ಉಳಿದದ್ದು ದಂಡೆ ವಿರಹ

ನಾಗರಾಜ ಹರಪನಹಳ್ಳಿ
ಆಕೆ ತಣ್ಣಗೆ ಉಸಿರಿದಳು
ಪ್ರಶಾಂತ ದಂಡೆಯಲಿ ನಡೆಯುತ್ತಾ…
ದೂರವಾಗಲೂ ಕಾರಣ ಹುಡುಕುತ್ತಿದ್ದೇವೆ
ಇಬ್ಬರೂ
ಪ್ರೀತಿ ಕಡಿಮೆಯಾಗಿಲ್ಲ
ಪ್ರೀತಿಯ ಮೂರನೇ ಹಂತದಲ್ಲಿದ್ದೇವೆ
ತಪ್ಪಿಸಿಕೊಳ್ಳಲು
ಸಾಧ್ಯವಾಗುತ್ತಿಲ್ಲ
ಅಸ್ತಿತ್ವದ ಭಯ
ಕ್ಯಾರಿಯರ್ ಮುಂದೆ
ಎಲ್ಲವೂ ನಗಣ್ಯ ಅವಂಗೆ :
ದಂಡೆಯಲ್ಲಿ ಸ್ಥಿತಪ್ರಜ್ಞಳಂತೆ ಕುಳಿತಳು
ಹೆರಳು ಬಿಚ್ಚಿಕಟ್ಟಿದಳು
ತುಸು ಹೆಚ್ಚೇ ಹಾಕಿದ ತೈಲ
ಒಡಲುರಿಯ ತಂಪಾಗಿಸಿತ್ತು
ಉಕ್ಕುವ ಯೌವ್ವನವ ಕಟ್ಟಿಹಾಕುತ್ತಾ
ಕುಳಿತಳು; ದಂಡೆ ನಿಟ್ಟುಸಿರುಬಿಟ್ಟಿತ್ತು
ಅಷ್ಟೇನೂ ಉಲ್ಲಾಸಿತಳಾಗಿರಲಿಲ್ಲ
ದುಃಖಿಯೂ ಆಗಿರಲಿಲ್ಲ
ಸಾವಿಗೆ ಉತ್ತರ ಹುಡುಕುತ್ತಿದ್ದ ಗೌತಮ
ಸುಳಿದುಹೋದ
ಅವಳ ಮೊಗದಲ್ಲಿ…
ತನ್ನ ಪಾಡಿಗೆ ತಾನು ಓಡುವ
ಕಾರಲ್ಲಿ ತಣ್ಣಗೆ ಉಸುರಿದಳು
‘ನಾವು ಸತ್ತುಹೋಗುತ್ತೇವಲ್ಲ ಒಂದಿನಾ’
ಹತ್ತಿರವಿದ್ದು ಎಷ್ಟು ಅಂತರ ಕಾಯ್ದುಕೊಂಡಿದ್ದೇವೆ, ನಮಗೆ ನಾವೇ
ಪ್ರಾಮಾಣಿಕರಾಗಿದ್ದೇವೆ
ಆಡುವವರ ನೋಡುವವರ ಕಣ್ಣಿಗೆ ಏನು
ಗೊತ್ತು ; ಒಳಗುಟ್ಟು ??
ಆಡಿಕೊಂಡದ್ದೇ ಬಂತು
ಉಳಿದದ್ದು ದಂಡೆ ವಿರಹ
ಸಿಹಿನದಿಯು ಕಡಲು ಬೆರೆತರು
ಅಲೆಯಲ್ಲಿ ಉಕ್ಕಿದ್ದು ಉಪ್ಪುನೀರು





Koneya saalugalu ishta aadavu. Liked the poem.
Nice poem….
Haha!Asthithwada bhaya.. Varthamaanakke thakkudaagide..we can build many bondages but keeping well is awe..so the poem reflects present minds..good narration..