ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವು ಮಾಕೊಂಡ ಹೊಸ ಕವಿತೆ- ಕರುಣೆ ಮತ್ತು ಅವಳು…

ದೇವು ಮಾಕೊಂಡ

ಅರಳಿ ವೃಕ್ಷದ ಕೆಳಗೆ
ಯುವರಾಜ ಧ್ಯಾನಕ್ಕೆಂದು ಕುಳಿತಾಗ
ದಿನಗಳುರುಳಿ ಹೊಟ್ಟೆ ಹಸಿದು ಪರಿತಪಿಸುವಾಗ
ಅವಳ ಶಿವನ ಎಡೆ ಎಂಜಲು ಆಗಿದ್ದನ್ನು
ನನ್ನ ಅಜ್ಜ ಕಥೆ ಹೇಳಿದ್ದನು

ಅಂವ ಯುವರಾಜ ಜ್ಞಾನ ಭಿಕ್ಷುಕ, (ಯಾಚಕ)
ಗಿಡದ ಕೆಳಗೆ
ಎಡಕ್ಕೆ ಭೀಕ್ಷಾಪಾತ್ರೆ, ಬಲಕ್ಕೆ ಜ್ಞಾನದ ಕೋವಿ
ಹೊಳೆವ ಮುಖ, ಪ್ರೇಮಸಖ
ಚಿಗುರು ಮರದ ಕೆಳಗೆ
ಮಹಾಮನೆ, ಪ್ರಜಾರಾಜ್ಯ, ಪ್ರೇಮ, ಕಾಮ ಮನದಾಚೆ ಬಿಟ್ಟು
ಶೋಕಕ್ಕೆ ಶೋಕಿಸತೊಡಗಿದನು
ಕ್ರಾಂತಿಯ ಸೆಳೆತಕ್ಕಂಜಿ

ಅವಳದು ಶಿವನ ಹರಕೆಯ ಫಲ
ಮೃಷ್ಟಾನ್ನ ಎಡೆ ತಲೆಯ ಮೇಲೆ ಕಂಕುಳಲ್ಲಿ ಪ್ರೇಮಪುತ್ರ ಹೊತ್ತುಕೊಂಡು
ಭಕ್ತಿಯಿಂದ ಬರಿಗಾಲಲ್ಲಿ ರೇಶಿಮೆ ಸೀರೆ, ಹಸಿರು ಬಳೆ ದೃಷ್ಟಿಬೊಟ್ಟನಿಟ್ಟು
ನಾರಿ ವಾರಿಯೇರಿ ಬರುತ್ತಿದ್ದಳು ಕುರಿಹಿಂಡು ದೊಡ್ಡಿ ಹೊಗಸಿ
ನೋಡುವುದಕ್ಕೆ ಅವಳು ಶಿವನ ಮಗಳು
ನಾಗರ ಹೆಡೆಯ ತುರುಬಿನಂತವಳು
ಸೊಂಟ ಡಾಬು, ಬೆಂಡೋಲಿ ಜಡೆಗೆ ಅಡವಿ ಹೂ ಮುಡಿದಿದಾಳೆ.

ಗಿಡದ ಕೆಳಗೆ ಕೂತಿದ್ದ ಅವನು
ಹಸಿದಿದ್ದ, ನರುಳುತಿದ್ದ ಬಳಲಿ ಬೆಂಡಾಗಿ ನೋಡುತ್ತಿದ್ದ
ಅವಳು ಕರುಣೆ ಉಕ್ಕಿ ಮುಂದೆ ಹೋಗಿ
ಕೇಳಿದಳು
‘ಹಸಿವಾಗಿದೆ ಏನಯ್ಯ’ ಅಂದಳು
ತಿನ್ನು ಹಸಿವನ್ನು ಹಿಂಗಿಸಿಕೊಳ್ಳು
ಸಂತಸವಾಗಿರು’
ಅವನಿಗೆ ಮೊದಲ ಕನಿಕರ ತೋರಿದಳು
ಕಂಕುಳಲ್ಲಿದ್ದ ಮಗನ ತೋರಿ ಅಕ್ಕರೆಯಿಂದ ಹೇಳುತ್ತಾಳೆ
ಈತ
‘ಶಿವಶಂಭೋಶಂಕರ’

‍ಲೇಖಕರು Admin

29 January, 2022

2 Comments

  1. sanganagouda

    kavite sakkattagide….

  2. sanganagouda

    ಹರಿಹರನ ಗಿರಿಜಾ ಕಲ್ಯಾಣ ಓದಿಂತಾಯ್ತು….ಜನಪದ ಕಾವ್ಯ ಅದರಲ್ಲಿ ಹಾಲುಮತ ಕಾವ್ಯ, ಮಂಟೆಸ್ವಾಮಿ, ಮಾದಯ್ಯ, ಶಿವ ಪುರಾಣದ ಲಯ ಈ ಕವಿತೆಯಲ್ಲಿ ಬಂದಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading