ಆಲೂರು ದೊಡ್ಡನಿಂಗಪ್ಪನವರ ಕವಿತೆಗಳು ನಮ್ಮನ್ನು ಸೆಳೆಯುವುದು ತಮ್ಮ ವಸ್ತುವಿಶೇಷಗಳಿಂದಲ್ಲ. ಗ್ರಾಮೀಣ ಬದುಕಿನ ದೈನಿಕಗಳ ಮೂಲಕ..
ಕವಿತೆ ಕಟ್ಟುವ ಪರಿಪಾಠವಾಗಲಿ ಆ ದೈನಿಕಗಳನ್ನು ದಲಿತ ವಿಶಿಷ್ಟ ದೃಷ್ಟಿಯಿಂದ ಕಾಣುವುದಾಗಲಿ ಈಗಾಗಲೇ ಕನ್ನಡಕ್ಕೆ ಬಂದಿರುವ ಕಾವ್ಯಕ್ರಮಗಳು. ಆದರೆ ದೊಡ್ಡನಿಂಗಪ್ಪ ತುಳಿದ ಹಾದಿಯಲ್ಲಿ ನಡೆಯುವಾಗ ಗುರುತಿಸುವ, ಹೊಳೆಯಿಸುವ, ಗೆಳಗಿಸುವ, ಸೂಕ್ಷ್ಮಗಳು ಅವರ ಕವಿತೆಗಂಧ ಕಾಂತಿಯನ್ನು ನೀಡುತ್ತವೆ.
ಒಂದಿರುಳು ಕೋವಿ ನಳಿಕೆಯಿಂದ ಅಂತರಿಕ್ಷ ಕೂಟಗಳ ಸುತ್ತುವ ಕುದುರೆ ಹಾರಿತು ಎಂಥ ಅಚ್ಚರಿ; ಇಲ್ಲಿ ನೋಡುವ ಬಗೆ ಕೇವಲ ವರ್ಣನಾತ್ಮಕವಾಗದೆ ಅನ್ವೇಷಕವಾಗುತ್ತದೆ. ಬಹುಮಟ್ಟಿಗೆ ಬಾಲ್ಯ ಕಾಲದ ಅನುಭವಗಳನ್ನು ಹೂರಣ ಮಾಡಿಕೊಂಡಿರುವ ಇಲ್ಲಿನ ಕವಿತೆಗಳು ಕಪ್ಪು ಬೋರ್ಡಿನ ಮೇಲೆ ಮೂಡಿದ ಬಿಳಿ ಅಕ್ಷರಗಳಂತೆ ಗಮನ ಸೆಳೆಯುತ್ತವೆ.
‘ಶವದ ಈ ಮನೆ’ ‘ಎತ್ತಿಕೊ’ ರೀತಿಯ ಕವಿತೆಗಳು ಮಿತ ವಚನದ ಮೋಡಿಯಲ್ಲಿ ಗಾಢ ಭಾವನೆಗಳನ್ನು ಧ್ವಿನಿಸುತ್ತವೆ. ಈ ಕವಿತೆಗಳ ರಾಜಕೀಯ ಅರ್ಥಗಳು ಗಟ್ಟಿ ಮಾತುಗಳಲ್ಲಿ ಕಿರುಗುಡವುದಿಲ್ಲ.ಬದಲಿಗೆ ತಮ್ಮ ಮೆಲುದನಿಯಿಂದ ಒಳಗೊಳಗೇ ಅನುಕರಣಿಸ ತೊಡಗುತ್ತವೆ.
ಕೆಲವೆಡೆ ಪ್ರತಿಮೆಗಳು ಎಡವಿದರೂ ಒಟ್ಟಾರೆಯಾಗಿ ಪರಿಚಿತವನ್ನು ಅಪರಿಚಿತವಾಗಿಸುವಲ್ಲಿ ಕವಿತೆಗಳು ಸ್ಪಷ್ಟ ಪ್ರಿತಿಮೆಗಳ ಮೂಲಕ ಮೈತಾಳುತ್ತವೆ. ಹಳೆಯದರಲ್ಲಿ ಹೊಸತನ್ನು ತೋರುವ, ಕಿರಿದರಲ್ಲಿ ಹಿರಿದನ್ನು ಸೂಚಿಸುವ ಅಪರೂಪದ ಗುಣದಿಂದಾಗಿ ಆಲೂರು ದೊಡ್ಡನಿಂಗಪ್ಪನವರ ಕವಿತೆಗಳು ನನ್ನಲ್ಲಿ ಭರವಸೆ ಮೂಡಿಸುತ್ತವೆ.
ತೊಟ್ಟಿಕ್ಕಲಿ ಹನಿ… ಹನಿ ನಾಳೆಗೂ ತೇಲಿ ತೇಲಿ ಬರಲಿ ಚಂದಿರನ ಚೂರು ನಮ್ಮ ಕೇರಿಗೂ
ಎಚ್ ಎಸ್ ಶಿವಪ್ರಕಾಶ್




0 Comments