ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೈಲಿನೊಳಗಿಂದ ನವೀನ್ ಸೂರಿಂಜೆ

‘ಮಗ್‌ಶಾಟ್’ ಆಚೆಗಿನ ಮುಖ…

ನವೀನ್ ಸೂರಿಂಜೆ

ಕೃಪೆ: ವಿಜಯ ಕರ್ನಾಟಕ

ಆತನ ಮೇಲೆ ಆರು ಪ್ರಕರಣ ದಾಖಲಾಗಿತ್ತು. ಪೊಲೀಸರ ಪ್ರಕಾರ ಆತನೊಬ್ಬ ಪಳಗಿದ ಸರಗಳ್ಳ. ಬೀದಿಯ ಬದಿಯಲ್ಲಿ ಅವಿತುಕೊಂಡಂತೆ ನಿಂತಿರುತ್ತಿದ್ದ ಆತ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಗೆ ಕೈ ಹಾಕಿ ಸರ ಎಳೆದು ಪರಾರಿಯಾಗುತ್ತಿದ್ದ. ಮಹಿಳೆ ಬೊಬ್ಬೆ ಹೊಡೆಯುತ್ತಿದ್ದಂತೆ ಗುಂಪುಗೂಡುತ್ತಿದ್ದ ಸಾರ್ವಜನಿಕರ ಕೈಗೂ ಸಿಕ್ಕಿ ಬೀಳದೆ ಪರಾರಿಯಾಗುತ್ತಿದ್ದ. ಇಂತಹ ಜಾಣಾಕ್ಷ ಸರಗಳ್ಳ ಅದೊಂದು ದಿನ ರೈಲ್ವೇ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಠಾಣೆಗೆ ಕರೆತಂದು ವಿಚಾರಣೆ ಮಾಡಿದ ನಂತರ ಈ ಹಿಂದೆ ಪತ್ತೆಯಾಗದೆ ಉಳಿದಿದ್ದ ಐದು ಸರಗಳ್ಳ ಪ್ರಕರಣಗಳ ಆರೋಪಿಯೂ ಈತನೇ ಆಗಿರಬಹುದು ಎಂದು ಪೊಲೀಸರು ನಿರ್ಧರಿಸಿದ್ದರು. ಈತನ ಮೇಲೆ ಆರು ಕಡೆಗಳಲ್ಲಿ ಸರ ಎಗರಿಸಿ ಓಡಿಹೋದ ಪ್ರಕರಣ ದಾಖಲಿಸಿದರು. ಈ ಸುದ್ದಿ ಪತ್ರಿಕೆಯಲ್ಲಿಯೂ ಚಿಕ್ಕದಾಗಿ ಬಂತು. ಆರೋಪಿಯ ‘ಮಗ್‌ಶಾಟ್’ ಫೋಟೋ ಕೂಡ ಹಾಕಿದ್ದರು.
ಇಷ್ಟೆಲ್ಲಾ ಪ್ರಚಂಡ ಸಾಹಸ ಮಾಡಿದ ಇವನನ್ನು ಭೇಟಿ ಮಾಡಿದಾಗ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು – ಅವನಿಗೆ ಒಂದು ಕಾಲೇ ಇರಲಿಲ್ಲ!

ಉಳ್ಳಾಲ ನಿವಾಸಿಯಾಗಿದ್ದ ಈತನ ಮನೆ ರೈಲ್ವೇ ಗೇಟ್ ಪಕ್ಕದಲ್ಲೇ ಇತ್ತು. ಕಾಸರಗೋಡಿನಿಂದ ಬರುವ ರೈಲು ಉಳ್ಳಾಲ ಗೇಟ್ ದಾಟುವಾಗ ನಿಧಾನವಾಗುತ್ತಿತ್ತು. ಇದೇ ಕಲ್ಪನೆಯಲ್ಲಿ ರೈಲಿನಿಂದ ಇಳಿದಿದ್ದ ಆತನ ಕಾಲು ರೈಲಿನಡಿ ಸಿಲುಕಿ ತುಂಡಾಗಿತ್ತು. ಹೀಗೆ ಒಂದು ಕಾಲು ಕಳೆದು ಕೊಂಡ ಈತ ರೈಲ್ವೇ ನಿಲ್ದಾಣದಲ್ಲೇ ತಿರುಗಾಡಿಕೊಂಡಿದ್ದ. ಆತ ‘ಅನು ಮಾನಾ ಸ್ಪದ’ವಾಗಿ ಪೊಲೀಸರಿಗೆ ಕಂಡು ಬಂದಾಗ ಬಂಧಿಸಿ ಠಾಣೆಯ ಲ್ಲಿರಿಸಿದರು. ‘ಎರಡು ದಿನ ಕಳೆದರೂ ನನ್ನ ಪರವಾಗಿ ಯಾರೂ ಫೋನ್ ಮಾಡಲಿಲ್ಲ. ನನ್ನ ಮೇಲೆ ಆರು ಪ್ರಕರಣ ಹಾಕಿದ್ದಾರಂತಲೂ ನನಗೆ ಗೊತ್ತಾಗಲಿಲ್ಲ. ಇಲ್ಲಿಗೆ ಬಂದ ಮೇಲೆಯೇ ನನಗಿನ್ನು ಜೈಲೇ ಗತಿ ಎಂದು ಅರ್ಥವಾಗಿರುವುದು.’ ಎಂದು ಆತ ಕಂಡಕಂಡವರಲ್ಲಿ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ.
***
ಜೈಲಿಗೆ ಬಂದ ಮೇಲೆ ನನಗೆ ಹೊಸ ಲೋಕವನ್ನೇ ನೋಡಿದ ಹಾಗೆ ಆಗಿದೆ. ನನ್ನನ್ನು ಭೇಟಿ ಮಾಡಲು ಬರುವ ಗೆಳೆಯರ ಹತ್ತಿರ ಈಗೀಗ ಒಂದು ಮಾತು ಹೇಳುತ್ತೇನೆ: ಜರ್ನಲಿಸ್ಟ್ ಆದವನು ಅದರಲ್ಲೂ ವಿಶೇಷ ವಾಗಿ ಕ್ರೈಂ ವರದಿ ಮಾಡುವವರು ಒಂದು ತಿಂಗಳಾದರೂ ಜೈಲಿ ನಲ್ಲಿ ಇರಬೇಕು. ಆಗ ಅವರದ್ದೇ ತಪ್ಪುಒಪ್ಪುಗಳು ಅವರಿಗೆ ಅರ್ಥ ಆಗುತ್ತದೆ ಅಂತ. ‘ಎ’ ಬ್ಲಾಕ್ ಮತ್ತು ‘ಬಿ’ ಬ್ಲಾಕ್ ಎಂಬ ಎರಡು ಬ್ಲಾಕು ಗಳನ್ನು ಹೊಂದಿದ ಈ ಜೈಲಿನ ‘ಎ’ ಬ್ಲಾಕಿನಲ್ಲಿ, ಅದರೊಳಗೆ 5ನೇ ಬ್ಯಾರಕ್ ನಲ್ಲಿ, ನಾನು ಇದ್ದೇನೆ. ಈ ಜೈಲಿನಲ್ಲಿ ಲೆಕ್ಕವಿಲ್ಲದಷ್ಟು ‘ಕತೆ’ಗಳು.
ಕೆಲವರು ಬರುತ್ತಾರೆ, ಒಂದೆರಡು ದಿನಕ್ಕೇ ಹೋಗುತ್ತಾರೆ. ಮತ್ತೆ ಕೆಲವರು ಹಲವು ತಿಂಗಳಿಂದ ಇದ್ದಾರೆ. ನಮಗೆ ಆಗಾಗ ಹೊರಗೆ ಸುತ್ತಾ ಡಲು ಬಿಟ್ಟಾಗ ಹಲವು ವರ್ಷಗಳಿಂದ ಇಲ್ಲಿಯೇ ಇದ್ದವರೂ ಮಾತಿಗೆ ಸಿಕ್ಕುತ್ತಾರೆ. ತಮ್ಮ ಕತೆ ಹೇಳುತ್ತಾರೆ. ಅವರ ಮನೆಯ ಕತೆ ಹೇಳುತ್ತಾರೆ. ನಿಜವಾಗಿಯೂ ತಪ್ಪು ಮಾಡಿದವರು ಅದನ್ನೇ ಪರಾಕ್ರ ಮದ ಥರ ಹೇಳು ತ್ತಾರೆ. ಪೆದ್ದು ಪೆದ್ದಾಗಿರುವವರು, ಯಾರದೋ ಸಂಚಿಗೆ ಬಲಿ ಯಾದ ಅಮಾಯಕರೂ ಕೂಡ ಕತೆ ಹೇಳುತ್ತಾರೆ. ತಪ್ಪು ಮಾಡಿದ್ದರೂ ಕೆಲವರು ನಾನೇನೂ ತಪ್ಪೇ ಮಾಡಿಲ್ಲ ಎಂದು ಪೊಲೀ ಸರನ್ನೇ ದೂರುತ್ತಾ ಇರುತ್ತಾರೆ. ನಿಜ ಏನು, ಸುಳ್ಳು ಏನು ಅಂತ ನನಗೆ ಎಲ್ಲ ಸಂದರ್ಭ ಗಳಲ್ಲಿಯೂ ಗೊತ್ತಾಗುವುದಿಲ್ಲ ವಾದರೂ ಸಾಮಾನ್ಯ ಜ್ಞಾನಕ್ಕೆ ಕೆಲವು ವಿಷಯಗಳು ಅರ್ಥವಾಗುತ್ತವೆ. ಪೊಲೀಸ್ ಬ್ಲಾಗಿನಲ್ಲಿ ಬರುವ ಸುದ್ದಿ ಯನ್ನು ಕಾಪಿ ಮಾಡಿ ಸುದ್ದಿ ಮಾಡುವ ನಮ್ಮಂಥ ಮಾಧ್ಯಮದವರಿಗೆ ಕಾಲಿಲ್ಲದೆಯೂ ಸರ ಕದ್ದು ಪರಾರಿಯಾ ಗುವ ಆ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾ ಶವೇ ಇರುವುದಿಲ್ಲ. ಅವನು ಏನಿದ್ದರೂ ಸ್ಲೇಟು ಹಿಡಿದು ನಿಂತ ಒಂದು ಮಗ್ ಶಾಟ್ ಅಷ್ಟೆ. ಅದರಾಚೆ ಮತ್ತು ಕಂಬಿಯ ಹಿಂದೆ ನಾನು ಕಂಡ ಅವನ ಮುಖಕ್ಕೂ ಮತ್ತು ಮಗ್ ಶಾಟಿಗೋ ಸಂಬಂಧವೇ ಇಲ್ಲ! ‘ಭಾರೀ’ ಅಪರಾಧಗಳ ವರದಿಯಾದಾಗ ಆರೋಪಿ ಮಾತುಗಳನ್ನೂ ಹಾಕುವ ನಾವು ಸರ ಕದ್ದ ಕಳ್ಳನ ‘ಸ್ಟೇಟ್ಮೆಂಟಿನ’ ಬಗ್ಗೆ ತಲೆ ಕೆಡಿಸಿ ಕೊಂಡದ್ದು ಉಂಟಾ?
***
ಇನ್ನೊಂದು, ಬೆಳ್ತಂಗಡಿ ಬಳಿಯ ಹಳ್ಳಿಯಲ್ಲಿ ನಡೆದ ಘಟನೆ. ಬಹಳ ಹಳೆ ಕಾಲದ ಮನೆಯಲ್ಲಿ ದೈವ ದೇವರ ಚಿನ್ನ ಬೆಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಇರಬಹುದು ಎಂದು ಒಂದು ಕಳ್ಳರ ತಂಡ ಯೋಜನೆ ರೂಪಿಸಿತು. ರಿಪೇರಿಯಲ್ಲಿದ್ದ ಆ ಮನೆಗೆ ಯೋಜನೆಯಂತೆ ಕೂಲಿ ಕೆಲಸಕ್ಕೆ ತೆರಳಿದ ಕಳ್ಳರು ದರೋಡೆಯ ಜಾಗ ಪರಿಶೀಲನೆ ಮಾಡಿ ಒಂದು ದಿನ ರಾತ್ರಿ 11 ಗಂಟೆಗೆ ವೇಳೆಗೆ ದರೋಡೆಗೆ ಸಿದ್ಧರಾದರು. ಏಳು ಮಂದಿಯ ತಂಡ ಮನೆಯ ಮುಖ್ಯದ್ವಾರವನ್ನು ಮುರಿಯುವ ವೇಳೆ ಕಾಮಗಾರಿಯಲ್ಲಿದ್ದ ಮನೆಯ ಮೇಲ್ಛಾವಣಿಯ ಒಂದು ಹಲಗೆ ಕೆಳಕ್ಕೆ ಬಿತ್ತು.
ಮನೆ ರಿಪೇರಿಯಲ್ಲಿ ಇದ್ದುದರಿಂದ ಆ ಮನೆಯವರು ಪಕ್ಕದ ಮನೆ ಬಾಡಿಗೆ ತೆಗೆದುಕೊಂಡು ವಾಸಿಸುತ್ತಿದ್ದರು. ಸದ್ದಿಗೆ ಅಕ್ಕ ಪಕ್ಕದ ಮನೆಯ ವರು ಎದ್ದೇಳುತ್ತಿದ್ದಂತೆಯೇ ದರೋಡೆಕೋರರ ತಂಡ ಓಟ ಕಿತ್ತಿತು. ಸಾರ್ವಜನಿಕರು ಅಟ್ಟಿಸುತ್ತಿದ್ದಂತೆ ದರೋಡೆಕೋರರು ಜಮಾಲಾಬಾದ್ ಕೋಟೆಯ ಬಳಿ ಕಣ್ಮರೆಯಾಗಿದ್ದರು. ಜನರು ಆರೋಪಿಗಳನ್ನು ಓಡಿಸಿ ಕೊಂಡು ಹೋದರು. ಅವರಿಗೆ ಜಮಾ ಲಾಬಾದ್ ಕೋಟೆಯ ಪಕ್ಕದ ಇಳಿಜಾರಿನ ಒಂದು ರಮಣೀಯ ಸ್ಥಳದಲ್ಲಿ ರಾತ್ರಿ ಕುಡಿಯುವ ಹವ್ಯಾಸ ಹೊಂದಿದ್ದ ಯುವಕರ ತಂಡ ಕುಡಿದು ಅಡ್ಡಾಡುತ್ತಾ ಹೋಗುತ್ತಿರುವುದು ಕಾಣಿಸಿತು. ಅವರನ್ನೇ ದರೋ ಡೆಕೋರರು ಎಂದು ಭಾವಿಸಿದ ಸಾರ್ವಜ ನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಯುವಕರ ವಿರುದ್ಧ ಎಫ್‌ಐಆರ್ ದಾಖಲಾ ಯಿತು. ಬಂಧಿತರಲ್ಲಿ ಒಬ್ಬ ಯುವಕ ಹಳೆ ದರೋಡೆ ಆರೋಪಿಯಾಗಿದ್ದ. ಬಂಧಿತರೆಲ್ಲರೂ ಮಂಗಳೂರು ಜೈಲು ಸೇರಿದರು.
ಮನೆ ದರೋಡೆಗೆ ಸಂಚು ಹೂಡಿ ಪರಾರಿಯಾಗಿದ್ದ ನೈಜ ಆರೋಪಿಗಳು ಬೇರೊಂದು ದಿನ ರಬ್ಬರ್ ದರೋಡೆ ನಡೆಸಿ ವಾಪಸ್ಸಾಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಪೊಲೀಸರ ಮೇಲೆ ಇವರು ಹಲ್ಲೆಯನ್ನೂ ಕೂಡಾ ನಡೆಸಿದ್ದರು. ಇವರ ವಿರುದ್ಧ ದರೋಡೆ ಮತ್ತು ಹಲ್ಲೆ ಆರೋಪ ಹೊರಿಸಿ ಅವರನ್ನೂ ಕೂಡಾ ಮಂಗಳೂರು ಜೈಲಿಗೆ ಹಾಕಲಾಯಿತು.
ಜಮಾಲಾಬಾದ್ ಕೋಟೆ ಬಳಿ ಕುಡಿದು ಮಜಾ ಮಾಡುತ್ತಿದ್ದ ತಂಡವೂ ಈ ತಂಡವೂ ಒಂದೇ ಬ್ಯಾರಕ್‌ನಲ್ಲಿ ಮುಖಾಮುಖಿ ಯಾಯಿತು. ವಾಸ್ತವ ಅಂಶ ಏನೆಂದರೆ ರಬ್ಬರ್ ದರೋಡೆ ಮಾಡಿದ ತಂಡವೇ ಆ ಮನೆ ದರೋಡೆಗೆ ಯೋಜನೆ ತಯಾರಿಸಿ ವಿಫಲವಾಗಿ ಓಡಿ ಹೋಗಿತ್ತು. ಕುಡಿದು ಮಜಾ ಮಾಡುತ್ತಿದ್ದ ತಂಡದವರನ್ನು ಜೈಲಿಗೆ ಹಾಕಲಾಗಿತ್ತು. ತನ್ನದೇ ಯೋಜನೆಗೆ ಈ ಹುಡುಗರು ವಿನಾಕಾರಣ ಬಲಿಯಾ ಗಿದ್ದಾರಲ್ಲಾ ಎನಿಸಿ ದರೋಡೆ ತಂಡದ ಮುಖಂಡನಿಗೆ ಬೇಸರವಾಯಿತು. ಆದರೆ ಏನು ಮಾಡುವುದು? ಪರಿಸ್ಥಿತಿ ಕಾಂಪ್ಲೆಕ್ಸ್ ಆಗಿ ಎಲ್ಲವನ್ನೂ ನ್ಯಾಯಾಲಯಕ್ಕೆ ವಿವರಿಸುವ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ಎರಡೂ ತಂಡದವರಲ್ಲಿ ಇಲ್ಲ ಅನ್ನುವುದು ಮಾತ್ರ ಸತ್ಯ.
ದರೋಡೆ ಸಂಚುಕೋರ ಈ ಕತೆಯನ್ನು ನನ್ನಲ್ಲಿ ಹೇಳುತ್ತಿದ್ದಂತೆಯೇ ಆತನಿಗೆ ಸ್ಥಳೀಯ ನ್ಯಾಯಾಲಯದಲ್ಲಿ ಶಿಕ್ಷೆ ಘೋಷಣೆಯಾದ ಸುದ್ದಿಯೂ ಬಂತು. ಅವನು ಶಿಕ್ಷೆ ಅನುಭವಿಸಲು ಬೆಳಗಾವಿ ಜೈಲಿಗೆ ಹೋದ. ಆದರೆ ನನ್ನ ಮನಸ್ಸಿನಿಂದ ಈ ಕತೆ ಹೋಗುವುದು ಸಾಧ್ಯವೇ ಇಲ್ಲ. ಕುಡಿದು ಮೋಜು ಮಾಡಿದ ಅಮಾಯಕ ಹುಡುಗರ ಪಾಡು ನೆನೆಸಿ, ನಗುವುದೋ, ವ್ಯವಸ್ಥೆಯ ಬಗ್ಗೆ ಸಿಟ್ಟು ಮಾಡಿಕೊಳ್ಳುವುದೋ, ‘ವಿಧಿ’ ಎಂದು ಕೈ ಚೆಲ್ಲವುದೋ ಅರ್ಥ ಆಗುತ್ತಿಲ್ಲ. ಜೈಲಿನೊಳಗಿನ ಮಂದಿಯ ಜತೆ ಒಡನಾಟ ಹೆಚ್ಚಿದಂತೆ ಒಂದಂತೂ ಸ್ಪಷ್ಟವಾಯಿತು. ಗಮನಾರ್ಹ ವಲ್ಲದ ಪ್ರಕರಣಗಳನ್ನು ಹೊರತು ಪಡಿಸಿ ಉಳಿದಂತೆ ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರಿಗೆ ನೈಜ ಆರೋಪಿಗಳೇ ಬೇಕೆಂದೇನಿಲ್ಲ. ಪ್ರಕರಣವನ್ನು ಕ್ಲೋಸ್ ಮಾಡಿ ಕೈತೊಳೆದುಕೊಂಡರೆ ಸಾಕು. ಅತ್ತ ಕಡೆ ಪತ್ರಕರ್ತರಿಗೆ ಸ್ಟೋರಿ ಮಿಸ್ ಆಗದೆ ಬಂದರೆ ಸಾಕು. ಜತೆಗೆ ಮಗ್ ಶಾಟ್ ಇದ್ದರಂತೂ ಸಾಕೇ ಸಾಕು.
—————————-
ಲೇಖಕರು; ಹೋಂ ಸ್ಟೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪತ್ರಕರ್ತರು. ಸದ್ಯ ಇವರು ದಕ್ಷಿಣ ಕನ್ನಡದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಅವರಿಗೆ ಈಗಷ್ಟೇ ಜಾಮೀನು ದೊರೆತಿದ್ದು, ಇನ್ನೂ ಬಿಡುಗಡೆಯಾಗಬೇಕಿದೆ.

‍ಲೇಖಕರು G

22 March, 2013

3 Comments

  1. Dr.kiran.m gajanur

    your right naveen

  2. Arpitha

    Nanage Papillon jnapakakke Banda.

  3. ಹರಿ

    My God!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading