ಉದಯ ಗಾಂವಕರ್
ಕಪುರ್ತಲಾದ ದಾಮೆಯ ರಾಜಾ ಸರ್ ಹರ್ಮನ್ ಸಿಂಗರ ಲಾಹೋರ್ ಮನೆಯಲ್ಲಿ ಚಳುವಳಿಗಾರರ ಸಭೆ ನಡೆಯುತಿತ್ತು. ಆಗ ರಾಜಕುಮಾರಿ ಅಮೃತ ಕೌರ್ ಬಾಗಿಲ ಸಂದಿಯಿಂದ ಮಹಾತ್ಮರನ್ನು ಕಂಡಿದ್ದರು. ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಹಿಂದಿರುಗಿದ ಅಮೃತ್ ಕೌರ್ ಸಾವಿರದೊಂಬೈನೂರಾ ಹತ್ತೊಂಬತ್ತರಲ್ಲಿ ಮತ್ತೆ ಮಹಾತ್ಮರನ್ನು ಭೇಟಿಯಾದರು. ಅರಮನೆಯ ಸುಖವನ್ನು ತ್ಯಜಿಸಿ ಅವರು ಗಾಂಧೀಜಿಯವರನ್ನು ಸೇರಿಕೊಂಡರು. ಹದಿನಾರು ವರ್ಷಗಳವರೆಗೆ ಗಾಂಧೀಜಿಯವರ ಕಾರ್ಯದರ್ಶಿಯಾಗಿ ಕೆಲಸಮಾಡಿದರು.
ತನ್ನಣ್ಣ ಪ್ಯಾರೆಲಾಲರಿಂದ ಗಾಂಧೀ ಕತೆಗಳನ್ನು ಕೇಳಿ ಸ್ಪೂರ್ತಿಗೊಂಡಿದ್ದ ಸುಶೀಲಾ ನಯ್ಯರ್ ದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಗಾಂಧೀಜಿಯವರ ವಾರ್ಧಾ ಆಶ್ರಮವನ್ನು ಸೇರಿದರು ಮತ್ತು ಬಡವರಿಗೆ, ಹಳ್ಳಿಗರಿಗೆ ವೈದ್ಯಕೀಯ ಸೇವೆಯನ್ನು ನೀಡುವ ತನ್ನ ಬದುಕಿನ ಕನಸನ್ನು ನನಸಾಗಿಸಿಕೊಂಡರು.
ಕುಷ್ಠರೋಗಿಗಳಿಗೆ ಕಡ್ಡಾಯ ಸಂತಾನಹರಣ ಮಾಡುವ ಮಸೂದೆಯನ್ನು ಮಂಡಿಸಲು ಸಿಂಧ್ ಸರ್ಕಾರ ಮುಂದಾಗಿತ್ತು. ಸುಶೀಲಾರವರು ಕುಷ್ಠರೋಗವು ತೀವ್ರ ಸೋಂಕು ಜಾಢ್ಯವಲ್ಲವೆಂದೂ ಮತ್ತು ಅದು ಅನುವಂಶೀಯವಾಗಿ ಹರಡುವುದಿಲ್ಲವೆಂದೂ ಗಾಂಧೀಜಿಯವರಿಗೆ ಮನವರಿಕೆ ಮಾಡಿಕೊಟ್ಟರು. ಗಾಂಧೀಜಿಯವರು ಆ ಮಸೂದೆ ಅಸ್ವೀಕೃತವಾಗುವಂತೆ ನೋಡಿಕೊಂಡರು.
ರಾಜಕುಮಾರಿ ಅಮೃತಾ ಕೌರ್ ದೇಶದ ಮೊದಲ ಆರೋಗ್ಯ ಸಚಿವೆಯಾದರು. ಅತ್ಯುನ್ನತ ಗುಣಮಟ್ಟದ ಏಮ್ಸ್ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿ, ಸ್ನಾತ್ತಕೋತ್ತರ ವಿದ್ಯಾಭ್ಯಾಸವನ್ನು ದೇಶದಲ್ಲೇ ಮುಂದುವರಿಸುವ ಅವಕಾಶವನ್ನು ಒದಗಿಸಿದರು.
ಅಮೃತಾರವರ ನಂತರ ಸುಶೀಲಾರವರು ಆರೋಗ್ಯ ಸಚಿವೆಯಾದರು. ಅವರು ವಾರ್ಧಾದಲ್ಲಿ ಸ್ಥಾಪಿಸಿದ್ದ ಪುಟ್ಟ ಆಸ್ಪತ್ರೆ ಕಸ್ತೂರ್ಬಾ ವೈದ್ಯಕೀಯ ಕೇಂದ್ರವಾಯ್ತು. ಹಳ್ಳಿ-ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅವರು ದೇಶದ ಡಾಕ್ಟರ್ ಎನಿಸಿಕೊಂಡರು.
ಮಕ್ಕಳಿಗಾಗಿ ಮಹಾತ್ಮ
0 ಪ್ರತಿಕ್ರಿಯೆಗಳು