ದರ್ಶನ್ ಜಯಣ್ಣ
1
ತುಂಬಾ ದಿನಗಳ ನಂತರ amazon.com ನಲ್ಲಿ ಮುಳುಗಿದ್ದೆ. ಅಲ್ಲಿ ಸಿಕ್ಕುವ ಅಸಂಖ್ಯ ಪುಸ್ತಕಗಳು ಮತ್ತು ಈಗಾಗಲೇ ಕೊಂಡು ಓದಿದವರ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳು ನನ್ನ ಬಿಡುವಿನ ಹಲವು ಗಂಟೆಗಳನ್ನು ಸುಲಭವಾಗಿ ನುಂಗಿ ಹಾಕುತ್ತವೆ. ಪ್ರತೀ ಬಾರಿಯೂ ನಾನು ಹೆಚ್ಚು ಶ್ರೀಮಂತನಾಗುತ್ತಾ ಹೆಚ್ಚು informed ಕೂಡ ಆಗುತ್ತೇನೆ.
ಆದರೆ ಈ ಬಾರಿ ಹಾಗಾಗಲಿಲ್ಲ! ನನ್ನ wish list ಅನ್ನು ತೆರೆದು ನೋಡುತ್ತಿರುವಾಗಲೇ ಅಲ್ಲಿದ್ದ ಸರ್ಜಿಕಲ್ ಗ್ಲೋವ್ಸ್ ಗಳು, ಅಡಲ್ಟ್ ಡೈಪರ್ ಗಳು, ರಿಯಾಯಿತಿ ದರದಲ್ಲಿ ನಾನು ಅಪ್ಪನಿಗಾಗಿ ಕೊಳ್ಳುತ್ತಿದ್ದ ಕೆಲವು ಪದಾರ್ಥಗಳು ಕಣ್ಣಿಗೆ ಬಿದ್ದವು. ಅವು ಈಗ ಬೇಕಿಲ್ಲ! they need not have to be in my wish list now ಅನ್ನಿಸಿತು. ಎಲ್ಲವನ್ನು delete ಮಾಡಿದೆ. ಯಾಕೋ ಹೊಟ್ಟೆಯಲ್ಲೆಲ್ಲ ಸಂಕಟ ಶುರುವಾಯಿತು. ಏನೋ ಕಳೆದುಕೊಂಡ ಭಾವ ! ಒಮ್ಮೆಗೆ ಖಾಲಿಯಾದ ಒಡಲ ಯಾತನೆ.
ತಂತ್ರಜ್ಞಾನದಲ್ಲಿ undo option ಇದೆ. ಒಂದು ಕ್ಷಣ ಎಲ್ಲವನ್ನ undo ಮಾಡಿಬಿಡಲೇ ಅನ್ನಿಸಿತು. ಆದರೆ ಆಮೇಲೆ? ಹೀಗೆ ಅಪ್ಪನನ್ನು Undo ಮಾಡಬಹುದಾಗಿದ್ದಿದ್ದರೆ ಎಂದು ಯೋಚಿಸಿದೆ! ಸಾವಿಲ್ಲದ ಮನೆಯ ಸಾಸಿವೆಯ ಕಥೆ ನೆನಪಾಯಿತು. ಗೌತಮ ನೆನಪಾದ. ಅರ್ಧರಾತ್ರಿಯಲ್ಲಿ ಅರಮನೆಯನ್ನು ಬಿಟ್ಟು ಬಂದವನು ಆತ, ಮನುಕುಲಕ್ಕೆ ಬೆಳಕ ತಂದವನು. ಹೀಗೆ ಏನೇನೋ ನೆನಪಾಯಿತು. ನೆನಪೆಂದರೆ ಮರೆವಿನೊಟ್ಟಿಗೆ ಮನಸ್ಸು ನಡೆಸುವ ನಿರಂತರ ಹೋರಾಟ ಎಂದು ಎಲ್ಲೋ ಓದಿದ್ದು ನೆನಪಾಯಿತು.
ಮರೆವೆಯ ಕತ್ತಲಲ್ಲಿ ನೆನಪೇ ಬೆಳಕು ಅಲ್ಲವೇ? ಅಪ್ಪನಿಗೆ ಆ ಬೆಳಕು ಸಾಯುವ ಕೆಲವು ವರ್ಷಗಳ ಮುಂಚೆಯೇ ಇಲ್ಲದಾಗಿತ್ತು! ನನ್ನ ನೆನಪು ಎಲ್ಲಿಯವರೆಗೆ ? ಹೃದಯ ದಸಕ್ ಎಂದಿತು. ವೈದ್ಯರ ಮತ್ತು ಸಂಶೋಧನೆಗಳ ಪ್ರಕಾರ Parkinson, dementia (ಮರೆಗುಳಿತನೆ) ಮತ್ತು Alzheimer ತರಹದ ಖಾಯಿಲೆಗಳು ಅನುವಂಶೀಯವೂ ಇರಬಹುದಂತೆ, ಅಯ್ಯೋ ನನಗೂ ಬಂದರೆ ಏನು ಮಾಡುವುದು?
ಕಳೆದುಕೊಂಡವರನ್ನು ಸ್ತುತಿಸುವುದಿರಲಿ ಇದ್ದವರನ್ನು ಮರೆತುಬಿಡುವ ಈ ಖಾಯಿಲೆಗಳಿಗೆ ಎಂದು ಕೊನೆ, ಹೀಗೆ, ಏನೇನನ್ನೋ ಯೋಚಿಸುತ್ತಿದ್ದೆ. ಮರುಕ್ಷಣ ‘Its a possibility, like any other’ ಅನ್ನಿಸಿತು. ಅದರ ಜೊತೆಗೇ ‘ಬರಲಿರುವ ನಾಳೆಗಳ ನಂಬಿ ಇಂದಿಗೆ ಶರಣಾಗುವುದಷ್ಟೇ ನಮ್ಮ ಕೆಲಸ’ ಎಂಬ ನನ್ನದೇ ಪದ್ಯದ ಸಾಲುಗಳು ನನ್ನ ಎದೆಯ ನೋವಿಗೆ ಮುಲಾಮು ಹಚ್ಚಲು ನಿಂತವು.
0 ಪ್ರತಿಕ್ರಿಯೆಗಳು