ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಕಾಲಂ : ಪರ್ಯಾಯ ಎನ್ನುವುದು…

ಪರ್ಯಾಯ ಎನ್ನುವುದು ಹುಡುಕಿಕೊಳ್ಳಬೇಕಾದ ಹಾದಿ

ಕೃಪೆ : ವಿಜಯ ಕರ್ನಾಟಕ

ಗಾಂಧೀ ಟೋಪಿಯನ್ನು ಹಾಕಿಕೊಂಡು ಪತ್ರಿಕಾಗೋಷ್ಠಿಗಳನ್ನು ನಡೆಸುವ ಅರವಿಂದ ಕೇಜ್ರಿವಾಲ ಮತ್ತು ಅಂಜಲಿ ದಮಾನಿಯಾ ತಮಾಷೆಯ ವ್ಯಕ್ತಿಗಳಂತೆ ಕಾಣಿಸಿದರೂ, ಅವರು ದಿನಕ್ಕೊಂದರಂತೆ ಬೆಳಕಿಗೆ ತರುತ್ತಿರುವ ಪ್ರಕರಣಗಳು ಭಾರತ ಭ್ರಷ್ಟಾಚಾರದ ನರಕಕ್ಕೆ ಇಳಿಯುತ್ತಿರುವುದನ್ನು ತೋರಿಸುತ್ತಿವೆ. ಕೇಜ್ರಿವಾಲ ಮತ್ತು ಆತನ ‘ಭ್ರಷ್ಟಾಚಾರದ ವಿರುದ್ಧ ಭಾರತ’ ತಂಡವನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳದೆ ಅದನ್ನು ‘ಬಿಜೆಪಿಯ ಬಿ ಟೀಂ’ ಎಂದು ಕರೆದು ಪಾರಾಗಲು ನೋಡಿದರೂ, ಈ ತಂಡ ಹೊರಗೆಡವುತ್ತಿರುವ ಪ್ರಕರಣಗಳು ಭಾರತೀಯರ ಬದುಕಿನಲ್ಲಿ ಸುನಾಮಿಯ ಅಲೆಗಳನ್ನೇ ಏಳಿಸುತ್ತಿವೆ. ಬಿಲಿಯಾಂತರ ಡಾಲರ್ಗಳು ಲೆಕ್ಕಪುಕ್ಕವಿಲ್ಲದೆ ಭ್ರಷ್ಟರ ಜೇಬುಗಳನ್ನು ಸೇರುತ್ತಿವೆ. ರಾಷ್ಟ್ರದ ಸಂಪತ್ತನ್ನು ಕೊಳ್ಳೆಹೊಡೆಯಲಾಗುತ್ತಿದೆ. ಯಾರ್ಯಾರು ಎಷ್ಟೆಷ್ಟು ದೋಚಿಕೊಳ್ಳುತ್ತಿದ್ದಾರೆ ಎಂಬ ಲೆಕ್ಕವೇ ಸಿಕ್ಕದಷ್ಟು ಪ್ರಕರಣಗಳು ಒಂದರ ಮೇಲೊಂದರಂತೆ ಬೆಳಕಿಗೆ ಬರುತ್ತಲೇ ಇವೆ.

ಭ್ರಷ್ಟಾಚಾರದಿಂದ ತತ್ತರಿಸುತ್ತಿರುವ ರಾಷ್ಟ್ರದಲ್ಲಿ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಎನ್ನುವ ಕೇಜ್ರಿವಾಲರ ಸಂಘಟನೆ ಗಾಢ ವಿಷಾದವನ್ನು ಸೂಚಿಸುತ್ತಿದೆಯೋ, ನಮ್ಮ ಪ್ರಜಾಪ್ರಭುತ್ವದ ವ್ಯಂಗ್ಯವನ್ನು ಕಾಣಿಸುತ್ತಿದೆಯೋ ಹೇಳುವುದು ಕಷ್ಟ. ಆಳುವ ಪಕ್ಷಗಳು, ವಿರೋಧ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಎಂಬ ಭೇದವಿಲ್ಲದೆ ಎಲ್ಲ ಪಕ್ಷಗಳೂ ಒಂದಲ್ಲ ಒಂದು ಭ್ರಷ್ಟಾಚಾರ ಪ್ರಕರಣದಲ್ಲಿ ಮುಳುಗಿ ಹೋಗಿವೆ. ಭ್ರಷ್ಟಾಚಾರದಲ್ಲಿ ಮುಳುಗದ ರಾಜಕೀಯ ಪಕ್ಷ, ರಾಜಕಾರಣಿ ಈ ಕಾಲ ಸಂದರ್ಭಕ್ಕೆ ಸಲ್ಲುವುದಿಲ್ಲವೇನೋ ಎನ್ನುವಂಥ ಪರಿಸ್ಥಿತಿ ಎದುರಾಗಿದೆ. ಸೋನಿಯಾ ಕುಟುಂಬ ಇಂಥ ಆರೋಪಗಳಿಂದ ಮುಕ್ತವಾಗಿರುವಂತಿದೆ ಎಂದುಕೊಳ್ಳುತ್ತಿರುವಾಗಲೇ, ಸೋನಿಯಾ ಅವರ ಅಳಿಯ ವಾದ್ರಾ ವಿರುದ್ಧದ ಆರೋಪ ಹೊರಬಂದಿದೆ. ಶರಾದ್ ಪವಾರ್ ಆತ್ಮವಿಶ್ವಾಸದಿಂದ ಉತ್ತರಗಳನ್ನು ಕೊಡುತ್ತಿದ್ದರೂ, ಅವರ ಮಗಳ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸುಲಭವಾಗಿ ತಳ್ಳಿಹಾಕಲು ಬರುವುದಿಲ್ಲ. ಭಾರತೀಯ ಸಂಸ್ಕೃತಿಯ ವಾರಸುದಾರ ತಾನೇ ಎಂದು ಬೀಗುತ್ತಿದ್ದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಗಡ್ಕರಿಯೇ ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ‘ಕಣ್ಣೀರು ಹಾಕುತ್ತಿದ್ದಾರೆ.’ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ಅನೇಕ ನಾಯಕರು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಮೇಲೇಳಲಾಗದೆ ಸೆಣಸಾಡುತ್ತಿದ್ದಾರೆ. ಯಾವುದೇ ಹೊತ್ತಿನಲ್ಲಿ ಜೈಲಿಗೆ ಹೋಗಬೇಕಾಗಿರುವ ಕನರ್ಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಚದುರಂಗದಾಟವಂತೂ ಅವರ ನಿರ್ಲಜ್ಜತನವನ್ನು ತೋರಿಸುತ್ತಿವೆ.

ಸಾಮಾನ್ಯ ಜನರನ್ನು ಹಿಂಡುವ ಹಲವು ಸಮಸ್ಯೆಗಳಿವೆ. ಬೆಲೆ ಏರಿಕೆಯಂತೂ ಯಾರ ನಿಯಂತ್ರಣದಲ್ಲೂ ಇಲ್ಲ. ನಮ್ಮ ರಾಜಕೀಯ ವ್ಯವಸ್ಥೆ ಹೇಗೆ ಮುನ್ನಡೆಯುವುದೋ ಎನ್ನುವ ಆತಂಕ ಹುಟ್ಟಿಸುವ ವಿದ್ಯಮಾನಗಳು ನಡೆಯುತ್ತಿವೆ. ಈ ಸಮಸ್ಯೆಗಳನ್ನು ನೋಡುವ ವ್ಯವಧಾನ ಯಾವ ರಾಜಕಾರಣಿಗೂ ಇದ್ದಂತಿಲ್ಲ. ಸ್ವಯಂ ರಕ್ಷಣೆಗಾಗಿ ತಂತ್ರ, ಪ್ರತಿತಂತ್ರಗಳನ್ನು ರೂಪಿಸುವುದರಲ್ಲಿಯೇ ಅವರೆಲ್ಲರ ಶ್ರಮ ಮತ್ತು ಕಾಲ ವ್ಯಯವಾಗುತ್ತಿದೆ. ಜನರ ಬಗ್ಗೆ ರಾಜಕಾರಣಿಯೊಬ್ಬ ಮಾತನಾಡುತ್ತಾನೆಂದರೆ ಅದು ಬೇರೇನನ್ನೋ ಹೇಳುತ್ತಿರುತ್ತದೆ.

ಸಮಾಜದ ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡು ಸ್ವಾರ್ಥದ ಲೇಪವಿಲ್ಲದೆ ದುಡಿಯುವವರ ಪ್ರಾತಿನಿಧಿಕ ಸಂಸ್ಥೆಗಳಂತಿದ್ದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿಶ್ವಸ್ಥ ಮಂಡಳಿಗಳು ರಾಜಕಾರಣಿಗಳ ಪ್ರವೇಶದಿಂದಾಗಿ ತಮ್ಮ ಸ್ವರೂಪವನ್ನೇ ಬದಲಾಯಿಸಿಕೊಂಡಿವೆ. ಅಲ್ಲಿಯೂ ಭ್ರಷ್ಟಾಚಾರ ಮೆರೆಯುತ್ತಿದೆ. ಕಳಂಕವಿಲ್ಲದ ವ್ಯಕ್ತಿಗಳು ಎಲ್ಲಿಯಾದರೂ ಸಿಕ್ಕಬಹುದೇ ಎಂದು ಹುಡುಕಿದರೂ ಅಂಥ ವ್ಯಕ್ತಿಗಳು ಕಾಣದೇ ನಿರಾಶರಾಗಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ರಾಜಕೀಯ ಎನ್ನುವುದು, ತಮಗೆ, ತಮ್ಮ ಪರಿವಾರಕ್ಕೆ, ಬಂಧು ಬಾಂಧವರಿಗೆ ಇರುವ ಆಟದ ಮೈದಾನ ಎಂದು ಭಾವಿಸಿರುವ ರಾಜಕಾರಣಿಗಳೇ ತುಂಬಿರುವ ನಮ್ಮ ಪ್ರಜಾಪ್ರಭುತ್ವದಲ್ಲಿ ಯಾವ ತತ್ವಗಳಿಗೂ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಭ್ರಷ್ಟಾಚಾರದ ಈ ಪೆಡಂಭೂತದ ಬಗ್ಗೆ ಅಣ್ಣಾ ಹಜಾರೆ ಧ್ವನಿ ಎತ್ತಿದಾಗ ಇಡೀ ರಾಷ್ಟ್ರವೇ ಅದಕ್ಕೆ ಪ್ರತಿಧ್ವನಿಸಿದ್ದು ಭ್ರಷ್ಟಾಚಾರದ ವಿರುದ್ಧ ನಮ್ಮ ಜನರಿಗಿರುವ ಆಕ್ರೋಶವನ್ನು ಪ್ರಕಟಿಸುವಂತಿತ್ತು. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿಯೇ ಮೂಲಭೂತ ಬದಲಾವಣೆಯನ್ನು ಅಣ್ಣಾ ತರಬಹುದೆಂದು ಭಾವಿಸುತ್ತಿದ್ದಾಗಲೇ, ಅಣ್ಣಾ ಪರಿವಾರದ ಕೈಗೊಂಬೆಯಾದರು. ರಾಜಕೀಯ ಪ್ರಬುದ್ಧತೆ ಮತ್ತು ದೂರದರ್ಶಿತ್ವದ ಕೊರತೆಯಿಂದಾಗಿ ಅಣ್ಣಾ ಮೂಲೆಗುಂಪಾದರು; ಕೇಜ್ರಿವಾಲರಂಥವರ ರಾಜಕೀಯ ಆಕಾಂಕ್ಷೆಗಳು ಗರಿಬಿಚ್ಚಿದವು. ಗಾಂಧೀ ಚಿಂತನೆ ಕೇವಲ ಕನಸಿನಂತೆ ಹಾರಿ ಹೋಯಿತು.

ರಾಜಕೀಯ ಕ್ಷೇತ್ರ ಮಾತ್ರ ಕಲುಷಿತಗೊಂಡಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಇವತ್ತು ಹೊಲಸು ಕಾಣಿಸುತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮ, ಶಿಕ್ಷಣ ಹೀಗೆ ಎಲ್ಲವೂ ಕಳಂಕಗೊಳ್ಳುತ್ತಿವೆ. ಬಹುಬೇಗ ಹಣವನ್ನು ಮಾಡಿಬಿಡಬೇಕೆಂಬ ತುರ್ತು ಎಲ್ಲರನ್ನೂ ಆವರಿಸುತ್ತಿದೆ. ಯುವಜನರಿಗಂತೂ ಮಾದರಿಗಳೇ ಇಲ್ಲದ ಶೂನ್ಯಸ್ಥಿತಿ ನಿರ್ಮಾಣವಾಗುತ್ತಿದೆ. ಸಹಜವಾಗಿಯೇ ಅವರ ಚಿಂತನೆ ಸಂಪತ್ತು ಗಳಿಕೆಯ, ಐಷಾರಾಮೀ ಜೀವನದ ಸುತ್ತ ತಿರುಗುತ್ತಿರುತ್ತದೆ.

ಎಲ್ಲವೂ ಕಲುಷಿತಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮನಸ್ಸುಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಹೇಗೆ? ಎಲ್ಲವೂ ಹೊಲಸಾಗಿರುವ ಈ ವ್ಯವಸ್ಥೆಯಲ್ಲಿ ಹೊಸದೊಂದು ಪರ್ಯಾಯವನ್ನು ಕಂಡುಕೊಳ್ಳುವುದು ಹೇಗೆ? ಗಂಭೀರವಾಗಿ ಚಿಂತಿಸುವವರನ್ನು ನಿರಾಶೆಯ ಕಪ್ಪು ಮೋಡಗಳೇ ಆವರಿಸಿಬಿಡುತ್ತವೆ. ಹಾಗಾದರೆ ಇಲ್ಲಿಯೇ ಕೊಳೆತುಹೋಗಬೇಕೆ?

ಪರ್ಯಾಯ ಎನ್ನುವುದು ಒಂದು ಸಿದ್ಧ ಮಾದರಿಯಲ್ಲ; ಅದೊಂದು ಕಂಡುಕೊಳ್ಳಬೇಕಾದ, ರೂಪಿಸಿಕೊಳ್ಳಬೇಕಾದ ದಾರಿ. ನಮ್ಮ ಇತಿಹಾಸದಲ್ಲಿಯೇ ಅಗತ್ಯ ಪಾಠಗಳು ಸಿಕ್ಕಬಹುದು. ಇಂದಿರಾಗಾಂಧಿಯವರ ಸರ್ವಾಧಿಕಾರ, ಅವರು ಘೋಷಿಸಿದ ತುರ್ತುಪರಿಸ್ಥಿತಿಯ ದಿನಗಳು ಈ ರಾಷ್ಟ್ರ ಕಂಡ ಅತ್ಯಂತ ಕರಾಳ ದಿನಗಳು. ಹೊಸದೊಂದು ಚಿಂತನೆಯೇ ತಲೆ ಎತ್ತದಂಥ ಗಾಢಕತ್ತಲೆಯ ನಡುವಿನಿಂದಲೇ ಜಯಪ್ರಕಾಶ ನಾರಾಯಣ ಎಂಬ ಹೊಸ ಬೆಳಕೊಂದು ಕಾಣಿಸಿಕೊಂಡದ್ದು, ಅದೊಂದು ಪ್ರಬಲಶಕ್ತಿಯಾಗಿ ತಲೆ ಎತ್ತಿ, ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದು ನಮ್ಮ ಇತಿಹಾಸದ ಪುಟಗಳಲ್ಲೇ ಇದೆ. ಜೆಪಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದ ನೂರಾರು ನಾಯಕರು ಜೈಲು ಸೇರಿ, ಇಡೀ ರಾಷ್ಟ್ರವೇ ತತ್ತರಿಸುತ್ತಿದ್ದಾಗ ಇಲ್ಲಿ ಸರ್ವಾಧಿಕಾರಕ್ಕೆ ಎದುರಾಗಿ ನಿಲ್ಲಬಹುದಾದ ಜನಶಕ್ತಿಯೊಂದು ರೂಪಗೊಳ್ಳಬಹುದೆಂಬ ನಂಬಿಕೆಯೇ ಯಾರಿಗೂ ಇರಲಿಲ್ಲ. ಆದರೆ ಅದು ಸಾಧ್ಯವಾಯಿತು. ಕರಾಳದಿನಗಳು ಕೊನೆಯಾದವು.

ಜೆಪಿ ತೋರಿಸಿದ ಪರ್ಯಾಯ ಮಾರ್ಗ ಬಹುಬೇಗ ಕೊನೆಗೊಂಡಿತು. ಯಾವ ಮಾರ್ಗವೂ ಶಾಶ್ವತ ಮಾರ್ಗವಾಗಿರುವುದಿಲ್ಲ. ಮೌಲ್ಯಗಳಲ್ಲಿ ನಂಬಿಕೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ, ರುಜುಮಾರ್ಗದಲ್ಲಿ ಜನರನ್ನು ನಡೆಸುವ ಆತ್ಮವಿಶ್ವಾಸಗಳೇ ಕಣ್ಮರೆಯಾದವೇನೋ ಎನ್ನುವಂಥ ಕಾಲ ಇದೀಗ ಎದುರಾಗಿದೆ. ಆದರೂ ಜನಶಕ್ತಿ ಎಂದೂ ನಾಶವಾಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಮುಖ್ಯತೆ ಇರುವುದೇ ಇಂಥ ಜನಶಕ್ತಿಯ ವಿಶೇಷದಲ್ಲಿ. ಅದನ್ನು ಎಬ್ಬಿಸುವ, ಅದರ ಚಲನೆಗೆ ಹೊಸ ದಿಕ್ಕನ್ನು ತೋರಿಸುವ ಕೆಲಸ ನಡೆದೇ ನಡೆಯುತ್ತದೆ. ಪ್ರಜಾಪ್ರಭುತ್ವದ ಒಳಗಿನಿಂದಲೇ ಅದು ಸಾಧ್ಯವಾಗುತ್ತದೆ.

ನಮ್ಮ ಸಂವಿಧಾನವೇ ನಮ್ಮ ಕೈಯ್ಯಲ್ಲಿರುವ ಪ್ರಬಲ ಅಸ್ತ್ರ. ಈ ಸಂವಿಧಾನದ ಶಕ್ತಿಯಿಂದಲೇ ಇವತ್ತು ನಮ್ಮ ನ್ಯಾಯಾಲಯಗಳು ತೀರ್ಪು ನೀಡುತ್ತಿವೆ. ಈ ಶಕ್ತಿಯಿಂದಲೇ ನಮ್ಮ ಮಾಧ್ಯಮಗಳು ನಿರ್ಭಯವಾಗಿ ವ್ಯವಹರಿಸುತ್ತಿವೆ. ಕೇಜ್ರಿವಾಲರಂಥವರು ಭ್ರಷ್ಟಾಚಾರದ ಪ್ರಕರಣಗಳನ್ನು ಎತ್ತಿತೋರಿಸುವುದರ ಹಿಂದೆ ಇರುವ ಬಲವೂ ಇದೇ.

ಎಲ್ಲವೂ ಅಸ್ತವ್ಯಸ್ತಗೊಂಡಿರುವಂತೆ ಕಾಣಿಸಿದರೂ, ಇದರ ಒಳಗಿನಿಂದಲೇ ವ್ಯವಸ್ಥೆಯೊಂದು ರೂಪಗೊಳ್ಳುತ್ತದೆ. ಅದೇ ಪರ್ಯಾಯ ಮಾರ್ಗವೂ ಆಗಿ ನಮ್ಮ ಪ್ರಜಾಪ್ರಭುತ್ವವನ್ನು ಸರಿದಾರಿಗೆ ತರಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶಗಳಿವೆ. ಗಾಂಧೀ, ಅಂಬೇಡ್ಕರ್, ಲೋಹಿಯಾ, ಜೆಪಿ ಹೀಗೆ ಅನೇಕ ಚಿಂತಕರ ಬೇರುಗಳು ಈ ನೆಲದಲ್ಲಿಯೇ ಇವೆ. ಅಲ್ಲಿಂದಲೇ ಹೊಸ ಜೀವ ಚೈತನ್ಯ ಕುಡಿಯೊಡೆಯಬಹುದು. ಈ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಕೆಲಸವಂತೂ ಅಗತ್ಯವಾಗಿ ನಡೆಯಬೇಕು. ಈ ಕೆಲಸವನ್ನು ಯಾರು ಮಾಡಬೇಕು? ಹೇಗೆ ಮಾಡಬೇಕು? ಇದನ್ನು ಸಾಮೂಹಿಕ ಚಿಂತನೆಗಳ ಮೂಲಕ ನಾವೆಲ್ಲ ಕಂಡುಕೊಳ್ಳಬೇಕು. ಅಂಥ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದ ಅಗತ್ಯ ಇಂದಿನ ತುರ್ತಾಗಿದೆ.

 

‍ಲೇಖಕರು G

30 October, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading