ಅರ್ಚನಾ ಎಚ್ ಕವಿತೆ- ಅವನು ದೂರವಾದ್ದರ ಕಾರಣ..!?

ಅರ್ಚನಾ ಎಚ್

ಇಂದಿಗೂ ಇಂಗಿತಕೆ ಸಿಗದ
ಒಳಹೊರಗುಗಳ ಬೆರಗುಗಣ್ಣಲ್ಲೇ
ನೋಡುವ ಚಿನಕುರಳಿ ಚಿಟ್ಟೆ ..
ಬೊಗಸೆ ಕಣ್ಗಳಲಿ ಅವನ ಬಿಂಬವಷ್ಟೇ
ಇಳಿಸಿದ್ದು..,
ಮತ್ಯಾರ ನೆರಳ ಸೋಕದಷ್ಟು..!
ಪ್ರೀತಿ ಕೊಟ್ಟದ್ದು ಅಕ್ಷಯಪಾತ್ರೆ
ದಕ್ಕಿದ್ದು ಮಾತ್ರ ಅರೆಹೊಟ್ಟೆ..!

ಕ್ರಯ ವಿಕ್ರಯಗಳಿದ್ದರೆ ತಾನೇ ಬಂಧ
ಹಮ್ಮು ಬಿಮ್ಮು ಬಿಗುಮಾನಗಳ
ಕಡಲ ದಾಡಿದರಷ್ಟೇ ಗಮ್ಯ…
ಬಣ್ಣ ಮಾಸಿದ್ದಿರಬಹುದು
ಒಳಗಣ್ಣ ಅರಿವು ಅಗ್ನಿದಿವ್ಯ…
ನೆರೆ ಕೂದಲಿಗಷ್ಟೇ ಕಾಲ ಮನಸ್ಸಿಗಲ್ಲ
ಕಪ್ಪುಮೋಡಗಳ ದಟ್ಟ ಹರವಿನಲಿ
ರಜತ ಕಾಂತಿಯ ಅಂಚಿಟ್ಟ ಕಾವ್ಯ..

ನೀನೊಂದು ಹೆಮ್ಮರವೆನ್ನಲೇ..!?
ಲತೆಗಳ ಬಹುತ್ವವನ್ನೂ ಸಂಭಾಳಿಸುವಿ..
ನಿನ್ನಾತ್ಮಕ್ಕಂಟಿದ ಉಸಿರೆಂದೆಣಿಸಿದ್ದೆ..
ಅನಿಸಿಕೆ ಅಭಿವ್ಯಕ್ತಿಗಳೆಲ್ಲವೂ‌ ನನ್ನದಷ್ಟೇ..
ಮಣಭಾರ ಹೊತ್ತು ತಿರುಗುವ ಪುರುಸೊತ್ತಿಲ್ಲ
ಭಾವನೆಗಳಿಗೂ ಭರವಸೆಯ ನಾಳೆಗಳಿಗೂ..
ಮಂಕರಿಯ ಜೋಳ ಇನ್ನು ಬತ್ತಿಲ್ಲ..!
ಇಂದೋ ನಾಳೆಯೋ ಮಾರುವಷ್ಟು‌ ಹಸಿ..!

ಕೋಶದಲಿ ಸಿಗದ ಭಾಷೆಗೊಲಿಯದ ನೋವು
ಉತ್ತಿಬಿತ್ತಿ ಬೆವರಿಳಿಸಿ ಬೆಳೆದ ಬೆಳೆ
ಅತಿವೃಷ್ಟಿಯಲಡರಿ ನೆಲಕಚ್ಚಿದಂತೆ..
ವಾರಪೂರ್ತಿ ಹಸಿದು ತತ್ತರಿಸಿದವಗೆ
ದೊರೆತ ಕೂಳ ಸೊಣಗ ತಿಂದಂತೆ..
ನಂಬಿ ಕೆಟ್ಟೆನೆಂಬ ದಾರ್ಷ್ಟ್ಯ ಸ್ವೀಕೃತವಲ್ಲ..
ಮನಸ್ಸು ವಯಸ್ಸು ಕಟ್ಟುಪಾಡಿನ ಪರ್ವವಲ್ಲ..!
ಅಂತರ್ಮುಖಿಯಾದರೂ
ಬಲಾಢ್ಯಳು‌ ನಾನು..!!

ಒಳಗಣ್ಣು ಮತ್ತೆ ತೆರೆಯಬಹುದು
ತೆರೆಮರೆಯ ನಿನ್ನಾಟಗಳೆಲ್ಲಾ ಸಾಕ್ಷ್ಯ ಸ್ಪಷ್ಟ ..
ಪುರಾವೆಗಳ ಹೆಕ್ಕಿ ತೆಗೆಯಲೇನು ಕಷ್ಟದ ಮಾತಲ್ಲ
ಮುಗಿಲ ಹಕ್ಕಿಗೆ
ತೇಲುವ, ನಡೆವ, ಹಾರುವ
ಹಾಡುವ, ಬೇಟೆಯಾಡುವ ಕಲೆಯೂ ಕರಗತ..!
ಪಾತ್ರೆಯಲಿಟ್ಟ ಹಾಲು ಖುಲಾಸೆಯಾಗಿದ್ದು
ಕೆಲಸದವಳ ತಪ್ಪೋ ಬೆಕ್ಕಿನದ್ದೋ
ಅಸ್ಪಷ್ಟ ಮಾತ್ರ..!!

‍ಲೇಖಕರು avadhi

March 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: