ಗುರುಪ್ರಸಾದ್ ಕಾಗಿನೆಲೆ
ಉಸಿರಾಡಲಾರೆ ಎಂದು ನಲ್ವತ್ತರ ಯಾವುದೇ ಕಾಯಿಲೆಯಿಲ್ಲದ ಮಧ್ಯವಯಸ್ಕ ಬಂದಾಗ ಆತನಿಗೆ ಕರೋನಾ ಪರೀಕ್ಷೆ ಮಾಡಲು ಇನ್ಯಾವುದಾದರೂ ಪ್ರಿ ಎಕ್ಸಿಸ್ಟಿಂಗ್ ಪರಿಸ್ಥಿತಿಯಿದೆಯೇ ಎಂದು ಯೋಚಿಸುತ್ತಿದ್ದಾಗ-
ಆತ ಇದ್ದಕ್ಕಿದ್ದಂತೆ ಉಸಿರು ನಿಲ್ಲಿಸಿದ್ದ
ಆಮ್ಲಜನಕದ ಸಿಲಿಂಡರಿನಿಂದ ಮಾತ್ರ ಮಿಡಿಯುತ್ತಿದ್ದ ಎಂಬತ್ತು ವರ್ಷದ ಸಿಗರೇಟಿನ ಬೂದಿಯಿಂದ ಕರಿಯಾದ ಪುಪ್ಪುಸ ಈ ಸಣ್ಣ ವೈರಾಣುವಿನ ದಾಳಿಗೆ ಸೋತಿತ್ತು ,
ಆರು ತಿಂಗಳ ಹಸುಳೆಯ ಪಾಪದ ಶ್ವಾಸ ಇದ್ದಕ್ಕಿದ್ದಂತೆ ನಿಂತಿತ್ತು
ಎಮರ್ಜೆನ್ಸಿ ರೂಮಿನಲ್ಲೊಂದು ಎಮೆರ್ಜೆನ್ಸಿ ಮೀಟಿಂಗು
ಈ ಕಣ್ಣಿಗೆ ಕಾಣದ ಶತ್ರುವಿನಿಂದ ನಮ್ಮ ನಾ ಹೇಗೆ ಕಾಪಾಡಿಕೊಳ್ಳುವುದು ಎಂಥ ಮುಖ ಕವಚ ಒಳ್ಳೇದು- ಎನ್ 95, ಅಥವಾ ಪ್ಯಾಪರೋ ಬಟ್ಟೆಯದೋ, ಪಾಲಿಯುರೆಥೇನೋ ಎದೆಗೆ ತೋಳಿಗೆ ಹೊಟ್ಟೆಗೆ ಕಟ್ಟಿದ ಆತ್ಮರಕ್ಷಣಾ ಕವಚ ಕುತ್ತಿಗೆಯನ್ನು ಬಿಟ್ಟಿತಲ್ಲ,
ಅಲ್ಲಿ ಕುತ್ತಿಗೆ ಮೇಲೆ ಕೂತಿರುವ ವೈರಸ್ಸ ಕೆರೆದ ಕೈ ಮುಖ ಸವರಿದರೆ !
ಬೂಟಿನ ಮೇಲೆ ಕೂತ ಮಾರಿ ಮನೆಗೆ ಬಂದರೆ !!
ಏನೇನೋ ಯೋಚನೆ- ಆತ್ಮರಕ್ಷಣೆಗೆ
ಮನೆಯಲ್ಲಿ ಮಕ್ಕಳ ಮುಖ ಮಾತ್ರ ನೋಡಬಹುದು ಹೆಂಡತಿಯಿಂದ
ಅನ್-ಸೋಷಿಯಲ್ ಡಿಸ್ಟನ್ಸು
ಕ್ಲೋರಾಕ್ಸು ಬ್ಲೀಚುಗಳ ವಾಸನೆ ತುಂಬಿದ ಆಸ್ಪತ್ರೆ ವಾಸನೆಯ ಮನೆ
ವೈರಸ್ಸಿನಿಂದ ಸಾಯುತ್ತಿರುವ ನನ್ನ ರೋಗಿಯನ್ನುಳಿಸಲೋ ನನ್ನ ನಾ ಉಳಿಸಿಕೊಳ್ಳಲೋ ಎಂದು ಯೋಚಿಸುತ್ತಿದ್ದಾಗ
ಈಗ ಹಾಕಿದ ನಲವತ್ತರ ಯುವಕನ ಮೊದಲ ವೆಂಟಿಲೇಟರು ಎರಡು ಉಸಿರು ಕೊಡುವಷ್ಟರಲ್ಲಿ ಎರಡನೇ ಅಂಬುಲೆನ್ಸುಬಂದಾಗ
ಹಾಕಿದ್ದ ಮಾಸ್ಕು, ಕೈಗವಸು, ಗೌನು ಬದಲಿಸಲೂ ಸಮಯವಿಲ್ಲದಾಗ
ನಾ ಮಾಡಿದ್ದೆ ಪ್ರತಿಜ್ಞೆಯೊಂದ –
ತೊಟ್ಟ ಕವಚವ ಮತ್ತೆ ತೊಡುವೆ
ಹೇಗಿದ್ದರೂ ಎಲ್ಲರಿಗೂ ಒಂದೇ ಕರೋನ ತಾನೇ.
ಆ ದೇವರಿದ್ದರೆ ರಕ್ಷಿಸಲಿ ನನ್ನ ರೋಗಿಗಳ ಜತೆ ನನ್ನನ್ನೂ
ಮನಮಿಡಿದ ಕವನ
ಓಹ್…