ಚಿತ್ರಗಳು : ಶ್ರೀಜಾ ವಿ ಎನ್
ಆ ಒಂದು ಕ್ಷಣ ಜಯಾ ಬಚ್ಚನ್ ಬೆರಗಾಗಿ ಹೋದರು. ನೋಡ ನೋಡುತ್ತಿದ್ದಂತೆಯೇ ಅವರ ಕಣ್ಣು ಅರಳಿತು. ಓಹ್! ಎನ್ನುವ ಉದ್ಘಾರ ತೆಗೆದರು. ಒಂದೆರಡು ಕ್ಷಣ ಅಷ್ಟೇ ಜರ್ರನೇ ಯಾವುದೋ ಲೋಕದಲ್ಲಿ ಕಳೆದು ಹೋದರು. ದಶಕಗಳ ಹಿಂದೆದಿನ ಕಾಲಕ್ಕೆ ತಮಗೆ ಗೊತ್ತಿಲ್ಲದೆಯೇ ಜಾರಿ ಹೋದರು.
ಹೌದು, ಹಾಗೆ ಮಾಡಿದ್ದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಾರ್ತಾ ಸಚಿವ ರೋಶನ್ ಬೇಗ್ ಅಂತರರಾಷ್ಟ್ರೀಯ ಚಲನ ಚಿತ್ರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಜಯಾ ಬಚ್ಚನ್ ಅವರ ಕೈಗೆ ಆ ಒಂದು ನೆನಪಿನ ಕಾಣಿಕೆಯನ್ನು ಇಟ್ಟರು. ಆ ನೆನಪಿನ ಕಾಣಿಕೆ ಮಾಡಿದ ಮ್ಯಾಜಿಕ್ ಅದು..
ಜಯಾ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಒಂದಾಗಿ ಮೈಸೂರಿಗೆ ಬಂದಿದ್ದರು. ಸರಿಯಾಗಿ ೪೪ ವರ್ಷಗಳ ಹಿಂದೆ. ಅದೂ ಎಂ ಎಸ್ ಐ ಎಲ್ ನ ಲಕ್ಕಿ ಡಿಪ್ ಗೆ ಚಾಲನೆ ನೀಡಲು. ಆ ಫೋಟೋವನ್ನು ಕಾದಿರಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಯಾ ಬಚ್ಚನ್ ಗೆ ಇದೇ ಸರಿಯಾದ ಉಡುಗೊರೆ ಎಂದು ನಿರ್ಧರಿಸಿತು. ಅಂತೆಯೇ ಕಪ್ಪು ಬಿಳುಪಿನ ಆ ಫೋಟೋ ಸ್ಮರಣಿಕೆ ಜಯಾ ಕೈಗೆ ಬಂದಾಗ ಅವರು ಬೆಕ್ಕಸ ಬೆರಗಾದರು.
ಇಂತಹ ಸಾವಿರಾರು ನೆನಪುಗಳ ಖಜಾನೆಯನ್ನೇ ಇಲಾಖೆ ಹೊತ್ತು ನಿಂತಿದೆ. ಒಂದೊಂದು ಫೋಟೋದ ಹಿಂದೆಯೂ ಒಂದೊಂದು ದೊಡ್ಡ ನೆನಪಿನ ವಸಂತವಿದೆ.
0 ಪ್ರತಿಕ್ರಿಯೆಗಳು