ಜಯಾ ಬಚನ್ ಹಾಗೆ ಹೇಳುವಾಗ ಅವರ ಮುಖ ಕಪ್ಪಿಟ್ಟಿತ್ತು
ಆತಂಕ ಮನೆ ಮಾಡಿತ್ತು
ದನಿ ನೊಂದಿತ್ತು
ಮುಂದೇನು ಎನ್ನುವ ಭಯ ಇತ್ತು
ದನಿಯೂ ನಡುಗಿತು
ಬೆಂಗಳೂರಿನಲ್ಲಿ ಜರುಗಿದ ೮ನೆಯ ಅಂತರರಾಷ್ಟ್ರೀಯ ಚಲನ ಚಿತ್ರ ಉತ್ಸವವನ್ನು ಉದ್ಘಾಟಿಸಿದ ಆಕೆ ಹೇಳಿದ್ದು ಇಷ್ಟೇ. ”ಗೊತ್ತಿಲ್ಲ ಯಾಕೆ ಅಂತ, ಆದರೆ ಬೆಂಗಳೂರು ಎಂದರೆ ಇಡೀ ನಮ್ಮ ಮನೆಗೆ ಭಯ ಕಾಡುತ್ತದೆ. ಪ್ರತೀ ಬಾರಿ ಅಮಿತಾಬ್ ಬೆಂಗಳೂರಿಗೆ ಬಂದಾಗಲೆಲ್ಲಾ ದುರಂತ ನಡೆದು ಹೋಗಿದೆ. ಆ ನೆನಪುಗಳು ಉಳಿಯುವುದೂ ಬೇಡ” ಎಂದು ಒಂದು ಕ್ಷಣ ಮೌನದ ಮೊರೆ ಹೋದರು.
ಆಮೇಲೆ ಸಾವರಿಸಿಕೊಂಡವರೇ ”ಆದರೆ ಹೀಗಿದ್ದೂ ನಾನೇಕೆ ಬಂದಿದ್ದೇನೆ ಗೊತ್ತಾ?, ಆ ರೀತಿಯ ಭಯ ಆತಂಕ ನಮ್ಮನ್ನು ಕಾಡಬಾರದು. ಇಷ್ಟೆಲ್ಲಾ ನೋವುಗಳ ಸರಮಾಲೆಯನ್ನು ತುಂಡರಿಸಲೇಬೇಕು. ಒಂದು ಸಂಭ್ರಮದ ನೆನಪು ಈ ಬಾರಿ ಹೊತ್ತು ಹೋಗಲೇಬೇಕು ಎಂದು ಬಂದಿದ್ದೇನೆ.”
”ಈ ಸಲದ ಸಂಭ್ರಮದ ನೆನಪು ಇಡೀ ನಮ್ಮ ಕುಟುಂಬ ಮತ್ತೆ ಇಲ್ಲಿಗೆ ಬರುವಂತೆ ಮಾಡಬೇಕು ಎನ್ನುವುದು ನನ್ನ ಆಸೆ”
ಎಂದು ಹೇಳಿ ಸಾವರಿಸಿಕೊಂಡವರೇ ”ಇನ್ನು ಪರವಾಗಿಲ್ಲ ಅಮಿತಾಬ್ ಗೆ ನೀವು ನೆಕ್ಸ್ಟ್ ಶೂಟಿಂಗ್ ಬೆಂಗಳೂರಿನಲ್ಲಿಯೇ ಮಾಡಿ ಎಂದು ಹೇಳುತ್ತೇನೆ” ಎಂದು ನಗೆ ಚೆಲ್ಲಿದರು.
ಅಮಿತಾಬ್ ಬೆಂಗಳೂರಿನ ಮಹಾರಾಣಿ ಕಾಲೇಜಿನ ಬಳಿ ಕೂಲಿ ಚಿತ್ರದ ಶೂಟಿಂಗ್ ಮಾಡುವಾಗ ದೊಡ್ಡ ಪೆಟ್ಟಾಗಿ ಅವರ ಕಥೆ ಮುಗಿಯಿತು ಎನ್ನುವಂತಾಗಿತ್ತು. ಅಮಿತಾಬ್ ರನ್ನು ಮೊದಲ ಚಿಕಿತ್ಸೆ ಕೊಡಿಸಿ ತಕ್ಷಣ ಮುಂಬೈ ನ ಬೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಐ ಸಿ ಯು ನಲ್ಲಿದ್ದ ಅಮಿತಾಭ್ ಗುಣಮುಖವಾಗುವವರೆಗೆ ಜಯಾ ಬರಿಗಾಲಿನಲ್ಲಿಯೇ ಆಸ್ಪತ್ರೆ ಹಾಗೂ ಸಿದ್ಧಿ ವಿನಾಯಕ ದೇವಸ್ಥಾನದವರೆಗೆ ನಡೆದು ಹರಕೆ ತೀರಿಸಿದರು.
ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ದೆ ಆಯೋಜಿಸಿದ್ದು ಅಮಿತಾಬ್ ಬಚ್ಚನ್. ಅದು ತೀವ್ರ ವಿವಾದಕ್ಕೆ ಒಳಗಾಗಿ ಪ್ರತಿಭಟನೆಗಳ ಸರಮಾಲೆಯನ್ನೆ ಎದುರಿಸಿತು. ಅಷ್ಟೇ ಅಲ್ಲ ಅಮಿತಾಬ್ ನ ಕಂಪನಿ ದಿವಾಳಿಯಾಗಿ ಹೋಯ್ತು. ಅದಕ್ಕೆ ತಿಲಕ ಇಟ್ಟಂತೆ ಇನ್ನೇನು ಸೌಂದರ್ಯ ಸ್ಪರ್ಧೆ ಆರಂಭವಾಗಬೇಕು ಎನ್ನುವಾಗ ಬೆಂಗಳೂರಿನ ಪೊಲೀಸರು ಮುಖ್ಯ ದ್ವಾರವನ್ನೇ ಮುಚ್ಚಿ ಹಾಕಿದ್ದರು. ಕಾರಣ ಅಮಿತಾಬ್ ಪೋಲೀಸ್ ಬಂದೋಬಸ್ತ್ ಗೆ ಸರ್ಕಾರಕ್ಕೆ ಕೊಡಬೇಕಿದ್ದ ಹಣವನ್ನೇ ನೀಡಲಾಗದಷ್ಟು ಪಾಪರ್ ಆಗಿ ಹೋಗಿದ್ದರು.
ಅಮಿತಾಬ್ ಸಹೋದರ ಅಜಿತಾಬ್ ಬಚ್ಚನ್ ಜಾತಕ ಹಿಡಿದು ಬಂದದ್ದು ಬೆಂಗಳೂರಿಗೆ. ಅಭಿಷೇಕ್ ಬಚ್ಚನ್ ಗೆ ಐಶ್ವರ್ಯಾ ಜಾತಕ ಹೊಂದುತ್ತದಾ ಎಂದು ಕೇಳಲು ಇಲ್ಲಿನ ಚಂದ್ರಶೇಖರ ಸ್ವಾಮೀಜಿ ಬಳಿ ಬಂದಿದ್ದರು. ಆಗ ಇನ್ನೂ ಐಶ್ವರ್ಯಾ ಸಲ್ಲು ಜೊತೆಗೆ ಡಿಂಗ್ ಡಾಂಗ್ ನಲ್ಲಿದ್ದ ಕಾಲ. ಚಂದ್ರಶೇಖರ ಸ್ವಾಮೀಜಿ ಹಾಗೂ ಅಭಿಷೇಕ್ ಬಚ್ಚನ್ ಹಾಗೂ ಜಾತಕ ಎಲ್ಲವೂ ಈಟಿವಿ ಚಾನಲ್ ನ ಕಣ್ಣಿಗೆ ಬಿದ್ದು ಮೊದಲ ಚುಂಬನವೇ ದೊಡ್ಡ ಬಿರುಗಾಳಿಯಾಗಿ ಹೋಯ್ತು.
0 ಪ್ರತಿಕ್ರಿಯೆಗಳು