ಗಣ ಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯವಿಧಾತ
ರೈತನ ಬಾಳಿನ ಭಾಗ್ಯವು ಖೋತ
ಎಲ್ಲಾ ರಂಗದಿ ಸೋತ
ದುಡಿವನು ಹೆಂಡತಿ ಮಕ್ಕಳ ಸಹಿತ
ಲಾಭವ ಭ್ರಮಿಸುತ ಸತತ
ಅನ್ನುವ ನೀಡುವನೆಂದೇ ಪ್ರಖ್ಯಾತ
ಹಸಿವೆಗೆ ಅವನೇ ಅತ್ತ
ವಾಸ್ತವ ವಿಷಯ ಏನಿದೆ ಗೊತ್ತಾ?
ಸತತವೂ ಇವನು ಪತಿತ.
‘ರೈತನ ಬದುಕು ಬಲು ಬಲು ಚೆಂದ
ಸುಂದರ ಸುಮಧುರ ಸುಖದ ಸುಗಂಧ’
ಸಾಹಿತಿ ಬರೆದ ಪ್ರಬಂಧ
ಪಿ.ಹೆಚ್ಡಿ ಯ ಪದವಿಯ ಪಡೆದ
ಸ್ಕಾಲರ್ ಶಿಪ್ಪನು ತಿಂದ
ವಾಸ್ತವ ವಿಚಾರ ತಿಳಿಸದೆ ಹೋದ
ನೈತಿಕ ಹಕ್ಕನು ಕೊಂದ
ಕೊನೆಗೂ ರೈತನೆ ಬೆಂದ
ನಾಡಿನ ನಾಯಕರ್ಹಾಕುತ ಗಾಳ
ಉರುಳಿಸಿ ಕೊಳುವರು ದಾಳ
ಬೀದಿಗೆ ಬಂದರೆ ಹಾಕಿಸಿ ಕೋಳ
ಹಿಂದೆಯೆ ಬಿಡುವರು ತೋಳ
ಉದ್ಧರಿಸುವೆ ಎನುವರು ಗೆಲ್ಲುವ ವೇಳೆ
ಬೇಯಿಸಿಕೊಳ್ಳಲು ಬೇಳೆ
ಲಾಟಿಯಿಂದಲೆ ಮುರಿವರು ಮೂಳೆ
ತುಪಾಕಿಯಿಂದ ಬಾಳೆ
ಆಳುವ ಅರಸರ ಹೊಟ್ಟೆಗೆ ಕೂಳು
ನೀಡುತ ಆದನೆ ಕೀಳು?
ಬರಿ ಮಾತಿನಲೆ ಬಿಡುತ್ತ ಓಳು
ಮಾಡಿದರಿವನನು ದೂಳು
ಯಾರಿಗೂ ಕಾಣದೆ ಬಡವನ ಬಾಳು?
ತಟ್ಟದೆ ತಮಟೆಗೆ ಗೋಳು ?
ಜನ ಗಣ ಮಂಗಳ ದಾಯಕ ಜಯಹೇ
ಭಾರತ ಭಾಗ್ಯವಿಧಾತ
ದೇಶದ ಸಾಲವ ಹೆಗಲಿಗೆ ಹೊತ್ತ
ತೀರಿಸಲಾಗದೆ ಅತ್ತ
ಬದುಕಲು ಯತ್ನಿಸಿ ಕೊನೆಗೂ ಸೋತ
ನೋಡಿದ ಆಳ ಪ್ರಪಾತ
ನೂಕಿದರೆಲ್ಲರು ಕೇಕೆಯ ಹಾಕುತ
ಕೊನೆಗೂ ಹೊಡೆದನು ಗೋತ.






vastavada sthiti.. chendada kavana…!!!!!!!!!!!!!!!!!!
jaya jaya jaya j…..a….y…..a…..
Bhaaratha bittu yellarigu nijavaada Daatha….