ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ್ಷಾನ್ ಜ್ಷಿಯೋನೊ ಮತ್ತು ಸಾಲುಮರದ ತಿಮ್ಮಕ್ಕ – ಎಸ್ ದಿವಾಕರ್

1465185_446269972144437_611116965_n
ಎಸ್ ದಿವಾಕರ್

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಲಂಡನ್ನಿನ ಹಾರ್ವಿಲ್ ಪ್ರೆಸ್ ಎಂಬ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ 10-12 ಪುಟಗಳ ಒಂದು ಸಣ್ಣಕತೆಯನ್ನು ಸೊಗಸಾದ ಕೆಲವು ಚಿತ್ರಗಳ ಸಮೇತ ಪುಸ್ತಕ ರೂಪದಲ್ಲಿ ಪ್ರಕಟಿಸಿತ್ತು. ಫ್ರೆಂಚಿನಿಂದ ಅನುವಾದಗೊಂಡಿದ್ದ ಆ ಸಣ್ಣಕತೆಯ ಹೆಸರು ‘ದಿ ಮ್ಯಾನ್ ಹೂ ಪ್ಲ್ಯಾಂಟೆಡ್ ಟ್ರೀಸ್’. ಉತ್ತಮ ಪುರುಷ ನಿರೂಪಣೆಯಲ್ಲಿದ್ದ ಆ ಕತೆ ಬರೆದವನು ಜ್ಷಾನ್ ಜ್ಷಿಯೋನೊ.
ಆಲ್ಪ್ಸ್ ಪರ್ವತದ ತಪ್ಪಲಿನಲ್ಲಿ ನೀರುನಿಡಿಯಿಲ್ಲದ, ಸದಾ ಉರಿಬಿಸಿಲಲ್ಲಿ ಬೇಯುತ್ತಿದ್ದ ಒಂದು ಬೆಂಗಾಡು. ಅದರಲ್ಲಿ ದಾರಿ ತಪ್ಪಿದವನಂತೆ ತಿರುಗುತ್ತಿದ್ದ ಈ ಕತೆಯ ಹೆಸರಿರದ ನಿರೂಪಕನಿಗೆ ಒಮ್ಮೆ ವಿಪರೀತ ದಾಹವಾಗುತ್ತದೆ. ಕಡೆಗೆ ಎಲ್ಜೆಯಾರ್ ಬುಫಿಯೇ ಎಂಬ ಕುರಿ ಮೇಯಿಸುವವನೊಬ್ಬ ನೆಲಬಾವಿಯಿಂದ ನೀರೆತ್ತಿ ಕೊಟ್ಟು ಅವನ ದಾಹವನ್ನು ತಣಿಸುತ್ತಾನೆ. ನಿರೂಪಕ ಅಂದು ರಾತ್ರಿ ಅವನ ಮನೆಯಲ್ಲಿಯೇ ತಂಗಿರುವಾಗ ಆತ “ಒಂದು ಸಣ್ಣ ಚೀಲ ತಂದು ಅದರಿಂದ ಮೇಜಿನ ಮೇಲೆ ಓಕ್ ಮರದ ಬೀಜಗಳ ರಾಶಿಯೊಂದನ್ನು ಸುರಿದ. ಅವನ್ನು ಜಾಗ್ರತೆಯಿಂದ ಪರೀಕ್ಷಿಸುತ್ತಾ, ಅವುಗಳಲ್ಲಿ ಚೆನ್ನಾಗಿಲ್ಲದ್ದವನ್ನು ಬೇರ್ಪಡಿಸಿದ. ನಾನು ನನ್ನ ಚಿಲುಮೆ ಸೇದುತ್ತಿದ್ದೆ. ಬೇಕಾದರೆ ಸಹಾಯ ಮಾಡುತ್ತೇನೆಂದೆ. ಬೇಡ, ಅದು ತನ್ನ ಕೆಲಸವೆಂದ. ಅವ ಈ ಕೆಲಸದಲ್ಲಿ ತೋರುತ್ತಿದ್ದ ನಿಜವಾದ ಕಾಳಜಿ ನೋಡಿ ನಾನೂ ಒತ್ತಾಯಿಸಲಿಲ್ಲ. ಅದಷ್ಟೇ ನಮ್ಮ ಸಂಭಾಷಣೆಯಾಗಿತ್ತು. ಓಕ್ ಬೀಜಗಳ ಸಾಮಾನ್ಯ ದೊಡ್ಡ ರಾಶಿಯಾದಾಗ ಅವನ್ನು ನೂರರ ರಾಶಿ ಮಾಡಿ ಲೆಕ್ಕಮಾಡಿದ. ಹೀಗೆ ಮಾಡುತ್ತಾ ಮತ್ತೆ ಅವುಗಳಿಂದ ಸ್ವಲ್ಪ ಸಣ್ಣ ಬೀಜಗಳನ್ನು ಹಾಗೂ ಸ್ವಲ್ಪ ಒಡೆದುವನ್ನು ಬೇರ್ಪಡಿಸಿದ. ಅದಕ್ಕಾಗಿ ಬಹಳ ಹತ್ತಿರದಿಂದ ಅವನ್ನು ಪರೀಕ್ಷಿಸುತ್ತಿದ್ದ. ಹೀಗೆ ಅವನೆದುರು ನೂರು ಸರಿಯಾದ ಬೀಜಗಳಾದಾಗ ಕೆಲಸ ನಿಲ್ಲಿಸಿದ.”
ನಿರೂಪಕನಿಗೆ ಸಹಜವಾಗಿಯೇ ಕುತೂಹಲ. ಹಾಗಾಗಿ ಮರುದಿನ ಬೂಫಿಯೇಯನ್ನು ಹಿಂಬಾಲಿಸುತ್ತಾನೆ. ಅವನು ತನ್ನ ಕುರಿಮಂದೆಯನ್ನು ಕಾಯಲು ನಾಯಿಯನ್ನಿಟ್ಟು ಇನ್ನೊಂದು ಜಾಗಕ್ಕೆ ಹೋಗಿ ಅಲ್ಲಿನ ನೆಲದಲ್ಲಿ ತೋರು ಬೆರಳಿನಷ್ಟು ದಪ್ಪವಾದ ಒಂದು ಕಬ್ಬಿಣದ ಸರಳಿನಿಂದ ತೂತುಗಳನ್ನು ಕೊರೆದು, ಆ ತೂತುಗಳಲ್ಲಿ ಹಿಂದಿನ ರಾತ್ರಿ ಆರಿಸಿಟ್ಟುಕೊಂಡಿದ್ದ ಓಕ್ ಬೀಜಗಳನ್ನು ನೆಡುತ್ತಾನೆ. “ಆ ಭೂಮಿ ಅವನಿಗೆ ಸೇರಿದ್ದೇನೋ ಎಂದು ಕೇಳಿದೆ. ಇಲ್ಲವೆಂದು ಉತ್ತರಿಸಿದ. ಬೇರೆ ಯಾರಿಗೆ ಸೇರಿದ್ದೆಂದು ಅವನಿಗೆ ತಿಳಿದಿತ್ತೆ? ಆತನಿಗೆ ಗೊತ್ತಿರಲಿಲ್ಲ. ಪ್ರಾಯಶಃ ಅದು ಸಾರ್ವಜನಿಕ ಭೂಮಿಯಾಗಿರಬಹುದು ಅಥವಾ ಅದನ್ನು ಗಮನಿಸದ ಯಾರದ್ದಾದರೂ ನೆಲವಾಗಿರಬಹುದು. ಅದರ ಒಡೆತನ ಯಾರದ್ದೆಂದು ತಿಳಿಯುವ ಅಗತ್ಯ ಆತನಿಗಿರಲಿಲ್ಲ…. ಮೂರು ವರ್ಷಗಳಿಂದ ಈ ನಿರ್ಜನ ಪ್ರದೇಶದಲ್ಲಿ ಆತ ಮರ ನೆಡುತ್ತಿದ್ದ. ಒಂದು ಲಕ್ಷ ಈಗಾಗಲೇ ನೆಟ್ಟಿದ್ದ. ಆ ಒಂದು ಲಕ್ಷದಲ್ಲಿ ಇಪ್ಪತ್ತು ಸಾವಿರ ಆಗಲೇ ಮೇಲೆ ಬಂದಿದ್ದವು”. ಮುಂದೆ ನಿರೂಪಕನಿಗೆ ಅದೆಷ್ಟು ಆಸಕ್ತಿಯುಂಟಾಗುವುದೆಂದರೆ ಅವನು ಬುಫಿಯೇಯ ನಿಸ್ವಾರ್ಥ ದುಡಿಮೆಯಿಂದಾಗಿ ಬೋಳುಗುಡ್ಡಗಳ ಆ ನಿರ್ಜನ ಪ್ರದೇಶ ಕ್ರಮೇಣ ನೀರಿನ ಬುಗ್ಗೆಯಾಗಿ, ಕೃಷಿ ಭೂಮಿಯಾಗಿ, ಸುಖ ಸಂತೋಷಗಳನ್ನು ಅನುಭವಿಸುವ ಹಳ್ಳಿಗಳಾಗಿ ಪರಿವರ್ತನೆಗೊಳ್ಳುವುದನ್ನು ನೋಡಲೆಂದೇ ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತಾನೆ. ಅವನಿಗೆ ಬುಫಿಯೇಯ ಬದುಕೇ ಒಂದು ದೃಷ್ಟಾಂತ ಕತೆಯಂತೆ ಭಾಸವಾಗುತ್ತದೆ.
12BG__SAALUMARADA__2103206f
1953ರಷ್ಟು ಹಿಂದೆ ಫ್ರಾನ್ಸಿನಲ್ಲಿ ಪ್ರಕಟವಾದ ಈ ಕತೆ ತನ್ನ ಕಾಲಕ್ಕಿಂತ ತುಂಬಾ ಮುಂದಿತ್ತು; ಹಳ್ಳಿಗಾಡಿನ ನೈಸರ್ಗಿಕ ಸಮತೋಲನವನ್ನು ಮತ್ತೆ ಕಂಡುಕೊಳ್ಳುವಂತೆ, ಅದರ ವಿನಾಶವನ್ನು ತಪ್ಪಿಸುವಂತೆ ಓದುಗರನ್ನು ಪ್ರೇರೇಪಿಸುವಂತಿತ್ತು; ಒಬ್ಬನೇ ಒಬ್ಬ ಮನುಷ್ಯ ಕೂಡ ಮನಸ್ಸು ಮಾಡಿದರೆ ತನ್ನನ್ನು – ತನ್ಮೂಲಕ ಜಗತ್ತನ್ನು – ಬದಲಾಯಿಸಬಲ್ಲನೆಂಬುದಕ್ಕೆ ಒಂದು ಜ್ವಲಂತ ನಿದರ್ಶನವಾಗಿತ್ತು.
ಜ್ಷಾ ಜ್ಷಿಯೋನೊ ಹುಟ್ಟಿದ್ದು 1895ರಲ್ಲಿ, ಫ್ರಾನ್ಸ್ನ ಮನೋಸ್ಕ್ ಎಂಬಲ್ಲಿ. ಅವನ ತಂದೆ ಚಮ್ಮಾರನಾಗಿದ್ದ. ತಾಯಿ ಅಗಸಗಿತ್ತಿ. ಕುಟುಂಬದ ದಾರಿದ್ರ್ಯದಿಂದಾಗಿ 16ನೆಯ ವಯಸ್ಸಿಗೇ ಒಂದು ಬ್ಯಾಂಕಿಗೆ ಸೇರಿ ಸುಮಾರು ಹದಿನೆಂಟು ವರ್ಷ ಗುಮಾಸ್ತನಾಗಿ ದುಡಿದ. ಜೊತೆಗೆ ಯೂರೋಪಿನ ಅಭಿಜಾತ ಕೃತಿಗಳನ್ನು ಓದಿಕೊಂಡ. ಪ್ರಖ್ಯಾತ ಲೇಖಕ ಆಂದ್ರೆ ಜೀದ್ನ ನೆರವಿನಿಂದ ಅವನ ಎರಡು ಕಾದಂಬರಿಗಳು ಪ್ರಕಟವಾಗಿ ವಿಮರ್ಶಾ ಮನ್ನಣೆ ಪಡೆದುಕೊಂಡವು. ರೈತರೇ ನಾಯಕರಾಗಿದ್ದ ಮೊದಲ ಕಾದಂಬರಿಗಳಲ್ಲಿ ನಿಸರ್ಗದ ಬಗ್ಗೆ ಗಾಢವಾದ ಪ್ರೀತಿಯಿದೆ; 1940ರ ದಶಕದ ಕಾದಂಬರಿಗಳಲ್ಲಿ ಓದುಗರು ಅನುಭವಿಸಬಹುದಾದ ನಿರ್ದಿಷ್ಟ ರಾಜಕೀಯ, ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆಯಿದೆ. ನಂತರದ ಕೆಲವು ಕಾದಂಬರಿಗಳಲ್ಲಿ ಬಾಲ್ಝಾಕನಂತೆ ಸಮಾಜದ ಎಲ್ಲ ವರ್ಗಗಳವರನ್ನು ಚಿತ್ರಿಸುವ ಮಹತ್ವಾಕಾಂಕ್ಷೆಯಿದೆ. ಪ್ರಸಿದ್ಧ ಲೇಖಕ ಆಂದ್ರೆ ಮಾರ್ಲೋ “ನಮ್ಮ ಪೀಳಿಗೆಯ ಶ್ರೇಷ್ಠ ಲೇಖಕ”ನೆಂದು ಪ್ರಶಂಸಿಸಿದ ಜ್ಷಿಯೋನೊ ಸುಮಾರು 30 ಕಾದಂಬರಿಗಳನ್ನು, ಅನೇಕಾನೇಕ ಸಣ್ಣಕತೆಗಳನ್ನು ಬರೆದ. ಅವನು ತೀರಿಕೊಂಡದ್ದು 1970ರಲ್ಲಿ.
ಫ್ರಾನ್ಸಿನ ಹೊರಗೆ ಜ್ಷಿಯೋನೋನ ಸುಪ್ರಸಿದ್ಧ ಕೃತಿಯೆಂದರೆ ‘ದಿ ಮ್ಯಾನ್ ಹೂ ಪ್ಲ್ಯಾಂಟೆಡ್ ಟ್ರೀಸ್’ ಎಂಬ ಕತೆಯೇ. ಗಿಡಮರಗಳನ್ನು ನೆಡುವ ಮೂಲಕ ಜನವಸತಿಯಿಲ್ಲದ, ಮರುಭೂಮಿಯಂತಾಗಿದ್ದ ಒಂದು ಪ್ರದೇಶವನ್ನು ನಂದನವನವನ್ನಾಗಿ ಪರಿವರ್ತಿಸಿದವನೊಬ್ಬನ ಈ ಕತೆ ಜ್ಷಿಯೋನೋನ ನಿಸರ್ಗಪ್ರೀತಿಯನ್ನು ಹೊಮ್ಮಿಸಿತು. ಇದರಿಂದಾಗಿ ಅವನು ಆಧುನಿಕ ಪರಿಸರ ಚಳವಳಿಯ ಅಗ್ರಗಾಮಿಯೆನಿಸಿದ. ಈ ಕತೆಗಾಗಿ ತನಗೆ ಗೌರವ ಧನ ಬೇಡವೆಂದ; ಇದನ್ನು ಯಾರು ಬೇಕಾದರೂ ಪುನರ್ಮುದ್ರಿಸಬಹುದೆಂದು ಅಥವಾ ಯಾವುದೇ ಭಾಷೆಗೆ ಅನುವಾದಿಸಿಕೊಳ್ಳಬಹುದೆಂದು ಪ್ರಕಟಿಸಿದ. 1987ರಲ್ಲಿ ಇದೇ ಕತೆಯನ್ನು ಮುಖ್ಯವಾಗಿಟ್ಟುಕೊಂಡು ನಿರ್ಮಿಸಲಾದ ಒಂದು ಅನಿಮೇಷನ್ ಚಿತ್ರ ವಿವಿಧ ದೇಶಗಳಲ್ಲಿ ಪ್ರದರ್ಶನಗೊಂದು ತುಂಬ ಯಶಸ್ವಿಯಾಯಿತು. ಅದನ್ನು ತಯಾರಿಸಿದವನು ಫ್ರೆಡೆರಿಕ್ ಬ್ಯಾಕ್.
ಅಂದ ಹಾಗೆ ನಾನು ಜ್ಷಿಯೋನೋನ ಈ ಕತೆಯನ್ನು ಓದಿದ್ದು ಹತ್ತು ಹನ್ನೆರಡು ವರ್ಷಗಳ ಹಿಂದೆ. ಮೊನ್ನೆ ಮೊನ್ನೆ ಮನೋಹರ ಗ್ರಂಥಮಾಲೆಯ ಸಮೀರ ಜೋಶಿಯವರು ನನಗೆ ಇದೇ ಲೇಖಕನ ‘ಕರುಣೆಯ ಏಕಾಂತ’ ಎಂಬ ನಾಲ್ಕು ಸಣ್ಣಕತೆಗಳ ಸಂಕಲನವೊಂದನ್ನು ಕಳಿಸಿಕೊಟ್ಟರು. ಫ್ರೆಂಚಿನಿಂದ ಜ್ಷಾಂ ಲುಕ್ ಪ್ರೋಫಿ ಮತ್ತು (ಕತೆಗಾರ ಮತ್ತು ಕಲಾವಿದ) ಆರ್ಯ ಅನುವಾದಿಸಿರುವ ಈ ಸಂಕಲನವನ್ನು 1987ರಷ್ಟು ಹಿಂದೆಯೇ ಮನೋಹರ ಗ್ರಂಥಮಾಲೆಯು ಧಾರವಾಡದ ಫ್ರೆಂಚ್ ಅಸೋಸಿಯೇಷನ್ನಿನ ಸಹಯೋಗದಿಂದ ಪ್ರಕಟಿಸಿತು. ಇದರಲ್ಲಿ ನಾನು ಇದುವರೆಗೂ ಉಲ್ಲೇಖಿಸಿದ ಸಣ್ಣಕತೆ ‘ಮರನೆಟ್ಟ ಮನುಷ್ಯ’ ಎಂಬ ಹೆಸರಿನಲ್ಲಿ ಅನುವಾದಗೊಂಡಿರುವುದನ್ನು ಕಂಡು ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ನಾನು ಮೇಲೆ ಉದ್ಧರಿಸಿರುವ ಕತೆಯ ಕೆಲವು ಪ್ಯಾರಾಗಳು ಈ ಕತೆಯವೇ.
ಫ್ರೆಂಚ್ ಭಾಷೆಗೆ ಅದರದೇ ಆದ ಜಾಯಮಾನವುಂಟಲ್ಲವೆ? ನಾವು ಸಾಮಾನ್ಯವಾಗಿ ಫ್ರಾನ್ಸ್ ಎಂದು ಉಚ್ಚರಿಸುತ್ತೇವಲ್ಲ, ಅದರ ಸರಿಯಾದ ಉಚ್ಚಾರಣೆ ಫ್ರುವಾನ್ಸ್. ಈ ಪುಸ್ತಕದ ಅನುವಾದಕರಲ್ಲಿ ಒಬ್ಬರು ಫ್ರೆಂಚ್ ಭಾಷೆಯವರೇ ಆಗಿರುವುದರಿಂದ ಬಹುಶಃ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಫ್ರೆಂಚ್ ನಾಮಪದಗಳ ಸರಿಯಾದ ಉಚ್ಚಾರಣೆಯಾಗಿದೆ. ‘ಮರನೆಟ್ಟ ಮನುಷ್ಯ’ ಕತೆಯಲ್ಲದೆ ‘ಮೌಸಾಂದ ಝೊಫ್ವರ್’, ‘ವನದೇವನ ನಾಂದಿ’, ‘ನನ್ನ ನಲಿವು ನಿರಂತರವಿರಲಿ’ ಎಂಬ ಇನ್ನೂ ಮೂರು ಸಣ್ಣಕತೆಗಳು ಈ ಸಂಕಲನದಲ್ಲಿವೆ. ಬೆಲೆ ಕೇವಲ 20 ರೂ. ಪ್ರಕಟವಾಗಿ ಇಪ್ಪತ್ತೆಂಟು ವರ್ಷವಾದರೂ ಕೂಡ ಇನ್ನೂ ಇದರ ಪ್ರತಿಗಳು ಉಳಿದಿವೆಯೆಂದರೆ ಏನು ಹೇಳೋಣ?
ಜ್ಷಿಯೋನೊ ಬರೆದದ್ದು ಸದಾಶಯವುಳ್ಳ ಒಂದು ಕಾಲ್ಪನಿಕ ಕತೆ. ಅದನ್ನು ಕನ್ನಡದಲ್ಲಿ ಮತ್ತೆ ಓದಿದಾಗ ನನಗೆ ಕೂಡಲೇ ನೆನಪಾದವರು ನಮ್ಮ ಸಾಲುಮರದ ತಿಮ್ಮಕ್ಕ. ಅವರು ರಾಮನಗರ ತಾಲೂಕಿನ ಹುಲಿಕಲ್ ಗ್ರಾಮದವರು; ಯಾವ ವಿದ್ಯಾಭ್ಯಾಸವೂ ಇಲ್ಲದೆ ಹತ್ತಿರದ ಕಲ್ಲುಗಣಿಯಲ್ಲಿ ದುಡಿದವರು; ಮಕ್ಕಳಿಲ್ಲವೆಂದು ಕೊರಗದೆ ಮರಗಳನ್ನೇ ಮಕ್ಕಳಂತೆ ಬೆಳೆಸಿದವರು. ಹುಲಿಕಲ್ಲಿನ ಬಳಿ ಕೆಲವು ಆಲದ ಮರಗಳಿದ್ದವಂತೆ. ಆಕೆ ಮೊದಲ ವರ್ಷ ತನ್ನ ಗಂಡನ ಜೊತೆ ಆ ಮರಗಳಿಂದ ಕಸಿಕಟ್ಟಿದ ಹತ್ತು ಗಿಡಗಳನ್ನು ನೆಟ್ಟರು. ಎರಡನೆಯ ವರ್ಷ 15 ಗಿಡಗಳು, ಮೂರನೆಯ ವರ್ಷ 20 ಗಿಡಗಳು. ಗಿಡಗಳಿಗೆ ನಾಲ್ಕು ಕಿಲೊಮೀಟರ್ ದೂರನಿಂದ ನೀರು ಹೊತ್ತು ತಂದರು; ದನಕರುಗಳ ಬಾಯಿಗೆ ಸಿಕ್ಕದಿರಲೆಂದು ನೆಟ್ಟ ಪ್ರತಿ ಸಸಿಯ ಸುತ್ತಲೂ ಮುಳ್ಳುಬೇಲಿ ಕಟ್ಟಿದರು. ಒಟ್ಟಿನಲ್ಲಿ ಅವರ ಸತತ ಪ್ರಯತ್ನದಿಂದಾಗಿ ಇಂದು ಹುಲಿಕಲ್ನಿಂದ ಕೂದೂರಿನವರೆಗೂ ನಳನಳಿಸುತ್ತಿವೆ – ನೆಲದಾಳದಲ್ಲಿ ಬೇರುಬಿಟ್ಟ ನೂರಾರು ಆಲದ ಮರಗಳು.
‘ನೀ ಕಂಡ ಕನಸು ನೀ ಕಂಡ ಬದುಕಿಗಿನ್ನೆಷ್ಟು ದೂರ ಕವಿಯೆ?’ ಇದು ಕೆ.ಎಸ್.ನ. ಅವರ ಕವಿತೆಯೊಂದರ ಸಾಲು. ಜ್ಷಿಯೋನೋನ ಕತೆಯಲ್ಲಿರುವುದು ಕವಿಯೊಬ್ಬನ ಕನಸೇ ಅಲ್ಲವೆ? ಆ ಕನಸು ನನಸಾಗುವುದು ಸಾಲುಮರದ ತಿಮ್ಮಕ್ಕರಂಥವರಿಂದ ಮಾತ್ರ.
 

‍ಲೇಖಕರು G

7 August, 2015

1 Comment

  1. ಆನಂದತೀರ್ಥ ಪ್ಯಾಟಿ

    ಹೌದು, ಆ ಕಥೆ ತುಂಬ ಚೆನ್ನಾಗಿದೆ.
    ಪರಿಸರ ಸಂರಕ್ಷಣೆಯ ಕಾಳಜಿಯೊಂದಿಗೆ ಹಲವು ಸಂಸ್ಥೆಗಳು ಜಗತ್ತಿನಾದ್ಯಂತ ಹುಟ್ಟಿಕೊಳ್ಳಲು ಆ ಕಥೆಯೂ ಕಾರಣವಾಗಿದೆ ಎಂಬುದು ಇನ್ನೊಂದು ಅಚ್ಚರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading