ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಉಪಾಧ್ಯಗೆ ‘ನರಹಳ್ಳಿ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ…

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರಿಗೆ ಡಾ.ನರಹಳ್ಳಿ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ
ಅನ್ಯೋನ್ಯ ಕೌಟುಂಬಿಕ ನೆಲೆಯೇ ಸಾಹಿತ್ಯ ಪರಿಚಾರಿಕೆಗೆ ಮುಖ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ

ಮುಂಬಯಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ಅಲ್ಲಿನ ಸಾಹಿತ್ಯದ ಚಟುವಟಿಕೆಗಳನ್ನು ಬಿತ್ತರಿಸುವ ಕೆಲಸವನ್ನು ಕನ್ನಡ ವಿಭಾಗದ ಮೂಲಕ ಜಿ.ಎನ್. ಉಪಾಧ್ಯ ಅವರು ಮಾಡುತ್ತಿದ್ದಾರೆ. ಮುಂಬಯಿ ಬಗ್ಗೆ ನಮಗೆ ವಿಶೇಷ ಮೋಹ. ಇಂದು ಆನ್ ಲೈನ್ ಮೂಲಕ ಕನ್ನಡ ಜನಶಕ್ತಿ ಕೇಂದ್ರ, ಡಾ.ನರಹಳ್ಳಿ ಪ್ರತಿಷ್ಠಾನ ಹಾಗೂ ಮೈಸೂರು ಅಸೋಸಿಯೇಶನ್, ಮುಂಬಯಿ ಜೊತೆಯಾಗಿ ಆಯೋಜಿಸಿರುವ ಎಂಟನೆಯ ವರ್ಷದ ನರಹಳ್ಳಿ ಪ್ರಶಸ್ತಿ ಪ್ರದಾನ ಅಚ್ಚುಕಟ್ಟಾಗಿ ನಡೆದಿರುವುದು ಪ್ರತಿಷ್ಠಾನಕ್ಕೆ ಕೋಡನ್ನು ಮೂಡಿಸಿದೆ. ‌

ಇದು ಒಂದು ವಿಧದ ವಿಶಿಷ್ಟವಾದ ಕಾರ್ಯಕ್ರಮ. ನಮ್ಮದು ರಾಜಕಾರಣ ಅಲ್ಲ, ಸಾಹಿತ್ಯ ಕಾರಣ ಎಂದು ನಾಮಾಂಕಿತ ಕವಿ, ನರಹಳ್ಳಿ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ನುಡಿದರು. ಅವರು ಡಾ.ನರಹಳ್ಳಿ ಪ್ರತಿಷ್ಠಾನ, ಕನ್ನಡ ಜನಶಕ್ತಿ ಕೇಂದ್ರ ಹಾಗೂ ಮೈಸೂರು ಅಸೋಸಿಯೇಶನ್ನಿನ ಸಭಾಂಗಣದಲ್ಲಿ ಹಾಗೂ ಝೂಮ್ ವೇದಿಕೆಯಲ್ಲಿ ನಡೆದ ಡಾ.ನರಹಳ್ಳಿ ಪ್ರತಿಷ್ಠಾನ ಕೊಡಮಾಡುವ ನರಹಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಬಿ.ಎನ್.ಶ್ರೀಕೃಷ್ಣ ಅವರು ಡಾ.ಜಿ.ಎನ್. ಉಪಾಧ್ಯ ಅವರನ್ನು ನಾನು ಬಹಳ ವರ್ಷದಿಂದ ಹತ್ತಿರದಿಂದ ಬಲ್ಲೆ. ಅವರ ಕನ್ನಡಪರ ಕಾರ್ಯ ಹಾಗೂ ವ್ಯಕ್ತಿತ್ವ, ಬೌದ್ಧಿಕ ಶಕ್ತಿಯಿಂದ ನಾಲ್ದೆಸೆಗಳಲ್ಲೂ ಹೆಸರು ಮಾಡಿದ್ದಾರೆ. ‘ಕುರಿತೋದದೆಯಂ ಕಾವ್ಯಪ್ರಯೋಗ ಮತಿಗಳ್’ ಎಂದು ಕವಿರಾಜಮಾರ್ಗಕಾರ ಕನ್ನಡಿಗರನ್ನು ಕೊಂಡಾಡಿದ್ದಾನೆ. ಡಾ.ಉಪಾಧ್ಯ ಅವರು ಕುಳಿತು ಓದಿ ಕಾವ್ಯ ಪ್ರಯೋಗ, ಸಾಹಿತ್ಯ ಪ್ರಯೋಗ, ವಿಮರ್ಶೆ, ಸಂಸ್ಕೃತಿಯ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳ ಮೆಚ್ಚುಗೆಗೆ, ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಜಿ.ಎನ್.ಉಪಾಧ್ಯ ಅವರು ಈ ಪ್ರಶಸ್ತಿ ಮುಂಬಯಿ ಕನ್ನಡಿಗರಿಗೆ, ಕನ್ನಡ ವಿಭಾಗಕ್ಕೆ ಸಂದ ಗೌರವ. ರಾಷ್ಟçಮಟ್ಟದಲ್ಲಿ ನಾವು ಕನ್ನಡವನ್ನು ಕಟ್ಟುವಲ್ಲಿ, ಪಸರಿಸುವುದರಲ್ಲಿ ಸೋತಿದ್ದೇವೆ. ಕನ್ನಡದಲ್ಲಿ ಆದಾನ ಪ್ರದಾನ ನಿಂತು ಹೋಗಿದೆ. ಕನ್ನಡಿಗರು ಕನ್ನಡಿಗರನ್ನು ಗುರುತಿಸುವುದರಲ್ಲಿ ಸೋತಿದ್ದಾರೆ. ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಹಾ.ಮಾ.ನಾಯಕ್, ಶಿವರಾಮ ಕಾರಂತ, ಗಿರೀಶ್ ಕಾರ್ನಾಡ್, ಭೈರಪ್ಪ ಮೊದಲಾದವರ ಕುರಿತು ಚರ್ಚೆಯಾಗುತ್ತದೆ, ಆಮಂತ್ರಿಸಿ ಗೌರವಿಸಲಾಗುತ್ತದೆ. ನಾವೆಷ್ಟು ಮರಾಠಿ ಸಾಹಿತಿಗಳನ್ನು ಕರೆಸಿ ಗೌರವಿಸುತ್ತೇವೆ. ನಮ್ಮ ಸಂಕುಚಿತ ಮನೋಭಾವವನ್ನು ದೂರ ಮಾಡಬೇಕು ಎಂದು ಕನ್ನಡದ ಬೆಳವಣಿಗೆಯಲ್ಲಿ ಹಿನ್ನಡೆಯಾಗುತ್ತಿರುವುದರ ಕುರಿತು ಖೇದ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ರಜನಿ ಬಾಲಸುಬ್ರಹ್ಮಣ್ಯ, ಮೈಸೂರು ಅಸೋಸಿಯೇಶನ್ನಿನ ಟ್ರಸ್ಟಿಗಳಾಗಿರುವ ಡಾ.ಮಂಜುನಾಥ್, ಕೆ. ಮಂಜುನಾಥಯ್ಯ, ಅಭುದಾಬಿಯ ಸರ್ವೋತ್ತಮ ಶೆಟ್ಟಿ, ರವಿ ಶೆಟ್ಟಿ, ಕತಾರ್, ಪ್ರೇಮಾ ಉಪಾಧ್ಯ, ಕವಿ ಶಾಂತಾರಾಮ ಶೆಟ್ಟಿ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ, ಡಾ. ದಿನೇಶ ಶೆಟ್ಟಿ ರೆಂಜಾಳ, ಕಲಾವಿದರಾದ ಸುರೇಂದ್ರ ಕುಮಾರ್ ಮಾರ್ನಾಡ್, ಲತೇಶ್ ಪೂಜಾರಿ, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಐಲೇಸಾ ತಂಡದವರು ತಾಂತ್ರಿಕವಾಗಿ ಸಹಕರಿಸಿದರು.

ಡಾ.ನರಹಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿಗಳಾಗಿರುವ ಡಾ.ಆನಂದರಾಮ ಉಪಾಧ್ಯ ಅವರು ಸ್ವಾಗತಿಸಿ ಅಭಿನಂದನ ಭಾಷಣಗೈದರು. ಇಂಪಿನಗುಂಪಿನ ಪ್ರೀತಿ.ಎಸ್.ರೆಡ್ಡಿ ಸ್ವಾಗತ ಗೀತೆ ಹಾಡಿದರು. ಮೈಸೂರು ಅಸೋಸಿಯೇಶನ್ನಿನ ಕಾರ್ಯದರ್ಶಿ ಡಾ.ಗಣಪತಿ ಶಂಕರಲಿಂಗ ಅವರು ಧನ್ಯವಾದ ಸಮರ್ಪಿಸಿದರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

‍ಲೇಖಕರು Admin

8 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading