ದಾದಾಪೀರ್ ಜೈಮನ್ ಕವಿತೆ- ಅರಮನೆ…

ದಾದಾಪೀರ್ ಜೈಮನ್

ರಾಜರು ಕಟ್ಟಿ ಬಿಟ್ಟು ಹೋದ
ಅರಮನೆಗಳಲ್ಲೀಗ
ಸಾಮಾನ್ಯ ಪ್ರಜೆಗಳು ಸುಳಿದಾಡುವಾಗ
ಅಂದಿಂದಿಗೂ ಅವುಗಳ ಮೇಲೆ ಹಿಕ್ಕೆ ಹಾಕುತ್ತಾ
ಹಾರಾಡಿಕೊಂಡಿರುವ ಪಾರಿವಾಳ ಪಕ್ಷಿ ಚಿಟ್ಟೆಗಳೆಲ್ಲಾ
ಪಿಸುಗುಟ್ಟಿಕೊಳ್ಳುತ್ತಾ ಅಣಕವಾಡುತ್ತವೆ.

ಭಾನುವಾರದ ಬೆಳಗುಗಳಲ್ಲಿ
ರಜೆಗೆ ಪೇಟೆಗೆ ಬಂದ ತವರ ಮಕ್ಕಳ ಹಿಂಡು ಕಟ್ಟಿ
ಟಿಪ್ಪುವಿನದೊ ಒಡೆಯರದೋ ಮತ್ಯಾವ ಬಹಾದ್ದೂರನ
ಬೇಸಿಗೆ ಅರಮನೆಗಳ ಗೇಟು ತಲುಪಿದಾಗ
ಅಲ್ಲಿನ ಕಾವಲುಗಾರ
ಟಿಕೆಟ್ ಟಿಕೆಟ್
ಎಂದು ಗುಟುರುಹಾಕುತ್ತಾನೆ.

ಅರಮನೆಯ ನೂರು ಕಂಬಗಳು
ಬಾಗಿಲು ಕಿಟಕಿ ಕಮಾನುಗಳು
ಕಂಬಗಳ ಮೇಲಿನ ಎಂಟು ದಳದ ಕಮಲಗಳು
ಅಲ್ಲೇ ಕಾಣುವ ಈಜುಗೊಳ
ಗೋಡೆಚಿತ್ರದ ಕಲಾಕೃತಿ ವಾಸ್ತುಶಿಲ್ಪಗಳು
ಎಲ್ಲವನೂ ಬೆರಗುಗಣ್ಣುಗಳಲ್ಲಿ ತುಂಬಿಕೊಂಡು
ಸಿರಿತನಕ್ಕೊಂದು ಸಲಾಂ ಹೊಡೆದು
ರಾಜರ ಕೊಡುಗೆಗಳನ್ನು ಕೊಂಡಾಡಿ
ಪರಾಕ್ರಮ ಆಕ್ರಮಣಗಳ ನಿಕಷಕ್ಕೊಡ್ಡಿ
ದರ್ಬಾರುಗಳಲ್ಲಿ ನಡೆದಾಡಿ
ತಾನೂ ಒಂದು ಅರಮನೆಯಂಥ ಮನೆಮಾಡುವ ಕನಸು ಕಟ್ಟಿ
ಅಲ್ಲೇ ಹಿತ್ತಲ ಪಕ್ಕದ ತೋಟದಲ್ಲಿರುವ
ರಾಜನ ಸಮಾಧಿಯ ಮುಂದೆ
ಒಂದು ಘನ ಮೌನ

ಆ ಮೌನವ ತಡವಲದೇನೋ ವ್ಯಾಕುಲತೆ  
ಸುತ್ತ ಸುಳಿಯುವ ಗಾಳಿ ಬೆಳಕುಗಳ
ಒಳಗೆಳೆದುಕೊಳ್ಳುತ್ತಾ  
ಅಲ್ಲೇ ಮತ್ಯಾರನ್ನೋ ಕರೆದು
‘ಒಂದು ಫೋಟೋ ತೆಕ್ಕೊಡಿ’
ಎಂದು ವಿನಂತಿಸಿ
ಬೆನ್ನಹಿನ್ನಲೆಗೊಂದೊಳ್ಳೆ ಜಾಗ ಹುಡುಕಿ
ಇಷ್ಟದ ಭಂಗಿ ಧರಿಸಿ
ಆವಾಹಿಸಿಕೊಂಡೊಂದು ಮುಗುಳ್ನಗೆ
ತಡೆಹಿಡಿದು ಮತ್ತೊಂದು ಕ್ಷಣ
ಬಿಟ್ಟರೆ ಹಾರಿ ಹೋಗುವ ಜೀವದಂತೆ
ನಿಲ್ಲಿಸಿ
ನಿಂತು
ಕಾಯುವಾಗ…

ದಕ್ಕುವ ಖಾಲಿತನದಲ್ಲಿ
ನೆನಪು ಇತಿಹಾಸ ಭವಿಷ್ಯ ವರ್ತಮಾನ ನಿರರ್ಥಕತೆ
ಎಲ್ಲವೂ ಕಲಕಿ ಆಗುವ ಜ್ಞಾನೋದಯದ
ಅವ್ಯಕ್ತ ಫೆಟಿಷ್ ಸಾಕಾರಗೊಳ್ಳುವ ಹೊತ್ತು

ಆಗಲೇ
ಕ್ಲಿಕ್ ಕ್ಲಿಕ್ ಕ್ಲಿಕ್
ಸದ್ದು ಮುಗಿಸಿ
ಅರಮನೆ ತನ್ನ ಹಳೆಯ ಗಾಂಭೀರ್ಯದ
ಮುದ್ರೆ ಒತ್ತಿಕೊಂಡು
ಮಗ್ಗುಲು ಬದಲಿಸಿ
ನಿದ್ದೆ ಹೋಗುತ್ತದೆ!

‍ಲೇಖಕರು avadhi

March 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: