
ಎಂ ವಿ ಶಶಿಭೂಷಣ ರಾಜು
ನಿಂತು ಬಿಟ್ಟಿದ್ದೇವೆ ತಿರುವಿನಲಿ
ಅಂತೂ ಇಂತೂ ಏಗಿ
ಬಹುದೂರದ ಹಾದಿ, ಹಿಂತಿರುಗಿ ನೋಡಿದರೆ ಇಳಿಜಾರಿನಂತಿದೆ
ನೂಕಿದರೆ ಮತ್ತೆ ಅದೇ ಸ್ಥಳಕ್ಕೆ ಉರುಳುವೆವು
ಅನೇಕ ಕೈಗಳಿಗೆ ಅದು ಹಾಸ್ಯ,
ಜೀವನದುದ್ದೇಶ ಹಲ ಮನಸುಗಳಿಗೆ
ಒಂದು ಘಟ್ಟ ತಲುಪಿದ್ದೇವೆ, ಸುಧಾರಿಸಿಕೊಳ್ಳುತ್ತಿದ್ದೇವೆ
ಮುಂದೊಯ್ಯುವ ತವಕ
ಮತ್ತದೇ ಇತಿಹಾಸ ಮರಕಳಿಸುವುದು ಬೇಡ
ದೇವರು ದಿಂಡರು ಇರಲಿ ಮನಸಿನಲಿ
ಧರ್ಮವೋ, ಜಾತಿಯೋ ನಾಲ್ಕು ಗೋಡೆಯೊಳಗಿರಲಿ

ಮಾನವರು ನಾವು, ನಮಗೆ ನಾವೇ ನೆರವು
ಎಲ್ಲಿಂದಲೋ ಯಾರೋ ಕಾಯುವುದಿಲ್ಲ,
ಒಬ್ಬರಿಗೊಬ್ಬರು ಕಾಣದ ದಾರದಲ್ಲಿ ಬಂಧಿತರು
ತುಂಡರಿಸಿದರೆ ತೂರಿ ಹೋಗುವೆವು
ದಾರಿ ಇದೆ ಸವೆಸಲು, ಕೊನೆಯಾಗುವುದಿಲ್ಲ
ನಿರಂತರ ಪಯಣ, ಗಮ್ಯವಿರುವುದಿಲ್ಲ
ಉನ್ನತಿಗೆ, ಪಾರದರ್ಶಕ ಜಗಕೆ, ಸಮಾನತೆಗೆ
ಸಹನೆಗೆ, ವಿಜ್ಞಾನದವಗಾಹನೆಗೆ, ಸ್ವಚಂದ ನಗುವಿಗೆ
ತೆರೆದುಕೊಳ್ಳುವ ಜಗದ ಸೃಜನೆಗೆ
ಚಲಿಸುತ್ತಲೇ ಇರುವುದು






0 Comments