ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಕಾಲಂ : ನದೀ ಜೋಡಣೆಯೆಂಬ ರಮ್ಯ ಕನಸು

ನದೀ ಜೋಡಣೆಯೆಂಬ ರಮ್ಯ ಕನಸು

ಬ್ರಹ್ಮಪುತ್ರಾ ಎಂದರೆ ಜೀವದಾಯಿನಿಯೂ ಹೌದು; ರೌದ್ರಾವತಾರಿಣಿಯೂ ಹೌದು. ಅಲ್ಲಲ್ಲಿ ಚಲಿಸುವ ಸಾಗರದಂತೆ ಕಾಣಿಸುವ ಈ ನದಿಯ ನೀರನ್ನು ವ್ಯರ್ಥವಾಗದಂತೆ ತಡೆಯುವುದು ಹೇಗೆ? ಬ್ರಹ್ಮಪುತ್ರಾ ನದಿಯನ್ನು ಚೀನಾದ ಹಳದಿ ನದಿಗೆ ಜೋಡಿಸಿದರೆ? ಈ ಒಂದು ಚಿಂತನೆಯಿಂದಲೇ ಚೀನೀಯರು ರೋಮಾಂಚನಗೊಳ್ಳುತ್ತಾರೆ. ಆದರೆ ಭಾರತೀಯರು? ಭಾರತಕ್ಕೆ ತನ್ನದೇ ಆದ ಆತಂಕಗಳಿವೆ. ಈ ಚಿಂತನೆ ಕಾರ್ಯರೂಪಕ್ಕೆ ಬರುವುದನ್ನು ಭಾರತ ಸುಲಭವಾಗಿ ಒಪ್ಪಿಕೊಳ್ಳಲಾರದು.

ಬರಪೀಡಿತ ಪ್ರದೇಶಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್ಗಡಗಳಿಗೆ ಯಾವುದಾದರೂ ನದಿಯಿಂದ ನೀರು ಹರಿದುಬರುವುದು ಸಾಧ್ಯವಾದರೆ? ಅಥವಾ ಪ್ರತಿವರ್ಷ ಪ್ರವಾಹ ಭೀತಿಯ ನೆರಳಲ್ಲೇ ಬದುಕುವ ಬಿಹಾರ, ಅಸ್ಸಾಂ, ಮೇಘಾಲಯ, ತ್ರಿಪುರ, ಅರುಣಾಚಲ ಪ್ರದೇಶಗಳಲ್ಲಿ ಹರಿಯುವ ನೀರಿನ ಅಬ್ಬರವನ್ನು ಕಡಿಮೆ ಮಾಡಿ ಮಳೆಗಾಲವನ್ನು ಸಹನೀಯವಾಗಿ ಮಾಡಿದರೆ?

ಅಷ್ಟೇಕೆ ತಮಿಳುನಾಡು ಮತ್ತು ಕನರ್ಾಟಕ ರಾಜ್ಯಗಳಲ್ಲಿ ಹರಿಯುವ ಕಾವೇರಿಯ ನೀರಿನ ಪ್ರಮಾಣವನ್ನು ಬೇಸಿಗೆಯ ದಿನಗಳಲ್ಲೂ ಹೆಚ್ಚಿಸುವುದು ಸಾಧ್ಯವಾದರೆ?

ನಮ್ಮ ಅನೇಕ ನದಿಗಳ ನೀರು ಪೋಲಾಗುತ್ತಿದೆ. ಬೇಸಿಗೆಯ ದಿನಗಳಲ್ಲಿ ಹನಿ ಹನಿ ನೀರನ್ನೂ ಬಳಸುವ ರೈತರು, ಮಳೆಗಾಲದಲ್ಲಿ ಉಕ್ಕುವ ನದಿಗಳನ್ನು ನಿಯಂತ್ರಿಸಲಾರರು; ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲಾರರು. ನೀರಿಲ್ಲದೆ ಒಣಗುವ ಬೆಳೆ, ನೀರ ಅಬ್ಬರದಲ್ಲಿ ಕೊಚ್ಚಿಹೋಗುವ ಬೆಳೆ.

ನೀರು ಯಾರ ಸ್ವತ್ತೂ ಅಲ್ಲ; ಅದು ಸಕಲ ಜೀವ ಚೈತನ್ಯಕ್ಕೆ ಪ್ರಕೃತಿ ಉದಾರವಾಗಿ ಕೊಟ್ಟ ಕೊಡುಗೆ. ಆದರೂ ನೀರಿನ ಮೇಲೆ ಮನುಷ್ಯನ ಹಕ್ಕು, ರಾಜ್ಯಗಳ ಹಕ್ಕು, ರಾಷ್ಟ್ರಗಳ ಹಕ್ಕು ಸ್ಥಾಪಿಸಿ ಮನುಷ್ಯ ಬೀಗುತ್ತಿದ್ದಾನೆ. ಮನುಷ್ಯ ನಾಗರಿಕನಾದಂತೆಲ್ಲ ಇಂಥ ಅನೇಕ, ವೈವಿಧ್ಯಮಯ ಹಕ್ಕುಗಳನ್ನು ಸ್ಥಾಪಿಸಿಕೊಂಡಿದ್ದಾನೆ. ಗಡಿಗಳನ್ನು, ಚೌಕಟ್ಟುಗಳನ್ನು ಹಾಕಿಕೊಂಡ ಸಮಾಜಗಳಿಗೆ ಇದು ಅನಿವಾರ್ಯವೂ ಇರಬಹುದು. ಈ ಎಲ್ಲ ಮಿತಿಗಳ ನಡುವೆಯೇ ಮನುಷ್ಯ ನೀರನ್ನು ಎಷ್ಟು ಸಮರ್ಪಕವಾಗಿ ಬಳಸಿಕೊಳ್ಳಬಹುದು?

ನದಿ ಜೋಡಣೆ ಎಂಬ ಚಿಂತನೆ ಈ ಸಮರ್ಪಕ ಬಳಕೆಯ ಒಂದು ಹೆಜ್ಜೆ. ನದಿ ಜೋಡಣೆಯಿಂದ ಪ್ರವಾಹಗಳನ್ನು ತಡೆಯಬಹುದು; ಬರಪೀಡಿತ ಪ್ರದೇಶಗಳಿಗೂ ನೀರು ಹರಿಸಬಹುದು. ಜಲ ಸಾರಿಗೆಯನ್ನು ಹೆಚ್ಚಿಸಿಕೊಳ್ಳಬಹುದು. ಜಲ ಉತ್ಪನ್ನಗಳನ್ನು ವೃದ್ಧಸಿಕೊಳ್ಳಬಹುದು. ಅಣೆಕಟ್ಟುಗಳು, ವಿದ್ಯುತ್ ಉತ್ಪಾದನೆ ಇತ್ಯಾದಿ ಪ್ರಯೋಜನಗಳನ್ನು ಪಟ್ಟಿಮಾಡಬಹುದು. ಹಾಗೆಯೇ ನದಿ ಜೋಡಣೆಗೆ ಸಂಬಂಧಿಸಿದಂತೆ ತೊಡಕುಗಳೂ ಇವೆ. ಮನಬಂದಂತೆ ಹರಿಯುವ ನದಿಗಳು ಮುಕ್ತವಾಗಿದ್ದರೂ, ನದಿ ಜೋಡಣೆ ವಿಚಾರದಲ್ಲಿ, ರಾಜ್ಯ ರಾಜ್ಯಗಳ ಮತ್ತು ರಾಷ್ಟ್ರ ರಾಷ್ಟ್ರಗಳ ಮಧ್ಯೆ ಒಪ್ಪಂದ ಬೇಕಾಗುತ್ತದೆ. ನದಿ ಜೋಡಣೆ ಎಂದರೆ ಪ್ರವಾಹವನ್ನು ತಡೆಯಲು ಅಣೆಕಟ್ಟುಗಳ ನಿಮರ್ಾಣವೂ ಸೇರಿರುತ್ತದೆ. ಅಣೆಕಟ್ಟುಗಳಿಂದ ನೀರಾವರಿ ಕೃಷಿ ಅಧಿಕಗೊಳ್ಳುತ್ತದೆ ಎಂಬುದು ನಿಜವಾದರೂ, ದೊಡ್ಡ ಪ್ರಮಾಣದ ಕಾಡುಗಳೂ ನೀರಲ್ಲಿ ಮುಳುಗಿ ಹೋಗುವ ಅಪಾಯವೂ ಇರುತ್ತದೆ. ಹಾಗೆಯೇ ಜನವಸತಿ ಪ್ರದೇಶಗಳು ಮುಳುಗುತ್ತವೆ. ಈ ಜನರ ಪುನರ್ವಸತಿಯ ಪ್ರಶ್ನೆಯೂ ಇರುತ್ತದೆ. ಇಂಥ ಹಲವಾರು ಸಂಗತಿಗಳನ್ನು, ಲಾಭ-ನಷ್ಟಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನಕ್ಕೆ ಬರಬೇಕಾಗುತ್ತದೆ. ಅಣೆಕಟ್ಟುಗಳ ನಿರ್ಮಾಣ ವೆಚ್ಚದ ಭಾರವನ್ನು ರಾಜ್ಯಗಳು ಅಥವಾ ರಾಷ್ಟ್ರಗಳು ಸೂಕ್ತ ಪ್ರಮಾಣದಲ್ಲಿ ಹೊರಬೇಕಾಗುತ್ತದೆ. ಸ್ನೇಹ, ಸಹಬಾಳ್ವೆಯ ತತ್ವವನ್ನು ಗೌರವಿಸುವ ಮನೋಭಾವವೂ ಬೇಕಾಗುತ್ತದೆ.

ಅಂತರ ರಾಷ್ಟ್ರೀಯ ನದಿ ಜೋಡಣೆಯ ವಿಚಾರವನ್ನು ಸದ್ಯಕ್ಕೆ ಬದಿಗಿಟ್ಟು, ಭಾರತ ಸರ್ಕಾರ ತನ್ನ ನಾಡಿನೊಳಗೇ ಇರುವ ನದಿಗಳನ್ನು ಜೋಡಿಸುವ ವಿಚಾರದಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ. ಹಾಗೆ ನೋಡಿದರೆ ಈ ಚಿಂತನೆ ನಮ್ಮಲ್ಲಿ ಸಾಕಷ್ಟು ಹಿಂದೆಯೇ ಆರಂಭವಾಗಿದೆ. 1982ರಲ್ಲಿ ರಚನೆಯಾದ ‘ರಾಷ್ಟ್ರೀಯ ಜಲ ಅಭಿವೃದ್ಧಿ ಏಜನ್ಸಿ’ಯ ಮುಖ್ಯ ಉದ್ದೇಶ ನದೀ ಜೋಡಣೆಯ ಯೋಜನೆಯನ್ನು ಕಾರ್ಯಗತಗೊಳಿಸುವುದೇ ಆಗಿತ್ತು. ಆದರೆ ಅದೇನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿಲ್ಲ. ಹೀಗಾಗಿ 2002ರಲ್ಲಿ ಭಾರತ ಸರ್ಕಾರ ರಾಷ್ಟ್ರದ ಪ್ರಮುಖ ನದಿಗಳನ್ನು ಜೋಡಿಸುವ ಯೋಜನೆಯನ್ನು ಪ್ರಕಟಿಸಿ, ಇದನ್ನು ಕಾರ್ಯರೂಪಕ್ಕೆ ತರಲು, ಕಾಯರ್ಾಚರಣೆ ದಳವನ್ನೂ ರೂಪಿಸಿತ್ತು. ಅದೂ ನಿರೀಕ್ಷಿತ ಫಲವನ್ನು ನೀಡಲಿಲ್ಲ. ಹತ್ತು ವರ್ಷಗಳ ಕಾಲ ಈ ಕಾರ್ಯಾಚರಣೆ ದಳ ನಿಷ್ಕ್ರಿಯವಾಗಿದ್ದು, ನದಿ ಜೋಡಣೆ ಯೋಜನೆ ಕಾಗದದ ಮೇಲೆಯೇ ಉಳಿಯುವಂತಾಯಿತು. ಇದನ್ನು ಗಮನಿಸಿಯೇ ಸುಪ್ರೀಂ ಕೋರ್ಟ್ ಕಳೆದ ಫೆಬ್ರುವರಿಯಲ್ಲಿ (2012) ಸಮಿತಿಯೊಂದನ್ನು ರೂಪಿಸಿ, ಕಾಲಬದ್ಧವಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿರ್ದೇಶನ ನೀಡಿತು. ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಯ ಜಾರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಹೇಳಿತು.

ಈ ಚಿಂತನೆಯ ಪ್ರಕಾರ ಭಾರತದಲ್ಲಿನ 30 ಪ್ರಮುಖ ನದಿಗಳನ್ನು ಜೋಡಿಸಬೇಕಾಗುತ್ತದೆ. ನದೀ ಜೋಡಣೆಯ ಯೋಜನೆಯಲ್ಲಿ ಎರಡು ವಿಭಾಗಗಳಿವೆ. ಮೊದಲನೆಯದು ಹಿಮಾಲಯ ಪ್ರದೇಶದ ನದಿಗಳನ್ನು ಜೋಡಿಸುವುದು. ಬ್ರಹ್ಮಪುತ್ತಾ ಮತ್ತು ಅದರ ಉಪನದಿಗಳನ್ನು ಗಂಗಾ ನದಿಗೆ ಜೋಡಿಸುವುದು ಮತ್ತು ಗಂಗಾ ನೀರನ್ನು ಮಹಾನದಿಯ ನೀರಿನೊಂದಿಗೆ ಬೆರೆಸುವುದು. ಎರಡನೆಯ ಭಾಗದಲ್ಲಿ ದಕ್ಷಿಣ ಪರ್ಯಾಯ ದ್ವೀಪದಲ್ಲಿನ ಪ್ರಮುಖ ನದಿಗಳ ನಡುವೆ ಸಂಪರ್ಕ ಕಲ್ಪಿಸುವುದು. ಹಾಗೆಯೇ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಈ ಘಟ್ಟಗಳಲ್ಲಿಯೇ ಸಾಗಿ ಅರಬ್ಬೀ ಸಮುದ್ರವನ್ನು ಸೇರುವ ನದಿಗಳನ್ನು ಬೇಕಾದ ಕಡೆಗೆ ತಿರುಗಿಸಿ ಕೃಷಿ ಕಾರ್ಯಕ್ಕೆ ಬಳಸಿಕೊಳ್ಳುವುದು. ಮೊದಲನೆಯ ಭಾಗದಲ್ಲಿ ಈಗಿರುವ ನೀರಾವರಿಯ ಜೊತೆಗೆ 2,20,000 ಚದುರ ಕಿ.ಮೀ. ಪ್ರದೇಶ ನೀರಾವರಿ ಕೃಷಿಗೆ ಒಳಪಡುತ್ತದೆ ಮತ್ತು 30 ಗಿಗಾವಾಟ್ ವಿದ್ಯುತ್ ಉತ್ಪಾದನ ಸಾಧ್ಯವಾಗುತ್ತದೆ. ಎರಡನೆಯ ವಿಭಾಗದಲ್ಲಿ 1,30,000 ಚ.ಕಿ.ಮೀ. ಪ್ರದೇಶದ ಹೊಸ ನೀರಾವರಿ, ನಾಲ್ಕು ಗಿಗಾವಾಟ್ ವಿದ್ಯುತ್ ಉತ್ಪಾದನೆ.

ನದಿ ಜೋಡಣೆಯಿಂದ ಒರಿಸ್ಸ, ಆಂಧ್ರ, ಕನರ್ಾಟಕ, ತಮಿಳುನಾಡು, ಪಾಂಡಿಚೆರಿಗಳು ವಿಶೇಷ ರೀತಿಯಲ್ಲಿ ಲಾಭವನ್ನು ಪಡೆಯುತ್ತವೆ. ಯಾವುದೇ ಪ್ರಮುಖ ನದಿಯೂ ಹುಟ್ಟದ ತಮಿಳು ನಾಡಂತೂ ನದಿ ಜೋಡಣೆಗೆ ತುದಿಗಾಲಲ್ಲಿ ನಿಂತಿದೆ. ಆದರೆ ಕೇರಳ ಇದನ್ನು ಕೇರಳ ಉಗ್ರವಾಗಿ ಖಂಡಿಸುತ್ತಿದೆ. ಕೇರಳ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿರುವ ವೆಂಬನಾಡು ಸರೋವರಕ್ಕೆ ಈ ನದಿಜೋಡಣೆ ಯೋಜನೆ ಪ್ರಾಣಾಂತಿಕ ಪೆಟ್ಟುಕೊಡುತ್ತದೆ; ಹಾಗೆಯೇ ಕುಟ್ಟನಾಡು ಪ್ರದೇಶದ ಕೃಷಿ ಚಟುವಟಿಕೆಯ ಮೇಲೂ ದುಷ್ಟರಿಣಾಮವನ್ನು ಉಂಟುಮಾಡುತ್ತದೆ ಎಂಬುದು ಕೇರಳದ ವಾದ.

ಕರ್ನಾಟಕ ಮತ್ತು ತಮಿಳುನಾಡುಗಳು ಪ್ರತಿವರ್ಷ ನೀರಿಗಾಗಿ ಹೋರಾಟ ನಡೆಸುತ್ತಿವೆ. ಬೆಳೆದುನಿಂತು ಒಣಗುತ್ತಿರುವ ಬೆಳೆಯನ್ನು ನೋಡುತ್ತ ಆಕ್ರೋಶಗೊಳ್ಳುವ ರೈತರು, ನದಿ ನೀರಿನ ಪ್ರಶ್ನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ನೋಡುವ ರಾಜಕಾರಣಿಗಳು, ಭಾವೋದ್ವೇಗಕ್ಕೆ ಒಳಗಾಗಿ ಅಪಾರ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗುವ ಹೋರಾಟಗಾರರು. ಎಷ್ಟು ಕಾಲ ಈ ಕಚ್ಚಾಟ? ಒಣಗಿನಿಂತ ಬೆಳೆ ಯಾವ ರಾಜ್ಯದ ರೈತರದಾದರೇನು? ಕುಡಿಯುವ ನೀರಿಲ್ಲದೆ ತೊಂದರೆಗೀಡಾಗುವ ಜನ ಕನರ್ಾಟಕದವರಾದರೇನು, ತಮಿಳುನಾಡಿನವರಾದರೇನು? ಮೂಲಭೂತವಾಗಿ ಒಂದು ರಾಷ್ಟ್ರ, ಜನ ಸಮುದಾಯ ಎದುರಿಸುತ್ತಿರುವ ಈ ಪ್ರಶ್ನೆಗಳು ಸುದೀರ್ಘಕಾಲ ಮುಂದುವರಿಯ ಬಾರದು. ನದಿ ಜೋಡಣೆ ಸೂಕ್ತ ಪರಿಹಾರ ತರಬಲ್ಲದೇ? ಅಥವಾ ನಮ್ಮ ಗೋಜಲುಗಳನ್ನು ಇನ್ನಷ್ಟು ಹೆಚ್ಚಿಸಬಲ್ಲದೆ? ನಮ್ಮ ಅಪೂರ್ವ ಕಾಡುಗಳನ್ನು, ಸಸ್ಯ ಸಂಪತ್ತನ್ನು, ಜೀವ ವೈವಿಧ್ಯವನ್ನು ನದೀ ಜೋಡಣೆ ನಾಶಮಾಡುತ್ತದೆಯೇ? ಹಾಗಾದರೆ ಇದಕ್ಕೆ ಪಯರ್ಾಯವೇನಾದರೂ ಇದೆಯೇ?- ಇಂಥ ಪ್ರಶ್ನೆಗಳನ್ನು ನಮ್ಮ ತಜ್ಞರು ಚಿಂತಿಸಬೇಕು.

ಪ್ರಖರ ಬುದ್ಧಮತ್ತೆಯ ಮತ್ತು ತೀವ್ರ ಕಾಳಜಿಯ ಕೇಂದ್ರ ಸಚಿವ ಜೈರಾಂ ರಮೇಶ್ ಹೇಳಿರುವ ಮಾತನ್ನು ಮರೆಯುವಂತೆಯೇ ಇಲ್ಲ: ಈ ನದಿಜೋಡಣೆ ಯೋಜನೆ ಇಂಜಿನಿಯರುಗಳ ರಮ್ಯ ಕಲ್ಪನೆ. ಇದು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಪರಿಸರದ ದೃಷ್ಟಿಯಿಂದ ವಿನಾಶಕಾರಿಯಾದದ್ದು.

 

 

‍ಲೇಖಕರು G

18 December, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading