ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ರಂಗನಾಥ ರಾವ್ ಹೊಸ ಕವಿತೆ – ಹೋಳಿ ಹುಣ್ಣಿಮೆ…

ಜಿ ಎನ್ ರಂಗನಾಥ ರಾವ್

ಮಹಲಿಂಗರ೦ಗ ಹೇಳತಾನ
ಮಾಡಬೇಡಿ ಅನಂಗನ ಅಂಗ ಸಂಗ
ಮುಕ್ತಿಗದು ಪರವಾನಗಿ ಅಲ್ಲ

ನಗತಾಳ ಪ್ರಕೃತಿ ಕುಲುಕುಲು
`ಹುಚ್ಚು ಪ್ಯಾಲಿ ಬಂತದೋ ಹೋಳಿ ಹುಣ್ಣಿಮಿ
ಚಂದ್ರಸಾಗರಕೆ ಭರಪೂರ ಉಬ್ಬರ
ನವದಿಗಂತದ ಪೂರ ರಂಗೋರ೦ಗು’

ಅಂಗಸ೦ಗಕೆ, ರ೦ಗಿನಾಟದ `ಸುರತಕೆ’
ಮಾಟ ಹೂಡಿದ ಅನಂಗ
ಅಂಗಾ೦ಗಳಲಿ ಝೇಂಕರಿಸಿ
ಬಿಟ್ಟನದೊ ಕರ್ವುವಿಲ್ಲ

ರಸದಾಳಿ ಕಬ್ಬನು ಕರ್ವುವಿಲ್ಲ
ಬಿಟ್ಟ ಬಾಣವ ಹಿಂಪಡೆವವನಲ್ಲ
'ಅಂಗನೆಯರ ಅಂಗಸ್ಥಳ ಮರ್ಮಭೇದಿ
ನಾ ರಸದಾಳಿ, ನೀ ರಸವಂತಿ’

ಭರಪೂರ ಉತ್ಸಾಹ, ಭುಸುಗುಡುವ ಉನ್ಮಾದ
ಸಿಂಬಿ ಸುತ್ತಿದ ಸರ್ಪ ಹೆಡಬಿಚ್ಚಿನಲಿದ್ಹಾಂಗ
ನಾಗನಾಗಿಣಿಯರ ನವೋಲ್ಲಾಸ:

`ನಾ ಕುಣಿ ಬೇಕು, ಮೈ ಮಣಿ ಬೇಕು
ಝಲ್ಲಂತ ಜೀವಜಲ ಉಕ್ಕಬೆಕು’

ಹುಣ್ಣಿಮೆಗೆ ಅದೆಂಥ ಅಬ್ಬರ
`ಮದನೋ ಮನ್ಮಥೋ ಮಾರೋ
ಹಿಡಿಯಿರಿ ಅವನ, ಅ ಅನಂಗನ ಹಿಡಿಯಿರಿ
ಸಿಗಿದು ಜಿಗಿಯೋಣ ರಸದಾಳಿ ಕಬ್ಬ’
.
ಪಿಚಕಾರಿ ತೂರಿ ಮದನ
ಪಾವಡದೊಳಗ ಪುಳಕದುನ್ಮಾದ
ತೂರ್ಯನಿಗೂ ಬಣ್ಣಗುರುಡು
ತಾಕುವುದು ಮದನಶರ ಗುರಿಗಮ್ಯವ

ಮದನ ಮನ್ಮಥ ಮಾರ
ಹಿಡಿಯಿರಿ ಎದೆಕಟ್ಟಿನಲಿಬಂಧಿಸಿ
ಉಸಿರುಗಟ್ಟಿಸಿ ಬಿಗಿವ ಬಂಧನದಿ
ಪಿಚಕಾರಿಯ ಲಟಲಟ ಭಂಗಿಸಿ

ಬೇಟಯಾಡಿದರು ಲಲನೆಯರು
ಅನಂಗ ಕಾಮನ ಬೀದಿಬೀದಿಗಳಲಿ
ಕನ್ನೆ ರಸ್ತೆಗಳ ಕೆನ್ನೆಗಳು ಕೆಂಪಾದವು
ಕಾದಲದ ರಂಗಿನಾಟದಲ್ಲಿ

ಅನಂಗನ ಹೂಟವಿದು ಬೇಟೆಯಿದು
ಕೂಡುವ ಆಟವಿದು, ಕಾಡುವ ಕೂಟವಿದು
ರಸದಾಳಿ ಹುಡುಗರು ರಸವಂತಿ ಹುಡುಗಿಯರು
ಕೇಳಿಯಾಡಿದರು ರಂಗಿನೋಕುಳಿಯಾಡಿದರು

ಶಿವ ಶಿವ ಶಿವಾ ಬೆಳಗಾಯಿತು

ಹುಣ್ಣಿಮೆಯ ಉಬ್ಬರವಿಳಿದು
ಅನಂಗನ ಶೇಷ ಉಳಿದು
ಉಜ್ಜಿ ತೆಗೆಯುತ ಬಣ್ಣಗಳ
ನಿಟ್ಟುಸಿರಿಟ್ಟರು ಪ್ರಮತ್ತರು, ಪ್ರಮದೆಯರು

ಮಹಲಿಂಗ ರಂಗ ಹೇಳತಾನ
ಮಾಡಬೇಡಿ ಅನಂಗನ ಅಂಗ ಸಂಗ
ಅದು ಮುಕ್ತಿಗೆ ಪರವಾನಗಿ ಅಲ್ಲ

ಶಿವಾ, ತೆಗಿ ನಿನ್ನ ಮೂರನೆಯ ಕಣ್ಣ
ಸುಟ್ಟು ಭಸ್ಮಮಾಡು ಆ ನೀಚನ್ನ
ಊದುಬತ್ತಿ ಹೊತ್ತಿಸಿ ಬೇಡಿದಳು
ಸಾಫ್ಟವೇರಿಣಿ ಪಾರ್ವತಿ ಓಲೋ ಹತ್ತಿದಳು

`ಡ್ರೈವರ್ ಜಿಪ್ ಹಾಕಿದಾನ”
ಕಣ್ಣು ಕಾಮನ ದಹಿಸುತ್ತಿತ್ತು
ಕೈ ಗರ‍್ನಲ್ಲೋ ಮತ್ತೆಲ್ಲೋ
ಕನಲಿದಳು ಪಾರ್ವತಿ.

ಶಿವ ಶಿವ ಶಿವಾ

ಮಹಲಿಂಗರ೦ಗ ಹೇಳತಾನ
ಮಾಡಬ್ಯಾಡಿ ಅನಂಗನ ಅಂಗ ಸಂಗ
ಅದು ಮುಕ್ತಿಗೆ ಪರವಾನಗಿ ಅಲ್ಲ

‍ಲೇಖಕರು Admin

18 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading