
ಸೀತಾಮಾತೆ
ಲಕ್ಷ್ಮಣರೇಖೆ
ದಾಟಿದರೆ
ಖಾತ್ರಿ ಅಶೋಕವನ
ಲಂಕಾದಹನ ಸೇತುಬಂಧನ.
ರಾವಣನೇ
ದಾಟಿದ್ದರೆ ಏನಾಗುತ್ತಿತ್ತೇ ಗೆಳತಿ.
ಹಾ.. ಲಕ್ಷ್ಮಣ ಎಂಬ ಉದ್ಗಾರ ಶೂನ್ಯ.
ಪ್ರೇಮದ ಉತ್ಕಟತೆಯಲ್ಲಿ ರಾವಣ
ದಾಟಿದ ಕಾಲಲ್ಲೇ ಉರಿದುರಿದು
ಸುಗ್ರೀವನಿಗೆ ಸಿಗುತ್ತಿರಲಿಲ್ಲ ತಾರೆ.
ಕುಂಭಕರ್ಣನಿಗೆ ನಿದ್ದೆ ನಿರ್ವಿಘ್ನ.
ಅರಗಿನ ಮನೆಯಿಂದ
ಹೊರಬಿದ್ದರೆ ಹಿಡಿಂಬವನ
ಏಕಚಕ್ರನಗರಿ ಬಕಾಸುರ ವಧೆ.
ನಡುವೆ ಹಿಡಿಂಬೆಯ ಜೊತೆ ಸರಸ.
ಕೊನೆಯಲ್ಲಿ ಸಿಕ್ಕವಳು ಪಾಂಚಾಲಿ.
ಕರ್ಣನ ಕರ್ಣಕಠೋರ ನಿರ್ಧಾರದಲ್ಲಿ
ಪಾಂಚಾಲಿಗೆ ಐವರೇ ಗತಿ.
ದ್ರೌಪದಿಯ ಸಂಗವಾದರೂ ಬಲಭೀಮ
ಸಿಕ್ಕಾಪಟ್ಟೆ ಸಂತ.
ರಸಿಕ ಅರ್ಜುನನಿಗೆ ಸದಾ ನವವಸಂತ.
ಸಾವು ಅವಳ ಸಂಗದಲ್ಲಿದೆ ಎಂದು
ಗೊತ್ತಿದ್ದೂ
ಪಾಂಡು ನಿರುದ್ವಿಗ್ನ.
ಸಂಗಮದಲ್ಲಿ ಮಹಾಸಂಗಮ.
ಗಂಡನ ಚಿತೆಯೆದುರು ತಾಯಹಂಬಲದ
ಮಾದ್ರಿ.
ಮತ್ತದೇ ಶ್ಲೋಕ: ಮಾ ನಿಷಾಧ.
ಬೇಡ.. ಬೇಡ..
ಮಿಲನಕ್ಕೆ ಹಾರೈಸುವ ಮೈಮನಗಳಿಗೆ
ಸಣ್ಣದೊಂದು ಎಚ್ಚರಿಕೆ.
ಮಾಡು ಇಲ್ಲವೆ ಮಡಿ.
ಮಾಡಿ ಮಡಿವವರ ನುಡಿ.
ಮಾಡೂ ಸಿಗದೇ ಗೂಡೂ ಸಿಗದೆ
ಸಂತರ ಸಂತತಿಗೆ
ನಿರಾತಂಕ
ಗುಡಿ.
ನಾನು ನೀನೆಂಬುದು
ಬೇರಲ್ಲ ಕಾಣಿರೋ.
ತಾಯಿ
ಬೇರು.





ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್…..” ಇಂತಹ ಒಳನೋಟಗಳ ಜೊತೆಗಿನ ಆಟ ಜೋಗಿಯದ್ದೇ ದಿಟ ” ನಿಜಕ್ಕೂ ಕಾಡಿ ಬರೆಸಿದಂತಿದೆ…….! ಇಷ್ಟವಾಯಿತು……
– ಸಂತೋಷ್ ಅನಂತಪುರ