ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಂಬಿದ ಮೋಡವೊಂದು ಕರಗುತ್ತ ಸಮುದ್ರಕ್ಕೆ ಹೇಳುತಿದೆ.. ..

ಗೋಡೆ – ಕವಿ

ಸಿ ವಿ ಶೇಷಾದ್ರಿ ಹೊಳವನಹಳ್ಳಿ.

ಖ್ಯಾತಿವೆತ್ತಕವಿಯನ್ನು ಮಾತಾಡಿಸಲು ಹೋಗುತ್ತಿರುವೆಯಾ..?
ಸುಂದರಕವಿತೆ ಬರೆದ ಅವನ ಕೊಳೆ ಕೈಗಳು
ಸಭೆತುಂಬ ಕುಲುಕಿ ಕುಲುಕಿ ಸಾಗುತಿವೆ.
ಉದಯೋನ್ಮುಖರ ಕವಿತೆಗಳ ಹಾಳೆಗಳಲ್ಲಿ ಆತ ಕೈಬಾಯಿ ಒರೆಸಿಕೊಳ್ಳುತ್ತಿದ್ದಾನೆ.
 
ಸಮನ್ವಯ ಸಾರಿದ ಅವನ ಸಾಲು,
ಚೆಲ್ಲುತಿದೆ ನೋಡು ಪಕ್ಷಪಾತ ಪಕ್ಷಿಗಳಿಗೆ ಕಾಳು.
ಲೋಕ ಕಲ್ಯಾಣದ ಅವನ ಕಾವ್ಯಓದಿರುವೆಯಾ..?
ವೇದಿಕೆಯಲ್ಲಿ ಆಲಿಸು ಅವನ ಸ್ವಕಲ್ಯಾಣ ನಗು.

ಕಾಣದ ಓದುಗನೆದುರು ನಮ್ರವಾಗಿದ್ದ ಅವನ ನಾಲಿಗೆ ಜೋಳಿಗೆ
ಪ್ರತ್ಯಕ್ಷಓದುಗನೆದುರುತೂತಾಗಿದೆ.
 
ಮೈಕಿನ ಮುಂದೆ . . ಕೈಮೇಲೆ ಕೈಇಡಿ. ಭಾಷೆಗೆಭಾಷೆಕೊಡಿಎಂದವನು
ವಂದಿಮಾಗಧರ ನಡುವೆ ಜೇಬೊಳಗೆ ಹೇಗೆ ಕೈ ಬಚ್ಚಿಟ್ಟಿದ್ದಾನೆ ನೋಡು..!
 
ಬೇಕಾದರೆ ನೋಡು
ಕಡೆಗಣಿಸಿದ್ದ ಪಾತ್ರಗಳಿಗೆಲ್ಲ
ವಜ್ರ ವೈಢೂರ್ಯವಿಟ್ಟು ರಾಜಬೀದಿಗಳಲ್ಲಿ ಪಲ್ಲಕ್ಕಿ ಸೇವೆ ಮಾಡಿದ್ದವನು
ಸಭೆಯ ಹಿಂದೆಇದ್ದ ಸಾಮಾನ್ಯನ ಪುಸ್ತಕದಲ್ಲಿ ಹಸ್ತಾಕ್ಷರ ನಿರಾಕರಿಸಿದ.
ಅವನ ಜೊತೆ ಫೋಟೋ ತೆಗೆಸಿಕೊಳ್ಳಲು ಹಿಂಜರಿದ.
ಆದ್ದರಿಂದ ಎಲ್ಲೋ ಇರುವ ಪ್ರೀತಿಯ ಓದುಗನೇ
ಗೋಡೆಯನ್ನು ಪ್ರೀತಿಸಿ ಅದರ ಮೇಲೆ ಮಲಗಿರುವ
ಪ್ರಸಿದ್ಧ ಕವಿಯ ಭಾವಚಿತ್ರವನ್ನುಎಸೆದು ಬಿಡು.
 
ಈಚೆ ಬಾನೋಡಲ್ಲಿ..
ತುಂಬಿದ ಮೋಡವೊಂದು ಕರಗುತ್ತ ಸಮುದ್ರಕ್ಕೆ ಹೇಳುತಿದೆ.. ..
ಇನ್ನೊಂದು ಮೋಡ ಮಾಡು.
 

‍ಲೇಖಕರು avadhi

17 February, 2013

2 Comments

  1. radha s talikatte

    last stanza ade nijavada khyaatavetta kavi !

  2. ರವಿ ಮೂರ್ನಾಡು,ಕ್ಯಾಮರೂನ್

    “ಈಚೆ ಬಾನೋಡಲ್ಲಿ..
    ತುಂಬಿದ ಮೋಡವೊಂದು ಕರಗುತ್ತ ಸಮುದ್ರಕ್ಕೆ ಹೇಳುತಿದೆ.. ..
    ಇನ್ನೊಂದು ಮೋಡ ಮಾಡು”
    : ಇಡೀ ಕವಿತೆ ಎನ್ನುವ ಸಂವಾದದಲ್ಲಿ ಇದೊಂದು “ಮೋಡದ ತುಂಡೊಂದನ್ನು” ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಇನ್ನೊಂದು ಕವಿತೆ ಹುಟ್ಟಿಸುವ ಉಮೇದಿನಿಂದ. ನನ್ನ ಅನಿಸಿಕೆ ಪ್ರಕಾರ ಕವಿತೆ ಕಟ್ಟುವ ಪೂರ್ಣ ಕಾಯಕದ ಚಿಂತನೆಯಲ್ಲಿ ” ಕಾವ್ಯ ಶಕ್ತಿ” ಒಲಿದು ಬಂದಿರುವುದು ಈ ಮೇಲಿನ ಮೂರು ಸಾಲುಗಳಲ್ಲಿ. ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading