ಚಿನ್ನಸ್ವಾಮಿ ವಡ್ಡಗೆರೆ
ಕುಸುಮಾ ಅಯರಹಳ್ಳಿ, ಇದೀಗ ತಾನೇ ನಿಮ್ಮ ದಾರಿ ಕಾದಂಬರಿ ಓದಿ ಮುಗಿಸಿದೆ.
ದಾರಿಯ ಹಾದಿಯಲ್ಲಿ ಸಾಗುತ್ತಿದ್ದಾಗ ನಾವು ಬದುಕುತ್ತಿರುವ ಕಾಲಘಟ್ಟದ ಒಂದು ಸಣ್ಣ ತುಣುಕಿನಂತೆ ಈ ಕಾದಂಬರಿ ಇದೆ ಎಂಬ ಭಾವ ಮೂಡಿತು. ವೇಗದ ಬದುಕಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಕಾದಂಬರಿಯ ರೂಪಕೊಟ್ಟಂತಿದೆ ದಾರಿ.
ನಾವು ಬದುಕುತ್ತಿರುವ, ನಮ್ಮ ನಡುವೆ ಇರುವ ಪ್ರತಿಯೊಂದು ಜೀವಿಯು ಪಯಣಿಸುವ ದಾರಿಗಳು ವಿಭಿನ್ನವಾಗಿವೆ. ತಲುಪಲಿರುವ ಗುರಿಗಳು ಬೇರೆಯಾಗಿವೆ. ಇಲ್ಲಿನ ಬಹುಜನರಿಗೆ ಸಮಾಜದಲ್ಲಿ ಶಾಂತಿ ನೆಲೆಸುವುದು ಬೇಕಿಲ್ಲ.ಪರಿಸರ ಸುಧಾರಣೆ, ಸಂರಕ್ಷಣೆ ಬೇಕಿಲ್ಲ.
ರಿಯಲ್ ಎಸ್ಟೇಟ್ ಕಮಲ ಕುಳಗಳ ನಿಯಂತ್ರಣದಲ್ಲಿ ಸಮಾಜ ಇದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪ್ರಕಾಶ, ಚಂದ್ರಣ್ಣ, ಜವರಪ್ಪ, ದೇವಿಕೆರೆಯ ಸ್ವಾಮೀಜಿ, ರವಿಪ್ರಕಾಶ್, ಮಂಗಳಾ, ಚರಿತಾ ರಂತಹವರು ಅಸಹಾಯಕರಂತೆ ಕಾಣುತ್ತಾರೆ.
ನಿಜ ಹೇಳಬೇಕು ಅಂದ್ರೆ ನಮ್ಮೊಳಗೂ ಒಬ್ಬ ಪ್ರಕಾಶ ಇದ್ದಾನೆ. ನಮ್ಮೊಳಗೂ ಒಬ್ಬ ಚಂದ್ರಣ್ಣ ಇದ್ದಾನೆ. ಹಾಗೇ ಪುರುಷೋತ್ತಮ ರಂತಹವರು ಇದ್ದಾನೆ. ಆದರೂ ನಾವೆಲ್ಲ ಅಸಹಾಯಕರು. ಇದಕ್ಕೆ ಉತ್ತರ ನಿಮ್ಮ “ದಾರಿ” ಯಲ್ಲೇ ಇದೆ ಅನಿಸ್ತು.
ನಾವೆಲ್ಲಾ ಈಗ ವಿಜಯ್, ಪದ್ಮಿನಿ ಅಂತವರ ಜೊತೆ ಬದುಕ್ತಿದ್ದೀವಾ ಅಂತಲೂ ಅನಿಸ್ತು.
ಒಂದು ಜನಪ್ರಿಯ ಕನ್ನಡ ದಾರಾವಾಹಿಗೆ ಇರಬಹುದಾದ ಎಲ್ಲಾ ಗುಣಲಕ್ಷಣಗಳು ದಾರಿಯಲ್ಲಿವೆ. ಕತೆಯ ಬಗ್ಗೆ ಕುತೂಹಲ ಕೆರಳಿಸುತ್ತಲೆ ಬದುಕಿನ ಸತ್ಯಗಳನ್ನು ತೆರೆದಿಡುವ ಬಗೆ ಇಷ್ಟವಾಯಿತು. ಅದಕ್ಕಾಗಿಯೇ ದಾರಿಗೆ ಸರಾಗವಾಗಿ ಓದಿಸಿಕೊಳ್ಳುವ ಗುಣ ಪ್ರಾಪ್ತವಾಗಿದೆ.
ಹಳ್ಳಿಯ ಜನಜೀವನ. ಅಲ್ಲಿಯ ಜನರ ನಾನಾ ವರಸೆಗಳು. ಕೌಟುಂಬಿಕ ದುರಂತಗಳು. ಇದೆಲ್ಲದರ ನಡುವೆ ಸೆನ್ಸಿಟಿವ್ ಆದ, ಉದಾರವಾಗಿ ಆಲೋಚಿಸುವ ಸೂಕ್ಷ್ಮಮತಿಗಳು, ಹೋರಾಟಗಾರರು ಹಳ್ಳಿಗಳಲ್ಲಿ ಬದಕಲು ಎಷ್ಟೆಲ್ಲಾ ಹೋರಾಟ ನಡೆಸಬೇಕು ಎನ್ನುವುದನ್ನು ಸರಳವಾಗಿ ಓದುಗನಿಗೆ ಅರ್ಥವಾಗುವಂತೆ ಹೇಳಿದ್ದೀರಿ. ಅದಕ್ಕಾಗಿ ನಿಮಗೆ ಅಭಿನಂದನೆಗಳು.
ಗ್ರಾಮೀಣ ಜನಜೀವನ ಮತ್ತು ಧಾರಾವಾಹಿಯಲ್ಲಿ ನಟಿಸುವವರ ಬದುಕಿನ ಅನಾವರಣ ರೈಲ್ವೆ ಹಳಿಗಳಂತೆ ಪರಸ್ಪರ ಎಲ್ಲೂ ಸಂದಿಸಲು ಸಾಧ್ಯವಿಲ್ಲ. ಎರಡು ಹಳಿಗಳು ಸಂಧಿಸಿದರೆ ದುರಂತ ನಿಶ್ಚಿತ ಎಂಬ ಧ್ವನಿಯೂ ದಾರಿಯ ಅಂತಾರ್ಯದಲ್ಲೇ ಇದೆ.
ಪತ್ರಿಕೋದ್ಯಮ, ಧಾರವಾಯಿ, ಗ್ರಾಮೀಣ ಬದುಕು, ಪ್ರೀತಿ ಪ್ರೇಮ, ಆಧ್ಯಾತ್ಮ ಎಲ್ಲಾ ಎಳಗಳನ್ನು ಇಟ್ಟುಕೊಂಡು ಜನಪ್ರಿಯ ಧಾರಾವಾಹಿಯ ಶೈಲಿಯಲ್ಲಿ ಕಟ್ಟಿರುವ ದಾರಿ ಇಷ್ಟವಾಯಿತು.
0 ಪ್ರತಿಕ್ರಿಯೆಗಳು