ಕುಸುಮಾ ಪಟೇಲ್
ತಥಾಗತ, ತಥಾಗತ
ನಾನು
ನಾನು ಯಶೋಧರ
ಸಿದ್ದಾರ್ಥನ ಯಶೋಧರ
ಸಿದ್ದಾರ್ಥ
ನೆನಪಿದೆಯೇ?
ಪೂರ್ವಾಶ್ರಮದ ಸಿದ್ದಾರ್ಥ.
ಜಗವೆಲ್ಲ ಮಲಗಿರಲು
ಅವನೊಬ್ಬನೆದ್ದ
ಅವನೇ ಬುದ್ಧ
ಇದ್ದುದೆಲ್ಲವ ಬಿಟ್ಟು
ಇಲ್ಲದರ ಎಡೆಗೆ
ನಡೆದೇ ಬಿಟ್ಟು.
ನಟ್ಟ ನಡು ರಾತ್ರಿಯಲಿ
ಬದುಕ ನಡು ಬೀದಿಯಲಿ
ನೀ ಬಿಟ್ಟು ನಡೆದ
ಆ ತಣ್ಣನೆಯ ಕ್ರೌರ್ಯಕ್ಕೆ
ನಾ ಕೊರ ಕೊರಗಿ ಹಣ್ಣಾದದ್ದು
ಸೋತು ಸುಣ್ಣವಾದದ್ದು
ಇತಿಹಾಸ.
ಮತ್ತೆ ಬಂದ ನೀ
ಪತಿಯಾಗಲಿಲ್ಲ
ಮಗನಿಗೆ ಪಿತನಾಗಲಿಲ್ಲ
ಪ್ರಶ್ನೆಗಳಿಗೆ
ಮೌನ ಉತ್ತರವಾಗಲಿಲ್ಲ.
ಅದಕೇ ಬಂದಿದ್ದೇನೆ
ಹೆಗಲೇರಿದ ಮಂಡೂಕಿನಿಯಾಗಿ
ಮಂಡಿಯೂರಿ ಮೌನಿಯಾಗಿ.
ಹೇಳಿಬಿಡು ಒಮ್ಮೆ
ದೊರೆಯೇ ಗುರುವೇ
ಅಂದಿನ ಸಿದ್ದಾರ್ಥ
ಆಮೇಲಿನ ತಥಾಗತ
ಈ ಎಲ್ಲದಕೂ
ಯಾರು ಕಾರಣ????
0 ಪ್ರತಿಕ್ರಿಯೆಗಳು