ನಂಬಿಕೆಗಳ ಸೇತುವೆ ಕುಸಿದು ಬಿದ್ದ ಮೇಲೆ…
ಡಾ ಪದ್ಮಿನಿ ನಾಗರಾಜು
ಸಮುದ್ರ ಮಂಥನದ
ಅಸುರರು ದೇವತೆಗಳು
ಭೂಲೋಕಕ್ಕಿಳಿದಿಹರು
ಅಸುರರು ಯಾರೋ
ದೇವತೆಗಳು ಯಾರೋ
ಚಹರೆಯೇ ಕಾಣದಾಗಿದೆ
ಮೋಹಿನಿ ಹಿಡಿದ
ಅಮೃತದ ಕೊಡದ
ಮೋಹಕ್ಕೆ ವಶವಾಗಿ
ಸದಾ ಜಗ್ಗಾಡುತಿಹರು
ಕಣ್ಣು ಹೊಸಕುವ ಮುನ್ನ
ಅದೇನೋ ಗೀಚಿ ಭೂಗತವಾಗಿ
ಕಿಡಿ ಹಚ್ಚಿ ಸಂತೃಪ್ತರಾಗುವರು
ಯುದ್ಧಭೂಮಿ ಕೈಬೆರಳಲಿನಲಿ
ಅವರವರ ಭಾವಕ್ಕೆ ಭಕುತಿಗೆ
ತಮ್ಮದೇ ಭಜನೆಯ ಪೋಸ್ಟು
ಎಲ್ಲಿಯೋ ಕುಳಿತು ಒತ್ತಿ
ನೇಪಥ್ಯಕೆ ತೆರಳಿದರೆ ಸಾಕು
ಮಿಸೈಲ್ಗಳ ಬಾಂಬುಗಳ ಹಾರಾಟ
ವ್ಯಕ್ತಿಗೋ ಸಮಷ್ಠಿಗೋ
ಮರ್ಮಘಾತಿಸಿ ಬಿಟ್ಟರಷ್ಟೇ ಸಾಕು
ಅವರವರೇ ತಿವಿದು ಕೊಂದು
ಸಾಯುವವರ ವಿಡಿಯೋ ಮಾಡಿ
ಜೆಟ್ಟುಗಳಂತೆ ಹಾರಿಬಿಟ್ಟು
ಜಗದ ತುಂಬಾ ವಿಷವ
ಪಸರಿಸಿ ಸಂತೃಪ್ತರಾಗುವ
ರಕ್ತಪಿಪಾಸುಗಳಲ್ಲಿಹರು
ಅವರ ಮನೆಗಿವರು
ಇವರ ಮನೆಗಿವರು
ಕಿಚ್ಚು ಹಚ್ಚಿ ಹುಚ್ಚು
ಸ್ಲೋಗನ್ನುಗಳ ಡ್ರೋನ್ಗಳ
ಹಾರಿಸಿದರೆ ಸಾಕು
ಗುರಿಯಿಟ್ಟು ಸಿಡಿಯುವವು
ಇರುವುದೊಂದೇ ಭೂಮಿ
ಇದೇ ನೆಲದ ಕೂಸುಗಳು ನಾವು
ಎದೆಗಂಟಿದ ಪ್ರೀತಿಯ ನದಿಯಲಿ
ದೋಣಿ ನಡೆಸುವ ಅಂಬಿಗರಾಗದಿರೆ
ಬದುಕಿದ್ದು ಫಲವೇನು?
ನಂಬಿಕೆಗಳ ಸೇತುವೆ
ಕುಸಿದು ಬಿದ್ದ ಮೇಲೆ
ಕ್ಷಮೆಗಳ ಮಳೆ
ಸುರಿದರೆಷ್ಟು ಬಿಟ್ಟರೆಷ್ಟು
ಸುಡುವ ಮನೆಯ
ಗಳ ಕಿತ್ತು ನೀರ ಕಾಯಿಸಿ
ಮಿಂದದ್ದು
ಸತ್ತ ಲಾಶ್ಗಳ ಲೆಕ್ಕವಿಟ್ಟು
ಮತ್ತಷ್ಟು ಕೊಂದದ್ದು
ಮುಗಿಯದ ಲೆಕ್ಕವಿದು
ನಂಬಿಕೆ ಸೇತುವೆಗಳು ಕುಸಿದು ಮೇಲೆ….ಏನಾದರೆ ಏನು?..ಮೇಡಮ್ ..ಕವನ ಅರ್ಥಗರ್ಭಿತವಾಗಿದೆ…ಕಾಲಕ್ಕೆ ಹಿಡಿದ ಕನ್ನಡಿಯಾಗಿದೆ
A telling poetic comment on present situation in the country.
G.N.Ranganatha Rao