ದೀಪಾ ಗೋನಾಳ
ಅವನ ಪ್ರೀತಿಯ ಸೆಳವಿನ ಆಳ ಬಿದ್ದವರಿಗಷ್ಟೆ ಗೊತ್ತು.. ಯಾರದ್ದೊ ದುಃಖಕ್ಕೆ ಕಣ್ಣೀರಾಗುವ ಅವನು ಇನ್ನಾರದೋ ಉಸಿರೊದ ದೇಹಕ್ಕೆ ಹೆಸರೆ ಗೊತ್ತಿಲ್ಲದ ಬಳಗಕ್ಕೆ ಹೆಗಲುಗೊಡುತ್ತಾನೆ. ಹಠಾತ್ತನೆ ಫೋನಾಯಿಸದರೆ ಸುಮ್ಮನೆ ಕತ್ತರಿಸಿ ಕೆಲವು ನಿಮಿಷದ ನಂತರ ಕಾಲಾಯಿಸುತ್ತಾನೆ..
ನಾನೇನೋ ಗಡಿಬಿಡಿಯಲ್ಲಿದ್ದೆ ಹಾಗೆ ಗಡಿಬಿಡಿಯೊಳಗೆ ನಿನ್ನ ಪೋನೆತ್ತಿ ಬೇಡವಾದದ್ದೆಲ್ಲ ಮಾತಾಡಿ ಇಡಲಾಗುವುದಿಲ್ಲ ಅದಕ್ಕೆ ಕತ್ತರಿಸಿದೆ, ಈಗ ಹೇಳು ಏನುಟ್ಟಿ ಏನುಂಡಿ ಏಲ್ಲಿದ್ದಿ.. ಬರಲಾ-ಬಂದ್ರೆ ಏನ ಕೊಡತಿ ಅಲ್ಲಲ್ಲ ಏನ ಕೊಡಸ್ತಿ ಹೀಗೆ ಮಾತನಾಡುತ್ತಲೆ ಹೋಗುತ್ತಾನೆ..
ಅದಕ್ಕೆ ಸಿದ್ದಳಾಗೆ ಇದ್ದವಳಂತೆ ಇವಳು ತೆಳು ನಾಚಿಕೆ ಹಗುರ ಮಾತು ನಡುವೆ ಒಂದು ಅವನಿಗೆ ಕೇಳುವಷ್ಟು ಉದ್ದದ್ದ ಉಸಿರು ಮತ್ತವನ ಎಲ್ಲ ಕೀಟಲೆಗು ಮುಸಿ ಮುಸಿ ನಗು ನಿಮಿಷಗಳು ನಿಂತು ಇವರ ಮಾತಾಲಿಸಿ ಮೈ ಮರೆಯಬೇಕು..
ಏನು ಓದಿದೆ ಇವನ ಪ್ರಶ್ನೆ, ಅದೆ ನಿನ್ನ ಮೊದಲ ಪದ್ಯ ಓದುತ್ತಲೆ ಉಳಿದಿದ್ದೇನೆ ಕೊನೆ ಪುಟದ ಹೊತ್ತಿಗೆ ಕೊನೆಯಾಗೊ ಹೊತ್ತೆ ಬಂದಿರುತ್ತೆನೋ..
ಚುಪ್ –ನೀ ಹಿಂಗೆಲ್ಲ ಮಾತಾಡಿದ್ರೆ ನಿನ್ನ ಛಾಳಿ ಟು… ನಾ ಫೊನ್ ಇಡ್ತನೀ, ಅವನ ಮುನಿಸು ಬೇಡ ಮಾರಾಯ ಸಾರ್ರಿ ಮಾತಾಡು..
ಮತ್ಯಾಕೆ ನನ್ನ ಕೆರಳಿಸೊ ಮಾತು ಸುಮ್ಮನೆ.. ನೀ ಅಷ್ಟು ಗಟ್ಟಿ ಪದ್ಯ ಬರದ್ರೆ ಇನ್ನೂ ನನ್ನಂತ ಮಡ್ಡರು ಎಷ್ಟು ಸಾರಿ ಓದೋದು ಪ್ರತಿ ಓದಿಗೂ ಬಿಚ್ಚಿಕೊಳ್ಳುವ ಹೊಸ ಅರ್ಥ ಗಳು.. ನಾ ಹೇಗೆ ಮುಂದಿನ ಪುಟಕ್ಕೆ ಹೋಗೋದು??
ಜಾಣೆ ನೀನು ನಾನು ಬರೆದಾಗ ಅರ್ಥವೇ ಇಲ್ಲದ ಪದ್ಯವದು ನಿನ್ನ ಕೈಗೆ ಸಿಕ್ಕು ಪದರಗಳು ಬಿಚ್ಚಿಕೊಂಡರೆ ಅದು ನಿನ್ನ ಅದಮ್ಯ ಅನುಭವದ ಜ್ಞಾನದ ಪರಿಣಾಮ.
ಹ ಹ ಹ ಇವಳ ನಗು..
ಯಾಕೆ ಏನಾಯ್ತು ನೀ ಮತ್ತೆ ಕವಿ ಹೋಗಿ ತತ್ವಜ್ಞಾನಿ ಯಾದೆ ನೋಡು, ನನ್ನದು ಬಿಡು ಮಾರಾಯ ನಿಂದು ಹೇಳು ಏನು ಬರೆದೆ..?
ಬರೆದೆನೊಂದು ಪದ್ಯವಾ
ಮರದ ಮರೆಯಲಿ ನಿಂತು ನೋಡುವ
ಸಿರಿಕನ್ಯಯ ಕೈ ಬಳೆನಾದಕ್ಕೆ ಸೋತ
ಪರಿಯ ಪದ್ಯದಲಿ ಬರೆದೆ
ಅದೆ ಬಳೆಯಿಟ್ಟ ಕನ್ಯೆಯ
ಕೈಗಿಟ್ಟು ಬಂದಿಹೆನು
ಉತ್ತರಿಸುವ ಗೋಜಿಗೆ
ಹೋಗದಿರು ದೇವಿ
ಇದು ಬರಿ ಅರ್ಪಣೆ ಸಮರ್ಪಣೆ
ದೇವಿ ಎದುರಿಗಿಟ್ಟ ಪ್ರಸಾದದಷ್ಟೆ ಪವಿತ್ರ
ನಿವೇದಿಸಿಕೊಳ್ಳುವುದಷ್ಟೆ ಭಕ್ತನ ನೀತಿ
ಚರಣ-ಕಮಲ, ಕೋಮಲ-ಕರ
ತುರುಬಿನ ಹೂ ಸುಗಂಧ
ಉಟ್ಟ ಲಂಗದ ನಿರಿಗೆ ಝಳಪು
ಕಣ್ಣಿಗೆ ಕಟ್ಟಿಕೊಟ್ಟ ಭಾಗ್ಯಕ್ಕೆ
ಈ ಭಕ್ತನ ದಾಸ್ಯ ಸಾರ್ಥಕ..
ಎದ್ದು ಬರದ ನಿದ್ದೆ ನಿನದು
ನಾ ಎಷ್ಟೆ ಬೇಗವೆದ್ದರೂ
ಮರದ ಮರೆಯಿಂದಾಚೆಗೆ
ಬರದ ನಾಚಿಕೆ ನಿನದು
ನಿನ್ನೆದೆಯ ಮೆಲಣ ಮಣ್ಣವಾಸನೆಗೆ
ಪ್ರೀತಿಯ ಮರ ಎಷ್ಟುದ್ದ ಬೆಳೆದು ನಿಂತಿದೆ
ಅದೆ ಮರವ ಅಪ್ಪಿ ನಿಂತು ನನ್ನ ನೋಡುತ್ತಲೇ
ಉಳಿದ ಸ್ವರ್ಗವಾಸಿ ನೀನು..
ಅಬ್ಬಾ ಪದ್ಯವೇ ಇದು ನಾನೇನಾದರು ಆ ಮರದ ಮರೆಯಲಿ ನಿಂತ ದೇವಿಯಾಗಿದ್ದರೆ ಇಷ್ಟೊತ್ತಿಗೆ ತಥಾಸ್ತು ಹ ಹ ಹ ….
ಅದಕ್ಕೆ ಈ ಪದ್ಯ ನಿಂಗಿಲ್ಲ..
ಪದ್ಯದ ಶಿರೋನಾಮೆ ಕೇಳೆ ..
ಹೂ ಹೇಳು ಮಾರಾಯಾ..
ಗೋರಿಯಾದವಳ ನೆನಪು..
ಇರ್ವರಮದ್ಯ ಈಗ ಒಂದುದ್ದದ ಮೌನ…….
0 ಪ್ರತಿಕ್ರಿಯೆಗಳು