ಜಂಟಿ ಹೂಗಳ ಜಾತ್ರೆ
– ಚೈತ್ರಿಕಾ ಶ್ರೀಧರ್ ಹೆಗಡೆ

ಉದುರಿದ ಪಕಳೆಗಳನೆಲ್ಲ
ಹಸಿರು ದೇಟಿಗೆ ಅಂಟಿಸಿಕೊಂಡವು..
ಅವುಗಳ ನೀಲಿ ಮೆಲ್ಲಗೆ
ಮುಗಿಲ ಬರೆಯಿತು..
ನಡುವೆ ತಿಳಿಗೆಂಪಿನೆಸಳ
ಸಿಕ್ಕಿಸಿದಾಗ, ಎಲ್ಲೆಡೆಯೂ
ಮಣ್ಣು ಹರಡಿತು..
*
ನದಿಯ ಕಿಲಕಿಲವ,
ಹಕ್ಕಿ ಕಲರವವ ಹೆಕ್ಕಿ ಹೆಕ್ಕಿ,
ಜೊತೆಗೇ ಹೊಲಿದುಕೊಂಡವು..
ಒಂದಷ್ಟು ತೆಗೆದು ಎಲ್ಲರ
ತುಟಿಗಂಟಿಸಿದವು..
ದಳದ ತುದಿಯ ಕಂಬನಿ,
ಪ್ರತಿ ಬೆಳಗಿಗೂ ಜಾರಿ..,
ಜಗವ ನಗಿಸುವ ಜರೂರಿ.
ಪಕಳೆ ಬಿಚ್ಚಿ ಪಕಪಕನೆ
ನಕ್ಕಂತೆ, ಕಡಲು ಶಾಯಿ
ಸುರಿದು ಪತ್ರ
ಬರೆಯುತಿದೆ ನಮಗೆ!
ಈ ದಳಗಳೊಳಗೇ
ನಾವಿರುವುದು ಗೊತ್ತಿಲ್ಲ,
ಕಡಲಿಗೂ…ಅವರಿಗೂ..
*
ಗಂಧ ಹರಡಿದರೆ
ಗುರುತಿಸಬಹುದೆ ಅವರು?
ಕಸಿವಿಸಿಯಾಗಬಹುದೆ
ಕಡಲು, ನಾವದನು
ಮರೆತಿದ್ದಕ್ಕೆ?
ಬಿಡಿ ಬಿಡಿಯಾಗಿ ಬಿದ್ದುಕೊಂಡ
ನಮ್ಮ, ಜಂಟಿಯಾಗಿ ನೇಯ್ದ
ಹೂಗಳಿಂದ ಜಾರೋದು
ಹೇಗೆ ಹೇಳು?
*
ಇದ್ದು ಬಿಡೋಣ ಕದ್ದು ಮುಚ್ಚಿ,
ಈ ಹೂವ ಮೇಲೆ ಇರುಳು
ತೇರನೆಳೆವಾಗ..
ಅವರು ಹುಡುಕಿದಷ್ಟೂ,
ನಮ್ಮೊಳಗೆ ನಾವು ಕಳೆಯುತ್ತ..
*





ಚೆನ್ನಾಗಿದೆ.
ಚೆನ್ನಾಗಿದೆ ಕವಿತೆ
ನೇಯ್ಗೆ ಸುಂದರವಾಗಿದೆ
nimma kaviteya holige elekeeladantide.its nise.