ಪರಂಪರೆ ರಾಶಿ ಹಾಕಿದ ಮೆಕ್ಕಲುಮಣ್ಣಿನಲ್ಲಿ ಹೊಸಗನ್ನಡ ಕಾವ್ಯದ ಬೀಜಾರೋಪಣವಾದದ್ದರ ಫಲವಾಗಿ ನಾವಿಂದು ಅದರ ಸಮೃದ್ಧ ಫಸಲನ್ನು ಕಾಣುತ್ತಿದ್ದೇವೆ. ದೇಶಕ್ಕೆ, ನಾಡಿಗೆ ಒಂದು ಸಮೃದ್ಧ ಪರಂಪರೆ ಇರುವಂತೆ ಸಾಹಿತ್ಯಕ್ಕೂ ಇದೆ. ಈ ಸಾಹಿತ್ಯ ಪರಂಪರೆಯ ಮುಂದುವರಿಕೆ ನಾಡಿನ ಪ್ರತಿಭಾವಂತ ಕವಿಗಳ, ವಿದ್ವಾಂಸರ ಗಮನಾರ್ಹ ಕೊಡುಗೆಯಲ್ಲಿ ಮೈದಾಳಿರುತ್ತದೆ. ಬಹುಮುಖ ಪ್ರತಿಭೆಯ ಹೊಸಗನ್ನಡ ಸಾಹಿತ್ಯದ ನಿರ್ಮಾತೃಗಳು ಆ ಸಾಹಿತ್ಯ ಪ್ರಕಾರಗಳಲ್ಲಿ ಸೃಜನಾತ್ಮಕವಾಗಿ ತೊಡಗಿಕೊಂಡ ಸಂದರ್ಭದಲ್ಲಿ ಅವರು ಪರಂಪರೆಯ ಜೊತೆ ಸಂವಹನ ನಡೆಸುವಾಗ ಹೊಸದನಿಗಳನ್ನು ಹೊಮ್ಮಿಸುವ ಮಹತ್ವದ ಕಾರ್ಯವನ್ನು ಮಾಡಿದರು. ಹೊಸ ಪರಿಸರದಲ್ಲಿ ಹೊಸ ವಿಚಾರಧಾರೆಗಳ ಜೊತೆ ಮುಖಾಮುಖಿಯಾಗುವ ಸಂದರ್ಭದಲ್ಲಿ ಹಿಂದಿನ ಕವಿ-ವಿದ್ವಾಂಸರು ಇದಿರಿಸಿದ ಸಮಸ್ಯೆಗಳಿಗಿಂತ ಭಿನ್ನವಾದ ಹೊಸ ಸವಾಲುಗಳನ್ನು ಅವರು ಇದಿರಿಸಬೇಕಾಯಿತು. ಸ್ವಾತಂತ್ರ್ಯೋತ್ತರ ಕಾಲಮಾನದ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಪಲ್ಲಟಗಳು ನವೋದಯಕಾಲದ ಸಾಹಿತ್ಯವನ್ನು ನಿಯಂತ್ರಿಸುವ / ಸಂವಾದ ನಡೆಸುವ ಸಂದರ್ಭದಲ್ಲಿ ನಮ್ಮ ಸೃಜನ ಪರಿಸರ ಇದಿರಿಸಿದ ಇಕ್ಕಟ್ಟು ಬಿಕ್ಕಟ್ಟುಗಳು ಗಮನಾರ್ಹವಾದುದು.
ಮುಖ್ಯವಾಗಿ ಲಾಗಾಯ್ತಿನಿಂದ ಬಂದ ರೂಢಿಗತ ರಾಷ್ಟ್ರೀಯ ವಿಚಾರಧಾರೆಯ ಜೊತೆಗೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವದ ಪರಿಣಾಮಗಳನ್ನು ಯಾವ ಪ್ರಮಾಣದಲ್ಲಿ ಸ್ವೀಕರಿಸಬೇಕೆನ್ನುವ ಸವಾಲು ಅವರ ಮುಂದೆ ಧುತ್ತೆಂದು ನಿಂತಾಗ ಸೃಜನ ಪ್ರತಿಭೆ ಅವುಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೆ ಅಥವಾ ಅವನ್ನು ಜೀರ್ಣಿಸಿಕೊಂಡು ತಮ್ಮದೇ ಆದ ಸಾಹಿತ್ಯ ಪರಿಸರವನ್ನು ರೂಪಿಸಿಕೊಳ್ಳಬೇಕೆ ? ಎನ್ನುವ ನಿಟ್ಟಿನಲ್ಲಿ ಅವರು ತೆಗೆದುಕೊಂಡ ನಿರ್ಧಾರ ಮೌಲ್ಯಗಳ ಪುನರುತ್ಥಾನದ ಸಾಕ್ಷೀಪ್ರಜ್ಞೆ ಅವರ ಕಣ್ಣ ಮುಂದಿನ ಬೆಳಕಾಗಿದೆ. ಈ ನಿಟ್ಟಿನಲ್ಲಿ ‘ಪರಂಪರೆ ಮತ್ತು ಕವಿಪ್ರತಿಭೆಯ ಮುಖಾಮುಖಿ’ ಎನ್ನುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಾಡಿನ ಅಕ್ಷರಲೋಕದ ಪ್ರತಿಭೆಗಳ ಜೊತೆ ನಡೆಸಿದ ಸಂವಾದ ಮೌಲಿಕವಾದುದು. ಹಾಗೆಯೇ ಇದರ ಸಂಪಾದಕರಾದ ಡಾ ಬಿ. ಪಿ. ಸಂಪತ್ ಕುಮಾರ ಅವರ ಶ್ರಮವೂ ಸಾರ್ಥಕವಾದುದು.
ಡಾ . ಎಸ್. ವಿದ್ಯಾಶಂಕರ
(ಬೆನ್ನುಡಿಯಿಂದ )
ಪ್ರಕಾಶಕರು : ಕಾರ್ತಿಕ್ ಎಂಟರ್ ಪ್ರೈಸರ್ಸ್
ಬೆಲೆ : ರೂ ೧೪೦/-
I want to this book sir how do I buy this book