ಸ್ವಾತಿ ಕೆ ಎಚ್
ನಾನಾಗ ಬಹುಶಃ ಒಂದನೇ ತರಗತಿಯಲ್ಲಿದ್ದಿರಬಹುದು. ರಜೆಯಿತ್ತು ಎನಿಸುತ್ತದೆ. ಅಜ್ಜಿಯ ಜೊತೆ ಮೈಸೂರಿನ ಚಿಕ್ಕಮ್ಮನ ಮನೆಗೆ ಹೊರಟಿದ್ದೆ. ನಮ್ಮೂರಿಂದ ಮೈಸೂರಿಗೆ ಪ್ರೈವೇಟ್ ಬಸ್ಸುಗಳಿದ್ದವು.4 ಗಂಟೆಗಳ ಪ್ರಯಾಣ. ಸಾಕು ಸಾಕೆನಿಸುತ್ತಿತ್ತು. ಮೈಸೂರು ಯಾವಾಗ ಬರುತ್ತೆ ಎಂದು ಪದೇ ಪದೇ ಕೇಳಿ ಅಜ್ಜಿಯ ತಲೆ ತಿನ್ನುತ್ತಿದ್ದೆ. ಡ್ರೈವರ್ ಹಿಂದಿನ ಕಿಟಕಿಯ ಪಕ್ಕದ ಸೀಟು. ಮದ್ದೂರಿನ ಹತ್ತಿರ ಬಂದಾಗ ಡ್ರೈವರ್ ಅವರ ಪಕ್ಕದಲ್ಲಿದ್ದ ಸ್ವಿಚ್ಚೊಂದನ್ನು ಹಾಕಿದರು. ಇದ್ದಕ್ಕಿದ್ದಂತೆ ಜೋರು ಮಳೆ ಶುರುವಾಯಿತು.ಮಂಡ್ಯದ ಹತ್ತಿರ ಬಂದಾಗ ಮತ್ತೆ ಡ್ರೈವರ್ ಸ್ವಿಚ್ ಆಫ್ ಮಾಡಿದರು. ಮಳೆ ನಿಂತು ಹೋಯಿತು.
ನನಗೆ ಯೂವುದೋ ಅದ್ಭುತವನ್ನು ನೋಡಿದಷ್ಟು ಆಶ್ಚರ್ಯ. ಆ ಸಮಯಕ್ಕೆ ಆ ಡ್ರೈವರ್ ಒಂಥರಾ ಮ್ಯಾಜೀಷಿಯನ್ ಅನ್ನಿಸಿಬಿಟ್ಟಿದ್ದ. ಆಗ ನನ್ನ ಬುದ್ಧಿಗೆ ಹೊಳೆದದ್ದೇನೆಂದರೆ ಮಳೆಗೆ ಅಂತಲೇ ಒಂದು ಸ್ವಿಚ್ ಇದ್ದು ಅದನ್ನು ಹಾಕಿದ ತಕ್ಷಣ ಮಳೆ ಬರುತ್ತದೆ , ಮಳೆ ಸುರಿದದ್ದು ಸಾಕೆನಿಸಿದಾಗ ಸ್ವಿಚ್ ಆಫ್ ಮಾಡಬಹುದು ಅಂತ. ಬಹುಶಃ ಅವರು ವೈಪರಿನ ಸ್ವಿಚ್ಚನ್ನು ಆನ್ ಆಫ್ ಮಾಡಿದ್ದಿರಬಹುದು. ನನ್ನ ಮಂದ ಬುದ್ಧಿಗೆ ಆಗ ಅದು ಹೊಳೆದಿರಲಿಲ್ಲ. ಅನಂತರದ ಕೆಲವು ವರ್ಷಗಳು ಯಾವಾಗ ಮಳೆ ಬಂದರೂ ಯಾರೋ ಸ್ವಿಚ್ ಹಾಕಿರಬೇಕು ಎಂದುಕೊಳ್ಳುತ್ತಿದ್ದೆ.ಆಮೇಲೆ ಸ್ಕೂಲಿನಲ್ಲಿ ಮಳೆ ಚಕ್ರದ ಬಗ್ಗೆ ಕಲಿತದ್ದು. ಈಗ ಮಳೆ ಬರುತ್ತಿದೆ. ಬಸ್ಸಿನಲ್ಲಿದ್ದೇನೆ. ಇಲ್ಲೆರಡು ಮಕ್ಕಳು ” ಮಳೆ ಏನ್ ಹಿಂಗ್ ಬತ್ತಾಯ್ತೆ . ನಮ್ ಕೆರೆಗಿಂತ ದೊಡ್ಡು ಕೆರೆ ಆಗೈತೆ ಇಲ್ಲಿ !!!” ಅಂತ ಮಳೆ ನೋಡಿ ಬೆರಗಾಗಿ ಕಿಟಕಿಯಾಚೆ ಕೈ ಹಾಕಿ ಮಳೆ ನೀರನ್ನು ” ಎಷ್ಟು ತಣ್ಣುಗೈತೆ ಐಸ್ ತರಾ” ಎಂದು ಕೆನ್ನೆಗೆ ಸವರಿಕೊಂಡು ಅವರಮ್ಮನ ಬೈಗುಳದ ನಡುವೆಯೂ ಆಟಾಡುತ್ತಿವೆ.
(ಸರಿಯಾಗಿ ಮದ್ದೂರಿನ ಹತ್ತಿರವೇ ಎಂದು ನೆನಪಿರುವುದು ಅಲ್ಲಿನ ಮದ್ದೂರು ವಡೆಯ ಪ್ರಭಾವ )
baraha chennagide.
Makkala mugda notave ondu adbhuta loka. Nimma baravanige chennagide.