ದೇವರಿಗೂ ಡಯಾಬಿಟೀಸು..

 

 

 

 

ಮಹೇಂದ್ರ ಎಸ್ ತೆಲಗರಹಳ್ಳಿ

 

 

 

ದಿನದ ಮೂರು ಹೊತ್ತೂ ಎಂಟಾಣಿಯ
ಕೆಲಸವನ್ನೂ ಮಾಡದೇ ಗುಡಿಯೊಳಗೆ
ಗೊರಕೆ ಹೊಡೆಯುತ್ತಾ ಕಾಲಹರಣ
ಮಾಡಿಕೊಂಡು  ಕಾಸು ಎಣಿಸುವ
ಸೋಂಬೇರಿ ದೇವರಿಗೆ ಈ ನಡುವೆ ಡಯಾಬಿಟೀಸು.

ಹುಟ್ಟಿಸಿದ ಮಕ್ಕಳು ಉಣ ಬಡಿಸುವ
ರಸಾಯನ, ಪೊಂಗಲ್ಲು, ಪಂಚಾಮೃತದಂತ
ಸಿಹಿ ಪದಾರ್ಥಗಳು
ಚೆರ್ಬಿ ತುಂಬಿದ ಕುರಿ, ಕೋಳಿ ಬಾಡಿನ
ಬೊಜ್ಜಿನ ಭಕ್ಷ್ಯ ಭೋಜನಗಳು
ಚಿತ್ರಾನ್ನ, ಪುಳಿಯೋಗರೆಯಂತ
ಕಾರ್ಬೋಹೈಡ್ರೇಟಿನ ರುಚಿ ತಿನಿಸುಗಳನ್ನು
ತಿಂದು-ತಿಂದು ಡಯಾಬಿಟೀಸಿಗೆ ಬಲಿಯಾಗಿದ್ದಾನೆ ದೇವರು.

ಮೊದಲೆಲ್ಲಾ ಊರ ಜಾತ್ರೆಗಳಿಗೆ
ಲೋಕ ಕಲ್ಯಾಣಗಳಿಗೆ ಭೇಟಿ ಇತ್ತು
ಬೆವರಿಳಿಸುತ್ತಿದ್ದವ ಈ ನಡುವೆ
ಟ್ರಾಫಿಕ್ ಜಂಜಾಟದಿಂದ ಗರ್ಭ ಗುಡಿಯಿಂದ
ಹೊರಕ್ಕೆ ಹೋಗಿ ವಾಕಿಂಗ್ ಮಾಡುವುದನ್ನೂ
ಸಹಾ ಬಿಟ್ಟುಬಿಟ್ಟಿದ್ದಾನೆ.
ಹಂಗೂ ನಾಲ್ಕು ಹೆಜ್ಜೆ ಕಾಲಿಡೋಣವೆಂದರೆ
ಸಿ.ಸಿ.ಟಿ.ವಿ. ಮತ್ತೂ ಸುದ್ದಿ ವಾಹಿನಿಗಳ ದಿಗಿಲು.

ರೋಗ ತೀವ್ರತೆ ಉಲ್ಬಣಗೊಂಡು
ಕಣ್ಣಿಗೆ ಪೊರೆ ಬಂದು
ತನ್ನ ಎದುರಿಗೆ ಜರುಗುತ್ತಿರುವ
ಸುಲಿಗೆ, ವಂಚನೆ, ಅತ್ಯಾಚಾರ, ಆತ್ಮಹತ್ಯೆಗಳನ್ನೂ
ಕಾಣದಷ್ಟು ದೃಷ್ಟಿ ಮಂದವಾಗಿಬಿಟ್ಟಿದೆ.

ಧರ್ಮಾಂಧರಿಂದ
ಚಾಕು, ಚೂರಿ, ಗುಂಡು, ಬಾಂಬು ತಗುಲಿ
ರಕ್ತಸ್ರಾವವಾಗಿ ಗಾಯ ಮಾಯದೇ ಗಬ್ಬೆದ್ದ ವಾಸನೆಯನ್ನು ಮಚ್ಚಿಡಲು ಧೂಪ, ಸಾಂಬ್ರಾಣಿ
ಹೊಗೆ ಹಾಕಿಸಿಕೊಂಡು
ಯಾವುದೇ ಮನುಕುಲದ ಆಂಟಿಬಯೋಟಿಕ್ ಗುಳಿಗೆಗಳು ಕೆಲಸ ಮಾಡದಂತಹ
ಹಂತಕ್ಕೆ ಬಂದು ಒದ್ದಾಡುತ್ತಿದ್ದಾನೆ.

ಅಯ್ಯೋ ಪಾಪ, ದೇವರಿಗೂ ವಯಸ್ಸಾಗುತ್ತಿದೆ
ಹೀಗೆ ಬಿಟ್ಟರೆ ದೇವರೂ ಕೂಡ ದೇವರ ಪಾದ
ಸೇರಿಕೊಳ್ಳುವುದು ಗ್ಯಾರಂಟಿ.
ಇವನಿಗೂ ಚಿಕಿತ್ಸೆ ಮಾಡಿಸಬೇಕು
ನನ್ನಂತ ಸಾಮಾನ್ಯನಂತೆ ಅರೆ ಹೊಟ್ಟೆ ಹಾಕಿ ಪಥ್ಯವಿಡಬೇಕು

ಅಕ್ಕಿಯ ಶ್ರೀಮಂತಿಕೆಯಿಂದ
ರಾಗಿ,ಜೋಳದ ಸಮಾನತೆಯೆಡಗೆ ಕರೆದೊಯ್ದು
‘ರಾಗಿ ತಿನ್ನೋನಿಗೆ ರೋಗಾನೆ ಇಲ್ಲ’
ಅನ್ನುವ ಸಾಲನ್ನು ಬಾಯಿ ಪಾಠ ಮಾಡಿಸಬೇಕು
ಸಸ್ಯಾಹಾರದ ಡಯಟ್ಟಿನೆಡೆಗೆ ಬದಲಾಯಿಸಿ
ದಿನಂಪ್ರತಿ ಜಬಾಬ್ದಾರಿಯ ಇನ್ಸುಲಿನ್ ಇಂಜೆಕ್ಷನ್ ಹಾಕಿಸಬೇಕು.

ದೃಷ್ಟಿ ದೋಷ ಸರಿ ಮಾಡಿ
ಚಂದದೊಂದು ಚಶ್ಮಾ ಕೊಡಿಸಿ
ಕಿವಿ ಹಿಂಡಿ
ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು
ಕ್ರಿಯಾಶೀಲನಾಗಿ ಊರ ಕಾಯುವಂತೆ
ಗೂರ್ಖಾ ಕೆಲಸಕ್ಕೆ  ನೇಮಕ ಮಾಡಬೇಕು.

ಹೇಗಾದರೂ ಸರಿಯೇ
ದೇವರಿಗೆ ಆರೈಕೆ ಮಾಡಿ ಗುಣಪಡಿಸಿ
ಸಾವನ್ನೂ ದಸ್ತಗಿರಿಗೊಳಿಸಿ
ಪುರಾಣಗಳು ಪುಂಗುವ ಹಾಗೆ
ಅವನನ್ನು ಚಿರಂಜೀವಿಯಾಗಿಸಬೇಕು
ಅವನನ್ನೇ ತಿನ್ನುತ್ತಾ ಆವಾಸ ಮಾಡಿಕೊಂಡಿರುವ
ಪರೋಪಜೀವಿಗಳಿಗೆಲ್ಲಾ ಚುರುಕು ಮುಟ್ಟಿಸಬೇಕು.

‍ಲೇಖಕರು avadhi

December 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. veda

    ಅವನನ್ನೇ ತಿನ್ನುತ್ತಾ ಆವಾಸ ಮಾಡಿಕೊಂಡಿರುವ ಪರೋಪಜೀವಿಗಳಿಗೆಲ್ಲಾ ಚುರುಕು ಮುಟ್ಟಿಸಬೇಕು–HOWDU HOWDU HOWDU. CHURUKU MUTTISUVA KAVANA

    ಪ್ರತಿಕ್ರಿಯೆ
  2. Lalitha siddabasavayya

    ವಾಹ್ , ನಿಮ್ಮ ಕಲ್ಪನೆ ಬಹಳ ಚೆನ್ನಾಗಿದೆ ಮಹೇಂದ್ರ, ನಿಮ್ಮ ಆಶಯದಂತೆ ದೇವರಿಗೆ ಇನ್ಸುಲಿನ್ ಚುಚ್ಚಿಸಿ ಅವನ ಕಾಯಿಲಾ ಇಲಾಜಾಗೊ ದಿನ ಬರಲಿ, 🙂

    ಪ್ರತಿಕ್ರಿಯೆ
  3. Dr.Mahendra

    ಪ್ರತಿಕ್ರಿಯಿಸಿದ ಎಲ್ಲಾ ಹಿರಿಯರಿಗೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: