ಪುರುಷೋತ್ತಮ ಬಿಳಿಮಲೆ
ಬೆಳಗ್ಗೇಳುತ್ತಲೇ ಧಾರವಾಡದ ಗೆಳೆಯ, ಜಾನಪದ ಗಾರುಡಿಗ ಬಸವಲಿಂಗಯ್ಯ ತೀರಿಕೊಂಡ ಸುದ್ದಿ ಕಿವಿಗೆ ಅಪ್ಪಳಿಸಿತು. ಅದೊಂದು ನಂಬಲಾಗದ ವಿಷಯವಾಗಿತ್ತು. ಅವರಿಗೆ ಆರೋಗ್ಯ ಚೆನ್ನಾಗಿರಲಿಲ್ಲ ಎಂದು ತಿಳಿದಿತ್ತು. ಆದರೆ ಅದುವೇ ಕಾರಣವಾಗಿ ಎಲ್ಲ ಬಂಧನಗಳನ್ನು ಬಿಡಿಸಿಕೊಂಡು ಇಷ್ಟು ಅವಸರದಲ್ಲಿ ಹೊರಟು ಬಿಡುತ್ತಾರೆ ಅಂದುಕೊಂಡಿರಲಿಲ್ಲ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರಿನ ಈ ಕಲಾವಿದ ಜಾನಪದ ವಿಷಯದಲ್ಲಿ ಎಂ.ಎ. ಪದವಿ ಪಡೆದವರು. ೧೯೮೩ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದ ಅವರು ಬಿ.ವಿ.ಕಾರಂತರೊಂದಿಗೆ ರಂಗಸಂಗೀತ ಕುರಿತು ಅಭ್ಯಾಸ ಮಾಡಿದರು. ನಾನು ನೋಡು ನೋಡುತ್ತಿರುವಂತೆಯೇ ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ೧೯೯೩-೯೪ರಲ್ಲಿ ನಾವು ಹಲವರು ಅವರ ಜೊತೆಗೂಡಿ ಕಿತ್ತೂರಿನಲ್ಲಿ ಕೃಷ್ಣ ಪಾರಿಜಾತ ಉತ್ಸವ ನಡೆಸಿದೆವು.
ಹಿರೇಮಠರಿಗೆ ಪರಿಚಯವಿಲ್ಲದ ಪಾರಿಜಾತದ ಕಲಾವಿದರೇ ಇರಲಿಲ್ಲ. ಅವರೊಡನೆ ಮಾತಾಡುತ್ತಾ, ಹಾಡುತ್ತಾ ಸ್ವತಹ ಕಲಾವಿದನೇ ಆಗಿಬಿಡುವ ಹಿರೇಮಠರು ಮುಂದೆ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗಬಹುದಾದ ಶ್ರೀ ಪಾರಿಜಾತವನ್ನು ರೂಪಿಸಿದರು. ಇದು ದೇಶದೆಲ್ಲೆಡೆ ಸಾವಿರಾರು ಪ್ರಯೋಗಗಳನ್ನು ಕಂಡಿತು. ಅವರ ಶ್ರೀಮತಿ ವಿಶ್ವೇಶ್ವರಿ ಹಿರೇಮಠರು ಕೂಡಾ ಕಲಾವಿದರೇ. ಅವರದೊಂದು ಅಪೂರ್ವ ಜೋಡಿ.
ಹಿರೇಮಠರ ಬಹುಮುಖೀ ಪ್ರತಿಭೆಯನ್ನು ಭಾಷೆಯಲ್ಲಿ ವಿವರಿಸುವುದು ಕಷ್ಟ. ನಟ, ಗಾಯಕ, ಸಂಗೀತ ನಿರ್ದೇಶಕ, ಗೆಳೆಯ, ಹೀಗೆ ಹತ್ತು ಹಲವು ವಲಯದಲ್ಲಿ ಅವರು ಪ್ರಸಿದ್ಧರು. ದಾಸರ ಪದಗಳು, ತತ್ವಪದಗಳು, ಬಯಲಾಟದ ಪದಗಳನ್ನು ಅತ್ಯದ್ಭುತವಾಗಿ ಅವರು ಹಾಡುತ್ತಿದ್ದಾಗ ನಾವೆಲ್ಲ ಮೂಕರಾಗುತ್ತಿದ್ದೆವು. `ಸಂಗ್ಯಾ ಬಾಳ್ಯಾ’ ದ ಹಾಡುಗಳನ್ನು ಅವರ ಬಾಯಲ್ಲಿಯೇ ಕೇಳಬೇಕು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ ಶರೀಫ್ ಪ್ರಶಸ್ತಿಗಳೆಲ್ಲ ಅವರಿಗೆ ಲಭಿಸಿವೆ.
ನನ್ನ ಕಾಲದ ಬಹುದೊಡ್ಡ ಪ್ರತಿಭೆಯೊಂದು ಹೀಗೆ ಇದ್ದಕ್ಕಿದ್ದಂತೆ ಮರೆಯಾದುದಕ್ಕೆ ತುಂಬ ಬೇಸರವಾಗುತ್ತಿದೆ.
ಬಹುಶ: ಅಲ್ಲಿಯೂ ಈಗ ಜನರನ್ನೆಲ್ಲ ಸೇರಿಸಿಕೊಂಡು ಹೊಸ ಹಾಡುಗಳಿಗಾಗಿ ಹುಡುಕಾಟ ನಡೆಸುತ್ತಿರಬಹುದು.
ಹಿರೇಮಠರು ಅಪಾರ ಪ್ರೀತಿಯಿಂದ ಹಾಡುತ್ತಿದ್ದ ಪಾರಿಜಾತದ ಚಂದ್ರಗಾವಿಯನುಟ್ಟು….
0 ಪ್ರತಿಕ್ರಿಯೆಗಳು