ನಾ -ಪತ್ತೆ
ಸಿಂಧುಚಂದ್ರ, ಶಿರಸಿ
ಏನಾದರೂ ಬರೆ ಎಂದು ದುಂಬಾಲು
ಬಿದ್ದಿದ್ದ ಪೆನ್ನು
ನಿನ್ನೆಯಿಂದ ಕಾಣುತ್ತಿಲ್ಲ…
ಕಸಗುಡಿಸಿ ನೆಲ ಒರೆಸಿ
ಬಟ್ಟೆ ಒಗೆದು ಮಡಚಿಟ್ಟರೂ
ಅದರ ಸುಳಿವಿಲ್ಲ.-
ಅಡಿಗೆ ಮಾಡಬೇಕೆಂದೇ ಇಲ್ಲ
ಸುಳ್ಳೇಕೆ ಹೇಳಲಿ?
ಸೇಬು, ಮೂಸಂಬಿ,ಬಿಸ್ಕೆಟ್
ಕಡೆಗೆ ಮ್ಯಾಗಿಯಾದರೂ ಆದೀತು
ಆದರೂ,…
ಪೆನ್ ಸಿಗುವವರೆಗೆಂದು
ಕುಕ್ಕರ್ ಕೂಗಿಸಿದೆ..ಬೇಳೆ
ಬೇಯಿಸಿ ಹುಳ ತೆಗೆದ
ಹೂ
ಕೋಸು ಬಿಡಿಸಿ ಕಾಯಿ
ಕುತ್ತುಂಬರಿ ತೇಲಿಸಿ ಪಾತ್ರೆ
ಜೋಡಿಸಿದರೂ ……
ಸಿಗಲಿಲ್ಲ
ಅಂಗಳಕ್ಕಿಳಿದು ಒಣ ಎಲೆಯ
ಗುಡಿಸಿ ಹಸಿರೆಲೆಯ ಸವರಿ
ಇನ್ನೆಷ್ಟು ಪಾರಿಜಾತ ಉದುರೀತು
ಮುಖವೆತ್ತಿ ಲೆಕ್ಕ ಹಾಕಿ
ಬಳ್ಳಿಗೊಂದು ಹಗ್ಗ ಬಿಗಿದು
ಕಳೆಯಲ್ಲದ ಕಳೆ ಕಂಡು
ಹಣೆ ಸಿಂಡರಿಸಿ ಹೊರಜಗುಲಿಗೆ
ಒರಗಿದರೂ….
ಸಿಗಲಿಲ್ಲ

ಉಂಡುಟ್ಟು ಹಾಸಿಗೆಯಲ್ಲಿದ್ದ
ಪಾಕಿಸ್ತಾನಿಯೊಬ್ಬಳ ಕವಿತೆಯ
ಕರಗಿಸಿಕೊಂಡು ಎದ್ದರೂ…….
ಸಿಗಲಿಲ್ಲ
ಟಿವಿ,ರಿಮೋಟ್,ಮೊಬೈಲ್,
ಲ್ಯಾಪ್ ಟಾಪ್ ತಡವಿದರೂ….
ಸಿಗಲಿಲ್ಲ
ದುಂಬಾಲು ಬಿದ್ದಿದ್ದಾದರೂ ಏಕೆ
ಬರೆ ಎಂದು ಕಾಡಿದ್ದೇಕೆ
ಮೈದಡವಲು ಬಂದರೆ ಅಡಗಿದ್ದೇಕೆ
ಯಾವುದಕ್ಕೂ ಉತ್ತರವಿಲ್ಲ …..
ಸಿಗಲಿಲ್ಲ
ಬಡ್ಡಿಮನ್ನಾ,ಸಾಲಮನ್ನಾ,ಬೆಳೆವಿಮಾ,
ನೆರೆಪರಿಹಾರದ ಅಂಕೆಯೊಂದಿಗೆ
ಮೋದಿಸ್ಕೀಮುಗಳ ಲೆಕ್ಕವನ್ನೂ
ಬರೆಯಬೇಕು …
ಆಫೀಸಿನಲ್ಲಿ ಛಸ್ಮ ಏರಿಸುತ್ತಾ
ತಡಕಾಡಿದರೆ ಸಿಕ್ಕಿತಲ್ಲ ಪೆನ್ನು
ನನ್ನ ಹಲ್ಲಿನ ಗುರುತಿನೊಂದಿಗೆ






ಎಷ್ಟೊಳ್ಳೆಯ ಕವಿತೆ..! ನಾನಾರ್ಥ ನಿಗೂಢ ರಮ್ಯ..! ಅಭಿನಂದನೆಗಳು ಸಿಂಧುಚಂದ್ರ ಜೀ.. ಒಳ್ಳೆಯ ಕವಿತೆ ಓದಿಸಿದ್ದಕ್ಕೆ…
ಒಳ್ಳೆಯ ಕವಿತೆ… ವಾಸ್ತವಿಕತೆಯನ್ನು ಪರೋಕ್ಷವಾಗಿ ಬಿಂಬಿಸುತ್ತ ಎಷ್ಟು ಚೆಂದ ಹೆಣೆದಿದ್ದೀರಿ…. !
ಇಷ್ಟ ಆಯ್ತು ಸಿಂಧೂ
ಚಂದ ಬಂದಿದೆ..
— ರಾಜು ಹೆಗಡೆ
ತುಂಬಾ ಇಷ್ಟವಾಯಿತು
eshtu chandada kavite bahala eshtavaytu sinduravre
ಚಂದಿದ್ದು
ಧನ್ಯವಾದ ಓದುಗರ ಪ್ರೀತಿಗೆ
ನೈಸ್