ಗಣಪತಿ ಅಗ್ನಿಹೋತ್ರಿ
ಅಮೂರ್ತ ಅನಿಸಿದರೂ ಮೂರ್ತ ಭಾವ ಒಳಗೊಂಡಿರುವ ಕಲಾಕೃತಿಗಳು. ಪ್ರಜ್ವಲಿಸುವ ಬಣ್ಣಗಳ ಏರಿಳಿತ ಮತ್ತು ಕುಂಚದ ಬೀಸು ಆಕರ್ಷಿತ. ನೋಡುಗನನ್ನು ಏಕತಾನತೆಯ ಪರಿಧಿಯಲ್ಲೇ ಉಳಿಯುವಂತೆ ಮಾಡಿಬಿಡುತ್ತದೇನೋ ಎನ್ನುವಂತಿರುವ ಕಲಾಕೃತಿಗಳ ವಸ್ತು ವಿಷಯ!!
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1 ಮತ್ತು 2ರಲ್ಲಿ ಪ್ರದರ್ಶಿಸಲ್ಪಟ್ಟ ಕ್ರಿಷ್ ಅಯ್ಯರ್ ಅವರ ಕಲಾಕೃತಿಗಳು ಗಮನಸೆಳೆದವು. ಗಂಡು – ಹೆಣ್ಣಿನ ಶೃಂಗಾರಮಯ ಆಪ್ತ ಕಲಾಪಗಳು ಭಾರತೀಯ ಕಲಾಪ್ರಕಾರಕ್ಕೆ ಹೊಸತಲ್ಲ. ಸಾಹಿತ್ಯ ಇರಬಹುದು, ಚಿತ್ರ-ಶಿಲ್ಪ ಕಲೆ ಇರಬಹುದು. ನಾನಾ ಶೈಲಿಯಲ್ಲಿ, ಬಗೆ ಬಗೆಯ ಸಂದರ್ಭಗಳಲ್ಲಿ ಒಂದಕ್ಕಿಂತ ಇನ್ನೊಂದು ಅದ್ಭುತ ಎನಿಸುವ ರೀತಿಯಲ್ಲೇ ಚಿತ್ರಿಸಲಾಗಿದೆ. ಇಂತಹುದೇ ಮತ್ತೊಂದು ಪ್ರಯತ್ನವಾಗಿ ಕಾಣಿಸುತ್ತವೆ ಕೃಷ್ ಅಯ್ಯರ್ ಅವರ ಕಲಾಕೃತಿಗಳು. ಆದರೆ ಅಮೂರ್ತದೊಳಗಿನ ಮೂರ್ತ ನೋಡುಗನನ್ನು ಸೆಳೆದು ನಿಲ್ಲಿಸುತ್ತವೆ.
ಗಾಢವಾದ ಬಣ್ಣಗಳ ಬಳಕೆ ಹಾಗೂ ಕಲಾಕೃತಿಗಳ ಅಳತೆ ಆಕರ್ಷಣೆಗೆ ಮತ್ತೊಂದು ಕಾರಣ. ಈ ವಿಚಾರದಲ್ಲಿ ಕಲಾವಿದನ ಪರಿಕಲ್ಪನೆ ಶ್ಲಾಘನೀಯ. ಸೆಳೆತ ಕುತೂಹಲಕಾರಿ. ಶುಭವಾಗಲಿ.
ಕಲಾಪ್ರದರ್ಶನ ಮಾರ್ಚ್ 26ರ ತನಕ ಸಾರ್ವಜನಿಕರ ವೀಕ್ಷಣೆಗೆ ಲಭ್ಯ. ನೀವೂ ನೋಡಿ ಬನ್ನಿ.
0 ಪ್ರತಿಕ್ರಿಯೆಗಳು