ರಾಜಾರಾಂ ತಲ್ಲೂರು
ಕೆಲವೊಮ್ಮೆ ಸರ್ಕಾರಗಳು ಬಹಳ ಲಾಜಿಕಲ್ ಆದ ತೀರ್ಮಾನಗಳನ್ನು ತೆಗೆದುಕೊಂಡಾಗ, ಅವು ಜನಸಾಮಾನ್ಯರ ಬದುಕಿನ ಮೇಲೆ ನೇರವಾಗಿ ಒಳ್ಳೆಯ ಪರಿಣಾಮ ಬೀರುವಂತಹದಾಗಿರುತ್ತವೆ. ಜೆನೆರಿಕ್ ಔಷಧಿಚೀಟಿ ಕಡ್ಡಾಯಗೊಳಿಸಿದ್ದು, ಸರ್ಕಾರಿ ಉದ್ಯೋಗದಲ್ಲಿರುವವರು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯ ಮಾಡಿದ್ದು ಅಂತಹ ಒಳ್ಳೆಯ ನಿರ್ಧಾರಗಳು.
ರಾಜ್ಯಸರ್ಕಾರದ ಸುತ್ತೋಲೆಯನ್ವಯ, ವೈದ್ಯರು ಇನ್ನು ಮುಂದೆ ಔಷಧಿಚೀಟಿ ಬರೆದುಕೊಡುವಾಗ ಕಡ್ಡಾಯವಾಗಿ ಔಷಧಿಯ ಜೆನೆರಿಕ್ ಹೆಸರಿನಲ್ಲೇ ಔಷಧಿ ಚೀಟಿ ಬರೆದುಕೊಡಬೇಕಾಗುತ್ತದೆ. ಅಗತ್ಯ ಔಷಧಿ ದರಗಳು ಹತೋಟಿ ತಪ್ಪಿ ಏರುತ್ತಿರುವ ಈ ದಿನಗಳಲ್ಲಿ ಇದು ಬಹಳ ಒಳ್ಳೆಯ ನಿರ್ಧಾರ.
ಭಾರತೀಯ ವೈದ್ಯಕೀಯ ಮಂಡಳಿ ಈ ಬಗ್ಗೆ ತನ್ನ ನಿಲುವನ್ನು 2002ರಲ್ಲೇ ಪ್ರಕಟಿಸಿದೆಯಾದರೂ ಆ ಬಗ್ಗೆ ಈ ತನಕ ಯಾರೂ ಮನಸ್ಸು ಮಾಡಿರಲಿಲ್ಲ. ಕೋಡ್ ಆಫ್ ಮೆಡಿಕಲ್ ಎಥಿಕ್ಸ್ ಹೀಗನ್ನುತ್ತದೆ. 1.5 Use of Generic names of drugs: Every physician should, as far as possible, prescribe drugs with generic names and he / she shall ensure that there is a rational prescription and use of drugs.
ಈ ಜನರಿಕ್ ಹೆಸರು ಯಾಕೆ ಉಪಯುಕ್ತವೆಂದರೆ, ಉದಾಹರಣೆಗೆ, ಸೆಫಿಕ್ಸೈಮ್ (Cefixime) ಎಂಬುದು ಒಂದು ಬ್ರಾಡ್ ಸ್ಪೆಕ್ಟ್ರಮ್ ಅಂಟಿ ಬಯಾಟಿಕ್. ಅಂದರೆ ಹಲವು ಬ್ಯಾಕ್ಟೀರಿಯಾ ಸೋಂಕುಗಳನ್ನು ಗುಣಪಡಿಸಬಲ್ಲ ಔಷಧಿ. ಅಗತ್ಯದ ಔಷಧಿಗಳಲ್ಲಿ ಒಂದಾದ ಈ ಸೆಫಿಕ್ಸೈಮ್ ಭಾರತದ ಮಾರುಕಟ್ಟೆಯಲ್ಲಿ ಸರಿಸುಮಾರು 780 ಬ್ರಾಂಡ್ ಹೆಸರುಗಳಲ್ಲಿ ವಿವಿಧ ಕಂಪನಿಗಳ ಉತ್ಪನ್ನವಾಗಿ ಲಭ್ಯವಿದೆ. ಅದರ ಬೆಲೆ ಕೂಡ ಹತ್ತಿಪ್ಪತ್ತು ರೂಪಾಯಿಗಳಿಂದ ಆರಂಭವಾಗಿ, ಬ್ರಾಂಡಿನ ದೊಡ್ಡಸ್ಥಿಕೆಗೆ ತಕ್ಕಂತೆ ನಾಲ್ಕೈದು ನೂರು ರೂಪಾಯಿಗಳ ತನಕವೂ ಇರಬಹುದು.
ಸಾಮಾನ್ಯವಾಗಿ ವೈದ್ಯರು ನೇರವಾಗಿ ಬ್ರಾಂಡ್ ಗಳ ಹೆಸರನ್ನೇ ಔಷಧಿ ಚೀಟಿಯಲ್ಲಿ ಬರೆಯುವುದರಿಂದ, ಸಹಜವಾಗಿಯೇ ರೋಗಿಗಳು ಔಷಧಿ ಅಂಗಡಿಗಳಲ್ಲಿ ಆ ಬ್ರಾಂಡಿನ ಸೆಫಿಕ್ಸೈಮಿಗಾಗಿಯೇ ಹುಡುಕಿಕೊಂಡು ಅಲೆದಾಡುತ್ತಾರೆ. ಇಂತಹದೊಂದು ವ್ಯವಸ್ಥೆಯ ಹಿಂದೆ ವೈದ್ಯರು-ಔಷಧಿ ಕಂಪನಿ-ಔಷಧಿ ಮಾರಾಟಗಾರರ ನಡುವಿನ ಸಂಬಂಧಗಳ ನೈತಿಕತೆ ಬಹಳಷ್ಟು ಬಾರಿ ಪ್ರಶ್ನಾರ್ಹವಾಗಿರುತ್ತದೆ. ಈಗ ವೈದ್ಯರು ಜೆನೆರಿಕ್ ಹೆಸರನ್ನೇ ಬರೆಯುವುದು ಕಡ್ಡಾಯ ಆಗಿರುವುದರಿಂದ, ರೋಗಿಗೆ ದುಬಾರಿ ಬ್ರಾಂಡಿನ ಸೆಫಿಕ್ಸೈಮ್ ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದಿಲ್ಲ.
ಸರ್ಕಾರಿ ಉದ್ಯೋಗಿಗಳು ಈ ತನಕ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸೌಲಭ್ಯ ಹೊಂದಿದ್ದರು. ಈಗ ಈ ದುಡ್ಡನ್ನು ಸರ್ಕಾರ ಮರುಪಾವತಿ ಮಾಡುವುದಿಲ್ಲ ಎಂದಾದರೆ, ಇದು ಶೀಘ್ರದಲ್ಲೇ ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ರೂಪ, ಹೊಸ ಶಿಸ್ತು ತಂದುಕೊಡುವುದರಲ್ಲಿ ಸಂಶಯವಿಲ್ಲ.
ಇದೇ ಹಾದಿಯಲ್ಲಿ, ಈಗಾಗಲೇ ಚರ್ಚೆ ಆರಂಭ ಆಗಿರುವಂತೆ ಸರ್ಕಾರಿ ಸೇವೆಯಲ್ಲಿರುವವರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದಿಸಬೇಕು ಎಂಬುದೂ ಜಾರಿಗೆ ಬರುವಂತಾದರೆ, ರಾಜ್ಯದಲ್ಲಿ ಮುಚ್ಚುವ ಹಂತಕ್ಕೆ ಬಂದಿರುವ ಬಹುತೇಕ ಎಲ್ಲ ಸರ್ಕಾರಿ ಶಾಲೆಗಳೂ ಮರುಜೀವ ಪಡೆಯಲಿವೆ.
0 ಪ್ರತಿಕ್ರಿಯೆಗಳು