ನನಗೆ ಇಷ್ಟೊಂದು ಒಳ್ಳೆಯ ಕವನಗಳನ್ನು ಒಂದೇ ಸಲ ಓದಿದಾಗ ಆದದ್ದು ಅಚ್ಚರಿಯೇ. ಹೊಸ ಕನ್ನಡ ಕಾವ್ಯದ ಮುಖ್ಯ ದಾರಿಗಳನ್ನು ತನ್ನೊಳಗೆ ಕರಗಿಸಿಕೊಂಡರೂ ಮೊಗಸಾಲೆಯವರು ತನ್ನತನವನ್ನು ಕಟ್ಟಿಕೊಂಡವರು. ಕವಿತೆಯ ಆಶಯಗಳ ನೆಲೆಯಲ್ಲಿ, ಅಂತೆಯೇ ಹಲವು ಬಗೆಗಳ ಆಕೃತಿಗಳ ನೆಲೆಯಲ್ಲಿ ಮತ್ತು ಅವೆರಡನ್ನೂ ಹುರಿಗಡಿಯದಂತೆ ಸೇರಿಸುವ ಕೆಲಸದಲ್ಲಿ ಈ ಕವಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅಪಾರವಾದ ವೈವಿಧ್ಯವನ್ನೂ ರೂಢಿಸಿಕೊಂಡಿದ್ದಾರೆ. ಅಷ್ಟೇ ಮುಖ್ಯವಾಗಿ, ಅವರು ನಿಂತ ನೀರಾಗದಂತೆ ಬೆಳೆದಿದ್ದಾರೆ. ಅವರ ಬಹುಪಾಲು ಕವಿತೆಗಳು ಖಚಿತವಾದ ಬಂಧವಿರುವ ಶಿಲ್ಪಗಳು.
ಡಾ ಎಚ್ ಎಸ್ ರಾಘವೇಂದ್ರ ರಾವ್ (‘ಅಯಸ್ಕಾಂತಾವರ’ದಲ್ಲಿ)
ಅಲೌಕಿಕ ಮತ್ತು ಪರಮಾರ್ಥದ ಸ್ಪರ್ಶವಿಲ್ಲದೆ ಯಾವ ಕಾವ್ಯವೂ ದೊಡದಡ ಕಾವ್ಯವಾಗಿಲ್ಲ ಎಂದು ನನ್ನ ಭಾವನೆಯಾಗಿದೆ. ಇದಲ್ಲದೆ ಜೀವನದ ಚಿಕ್ಕಚಿಕ್ಕ ಸಂತೋಷಗಳಲ್ಲಿ ಅಂಥ ಒಂದು ಸ್ಪರ್ಶವನ್ನು ಹುಡುಕುವ ರೀತಿ ಕೂಡ ಕನ್ನಡ ಕಾವ್ಯಕ್ಕೆ ಹೊಸ ಆಯಾಮವನ್ನು ಜೋಡಿಸಬಹುದೆಂಬ ಆಶಯವನ್ನು ಬಹು ಕಾಲದಿಂದ ನಾನು ಹೊಂದಿದ್ದೆ. ಈಗ ಮೊಗಸಾಲೆಯವರ ಕವನಗಳಲ್ಲಿ ನನ್ನ ಈ ಆಶಯವು ಫಲಿತಗೊಳ್ಳುವುದು ನನಗೆ ಸ್ಪಷ್ಟವಾಗಿ ಗೋಚರಿಸತೊಡಗಿದೆ. ಮರ, ಮಳೆ, ಹೂವು, ತುಂತುರು ಇವುಗಳು ಸೃಷ್ಟಿಯಲ್ಲಿ ಕೊಡುವ ಸಂತೋಷವು ಸ್ವಭಾವದ ಸಂತೋಷದೊಡನೆ ಒಂದಾದಾಗ ಉಂಟಾಗುವ ಸ್ಪರ್ಶಮೇಳವನ್ನು ಕುರಿತು ಇಲ್ಲಿ ಸಾಕಷ್ಟು ಪದ್ಯಗಳಿವೆ.
ಪ್ರೊ ಮಾಧವ ಕುಲಕರ್ಣಿ (‘ಅರುವತ್ತರ ತೇರು’ ಮುನ್ನುಡಿಯಲ್ಲಿ)
0 ಪ್ರತಿಕ್ರಿಯೆಗಳು