ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೆರೆದು ನೋಡು, ಒಮ್ಮೆ ಒಳಪುಟಗಳನ್ನು..

jyothi mahadev

ಸುಪ್ತದೀಪ್ತಿ

 

ಬೆಳಚುಕ್ಕಿಮರಿ

 

ಕಿಟಕಿಯಗಲದ ಆಕಾಶ

ಭೇದಿಸುವ ಸೂರುಚೂರು

ಕಂಡದ್ದೇ ಸುಳ್ಳೆನಿಸುವ ಮೊನೆಮಿನುಗು

birdsನಗ್ನದರ್ಶನಕೆ ಮುಖ ಕಿವುಚುವ ಹೊರಳುದೀಪ

ಕುರುಡಾಗದು ಮನವೆನ್ನುವ ಭರವಸೆ

ಅವಲಂಬನ ಚಳಿಚುಂಬನ

ಏಕಾಂತದ ಕಾಂತಚಾದರ

ಅದೋ ಬಿತ್ತು ಬಿತ್ತು

ಕಾದು ತಪಿಸಿದ ಮುಹೂರ್ತಫಲ

ಕಿಟಕಿಯಾಚೆಗೂ ಆಗಸ ಇರಲೇಬೇಕೆಂಬ

ಊಹೆ ರೆಕ್ಕೆಯ ಬಲ

ಕತ್ತರಿಸಿ ಧೊಪ್ಪನೆ ಉದುರಿದ

ನೂರಾರು ಬೆಳಚುಕ್ಕಿಮರಿ

ಬಾಲಸಹಿತ ನೇತಾಡಿ ಕಾಣೆಯಾದ

ಕಿಟಕಿಯಗಲದ ಆಕಾಶ

 

ಕಾದೇ ಕಾದಿದ್ದೆ ಬರವಿಗೆ

ಸುರಿಸುರಿದು ಇಳಿವ ಹೊನಲಿಗೆ

ಮಹಾಪೂರದಲ್ಲಿ ಕೊಚ್ಚಿಕಳೆದು

ಇಲ್ಲವಾಗುವ ಬಯಕೆಕುಡಿಯ ಪೋಷಿಸುತ್ತಾ

ಇರದುದರ ನೆರಳಿನಲ್ಲಿ ಬೇಯುತ್ತಾ

ಇಳಿದು ಬರುವ ಬೆಳಚುಕ್ಕಿಮರಿಗಳಿಗೆ

ಹೆಸರ ಹುಡುಕುತ್ತಾ

ಹುಡುಕುತ್ತಾ ಕಾದೆ

ಕರಕಲಾಗಿ ಕತ್ತಲಲ್ಲಿ.

 

ಮತ್ತೊಂದು ಮಗದೊಂದು

ಹೊರಳುದೀಪದರ್ಶನ

ಗಾಲಿಗಳ ಸಾಲು

ಇರುವ ಚೌಕಟ್ಟಿಗೇ ಬಂಗಾರಲೇಪ

ಕಾಗೆಕೂಗಿಗೂ ತಾಳಲಯದ ಆರೋಪ

ನನ್ನ ಕಿಟಕಿಯಾಚೆ

ಜ್ವಲಂತ ಜಗವಿದೆಯೆಂದು

ಹೇಳಿದವರಾರು?

ಜಗ ನನ್ನ ಕಿಟಕಿಯೊಳಗೆ,

ನನ್ನೊಳಗೆ.

ಕಂಡೂಕಾಣದ ಬೆಳಚುಕ್ಕಿಮರಿ

ಕಣ್ಣರೆಪ್ಪೆಯ ನಡುವೆ

ಸೀಮಿತ, ಸುರಕ್ಷಿತ.

 

ಎದೆಯ ಪುರವಣಿ

 

ತೆರೆದು ನೋಡು, ಒಮ್ಮೆ ಒಳಪುಟಗಳನ್ನು
ಮೇಲುಮೇಲಿನ ದಪ್ಪಕ್ಷರಗಳನ್ನು
ದಾಟಿ ಮುನ್ನಡೆದು ಸರಿಸಿಬಿಡು
ಅಬ್ಬರದ ಹೊರಪದರಗಳನ್ನು
sheಅಂಗಾತ ತೆರೆದುಕೊಳಲಿ ಒಳವಿಚಾರಗಳು
ದೊಡ್ಡ ಸುದ್ದಿಯಾಗದ ಸುವಿಷಯಗಳು

ಅಜರಾಮರನೇನಲ್ಲ ನಾನು
ನನ್ನ ಸಾವಿಗೆ ಮೀಸಲಿಡಬೇಡ
ನಿನ್ನ ಸುಪುಷ್ಟ ಅಕ್ಷರಗಳನ್ನು
ಈಗಲೇ ಚೆಲ್ಲಿಬಿಡು ನನ್ನ ಹೆಣಕ್ಕಾಗಿ
ಕಾದಿರಿಸಿರುವ ನುಡಿನಮನಗಳನ್ನು
ಜೊತೆಗೆ ನನ್ನದೇ ಸುಖದ ಭಾಷ್ಪಗಳನ್ನೂ
ಹರಿದುಹೋಗಲಿ, ಏನಂತೆ ಈಗ!
ಹೊಸನೀರು ಬಂದಾಗ ವಾಸನೆಯಿಲ್ಲ

ಕೊಚ್ಚಿ ಹೋಗುವುದಿಲ್ಲ ನಾನು
ನಿನ್ನ ಮೇಲುದುಃಖದ ನೆರೆಯಲ್ಲಿ
ಪ್ರೀತಿಯ ಅಮಲಷ್ಟೇ ತೇಲಿಸಬಲ್ಲದು
ನಿನ್ನೆದೆಯ ಒಳಪುಟದ ಪದರಗಳಲ್ಲಿ
ಜಾಗವಿದೆಯಾದರೆ ಹೇಳು, ನಾಗರಿಕ,
ಮತ್ತೊಮ್ಮೆ ಹುಟ್ಟಿಬರುವೆ
ಇದೇ ಅಮ್ಮನ ಕಂದನಾಗಿ
ಅವಳ ಮೈಯ ರಕ್ಷೆಗಾಗಿ

‍ಲೇಖಕರು admin

22 April, 2016

1 Comment

  1. ಪ್ರಸಾದ್ ಶೆಣೈ ಆರ್ ಕೆ

    ಏಕಾಂತದ ಕಾಂತಚಾದರ…. ವ್ಹಾವ್ ತುಂಬಾ ಕಾಡುವ ಸಾಲುಗಳು..ಕಾರ್ತಿಕದ ಸಾಲು ಸಾಲು ಹಣತೆ ಸಣ್ಣಗೇ ಹೊತ್ತಿಕೊಂಡಂತಿದೆ ಕವಿತೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading