ಐರೋಡಿ ಮಂಜುನಾಥ ಅಲ್ಸೆ
ಹಲವು ಮಕ್ಕಳ ನಾಟಕ ಮತ್ತು ಪ್ರೌಢ ನಾಟಕ ಬರೆದು ನಿರ್ದೇಶಿಸಿ ಸೈ ಅನ್ನಿಸಿಕೊಂಡ ಹಿರಿಮೆ ಎಂ.ಎಂ. ಶೈಲೇಶ ಕುಮಾರ್ ಅವರದ್ದು. ರಂಗಭೂಮಿಯಲ್ಲಿ ಏನಾದರು ಸಾಧಿಸಬೇಕು ಅನ್ನುವ ಛಲದೊಂದಿಗೆ ರಂಗಭೂಮಿಯ ಪಟ್ಟುಗಳನ್ನು ಶಾಸ್ತ್ರೋಕ್ತವಾಗಿ ಉನ್ನತ ಗುರುಗಳೊಂದಿಗೆ ಬೆರೆತು ಕಲಿತು ಮಹತ್ವಾಕಾಂಕ್ಷೆಯಿಂದ ಹುಟ್ಟು ಹಾಕಿದ ರಂಗ ಸಂಸ್ಥೆ “ಸೈಡ್ ವಿಂಗ್”.
ಪಕ್ವ ನಿರ್ದೇಶಕ, ನುರಿತ ಲವಲವಿಕೆಯ ಕಲಾವಿದರು, ಅನುಭವಿ ಬೆಳಕು ತಂತ್ರಜ್ಞ, ಅತ್ಯಂತ ಪಳಗಿದ ರಂಗವಿನ್ಯಾಸ ಮತ್ತು ರಂಗಸಜ್ಜಿಕೆಗಾರ ಕಲಶವಿಟ್ಟಂತೆ ಸಾರಸ್ವತ ಲೋಕದ ಮೇರು ಕವಿ ಡಾ. ಕಂಬಾರರ ಕೃತಿ. ಇನ್ನೇನು ಬೇಕು ಒಂದು ನಾಟಕದ ಯಶಸ್ಸಿಗೆ?
ಹೌದು ಹೇಳುವುದಕ್ಕೆ ಹೊರಟಿದ್ದು ‘ಸೈಡ್ ವಿಂಗ್’ ತಂಡ ನಿನ್ನೆ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶಿಸಿದ ನಾಟಕ ‘ನಾಯಿ ಕಥೆ’ ಬಗ್ಗೆ – ನಿರ್ದೇಶನ ಎಂ.ಎಂ.ಶೈಲೇಶ ಕಮಾರ್.
ಪ್ರೀತಿ, ಹಣ ಬಲದ ಪೈಪೋಟಿಯಲ್ಲಿ ಹಣದಿಂದ ಎಲ್ಲವನ್ನೂ ಪಡೆಯಬಹುದು ಅಲ್ಲದೆ ಅದೇ ಮುಖ್ಯ ಮತ್ತು ಎಲ್ಲವೂ ಆದರೆ ಪ್ರೀತಿಗೆ ಅದರದೇ ಆದ ಜಾಗ ಇದೆ ಅನ್ನುವ ಕಥಾ ಹಂದರ. ಅದನ್ನೇ ಡಾ. ಕಂಬಾರರು ತಮ್ಮ ಮಣ್ಣಿನ ಸೊಗಡಿನ ಬಾಷೆಯಲ್ಲಿ ಹೇಳಿದ್ದು ಕಥೆಯ ಗಟ್ಟಿತನ ಕಾಪಾಡಿಕೊಂಡಿದ್ದು.
ಇದನ್ನು ರಂಗಭೂಮಿಗೆ ತಮ್ಮದೇ ರೀತಿಯಲ್ಲಿ ಸಂಗೀತ ಮತ್ತು ಉತ್ತರ ಕರ್ನಾಟಕದ ಗ್ರಾಮ್ಯ ಸೊಗಡಿನ ಸಂಭಾಷಣೆಯೊಂದಿಗೆ ಯಶಸ್ವಿ ಪ್ರಯೋಗ ಮಾಡಿ ತುಂಬಿದ ಗೃಹದೊಂದಿಗೆ ಗೆಲುವು ಪಡೆದ ಹಿರಿಮೆ ‘ಸೈಡ್ ವಿಂಗ್’ ನದು.
ಮುಖ್ಯ ಪಾತ್ರದಾರಿಗಳ ಲವಲವಿಕೆಯ ಗಂಭೀರ ಅಭಿನಯ, ಸೂಕ್ತ ಸಂಗೀತ ಹಾಡು, ಪೂರಕ ರಂಗವಿನ್ಯಾಸ ಮತ್ತು ರಂಗಸಜ್ಜಿಕೆ, ಕಲಶವಿಟ್ಟಂತೆ ಹೊಂದಿಕೊಂಡ ವಸ್ತ್ರ ವಿನ್ಯಾಸ, ಬೆಳಕು ನಾಟಕದ ಹೆಚ್ಚುಗಾರಿಕೆ.
ಅಲ್ಲಲ್ಲಿ ಕೆಲವು ಸಣ್ಣ ಪುಟ್ಟ ಲೋಪ ಬಿಟ್ಟರೆ ಒಂದು ಉತ್ತಮ ಪ್ರಯತ್ನ. ಅಭಿನಂದನೆಗಳು ಸೈಂಡ್ ವಿಂಗ್ ತಂಡಕ್ಕೆ.ವಾರಂತ್ಯದ ಮನೋರಂಜನೆಗೆ.
Thank you GNM Sir and Avadhi Team …