ಅನುಭವದ ನಡೆ ಅನುಭಾವದ ನುಡಿ ಸರಣಿಯ ಉಪನ್ಯಾಸಗಳು 2013
ಸಂಪಾದಕರು: ಪೊ. ಎ.ವಿ. ನಾವಡ
ಅರಿದೆವರಿದೆವೆಂಬಿರಿ
ಅರಿದ ಪರಿಯೆಂತು ಹೇಳಿರೆ
ಅರಿದವರಿದೆವೆಂಬರೇ
ಅರಿಯಬಾರದ ಘನವನರಿದವರು
ಅರಿಯದಂತಿಪ್ಪರು ಗುಹೇಶ್ವರ

ಅಲ್ಲಮನ ವೈಚಾರಿಕ ಪಾತ್ರಪಾತಳಿಯಲ್ಲಿ ಕರಾವಳಿಯ ಕಾಂತಾವರಕ್ಕೆ ‘ಹೊಸನೀರು’ ಹರಿದುಬರುತ್ತಿದೆ. ಅಂದ ಮಾತ್ರಕ್ಕೆ ಕರಾವಳಿಗೆ ಲಿಂಗಾಯತ – ವೀರಶೈವ ವಿಚಾರಧಾರೆಯ ಹರಿವು ಹೊಸದಲ್ಲ. ಬಸವೋತ್ತರ ಕಾಲಘಟ್ಟದಲ್ಲಿ ಕರಾವಳಿಗೆ ಲಿಂಗಾಯತ ಧರ್ಮದ ಪತ್ತುಗೆಯ ಕೆಲವು ಸಮುದಾಯಗಳು ಬಂದು ನೆಲೆಸಿದವು. ಮುಂದೆ ಇಕ್ಕೇರಿಯ ಅರಸರು ಕರಾವಳಿಯಲ್ಲಿ (ವೀರ) ಸೈವ ಪರಂಪರೆಯನ್ನು ಇನ್ನಷ್ಟು ಪ್ರಚುರಪಡಿಸಿದರು. ಹೀಗಾಗಿ ಕರಾಳಿಯ ಪ್ರಾಚೀನ ಶೈವ, ಸಿದ್ಧ, ನಾಥ, ಜೈನ, ವೈದಿಕ, ಬೌದ್ಧ ಮುಂತಾದ ಪಂಥಗಳ ತಿಳಿವಿನೊಳಗೆ ‘ಶಬ್ದದೊಳಗಿನ ನಿಶ್ಯಬ್ದದಂತೆ’ ಅಲ್ಲಮನ ದನಿ ಕೇಳಿಸುತ್ತಿದೆ. ಆದರೂ ಈ ಕೇಳಿಸುವಿಕೆಯನ್ನು ‘ಆಗುವಂತಾಗಿಸುವ’ ಪ್ರಕ್ರಿಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಂತಾವರದ ಅಲ್ಲಮಪ್ರಭು ಪೀಠ’ ತೊಡಗಿದೆ. ಆ ಪ್ರಯತ್ನದ ಒಂದು ಕಾರಣೆ ಈ ‘ಕರಣ-ಕಾರಣ’ ಸಂಪುಟ. ಪ್ರತಿ ತಿಂಗಳ ನಿಗದಿತ ದಿನ ಕಾಂತಾವರದ ಅಲ್ಲಮಪ್ರಭು ಪೀಠದ ಗ್ರಾಮೀಣ ಕಟ್ಟೆಯಲ್ಲಿ ಅರಿವಿನ ದಾಸೋಹಕ್ಕಾಗಿ ಊರವರು ಬಂದು ಒಂದು ವಿಚಾರದ ಎಳೆ ಹಿಡಿದು ಮಾತನಾಡುತ್ತಾರೆ. ಅಲ್ಲಿ ಏರ್ಪಟ್ಟ ಸೂಳ್ನುಡಿಯ ‘ಶಬ್ದಸೋಜಿಗ’ವನ್ನು ಕಟ್ಟೆಯಲ್ಲಿ ಕುಳಿತವರು ತಮ್ಮೊಳಗೆ ತುಂಬಿಕೊಳ್ಳುತ್ತಾರೆ. ನಿಧಾನವಾಗಿ ಅಲ್ಲಮ ‘ಶಬ್ದದೊಳಗಿನ ನಿಶ್ಯಬ್ದ’ದಂತೆ ಎಲ್ಲರ ಒಳಸೇರುತ್ತಾನೆ.
ಪ್ರೊ. ಎ. ವಿ. ನಾವಡ


abhinandanegaLu sir…!!!!