ಸಂವರ್ಥ ಸಾಹಿಲ್
ಇಸವಿ ೨೦೦೫. ಡಿಗ್ರಿ ಪರೀಕ್ಷೆ ಮುಗಿಸಿ ಪಿ.ಜಿ. ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ದಿನಗಳಲ್ಲಿ ಸ್ನೇಹಿತೆ ದಿವ್ಯಶ್ರೀ ಒಂದು ದಿನ ಫೋನ್ ಮಾಡಿ, “ಮಣಿಪಾಲದ ಲೈಬ್ರರಿ ಸದಸ್ಯ ಅಲ್ಲವ ನೀನು? ನನಗೆ ಅಲ್ಲಿ ಕೆಲವು ಪುಸ್ತಕ ರೆಫರ್ ಮಾಡಲಿಕ್ಕೆ ಇದೆ, ಕರ್ಕೊಂಡು ಹೋಗು,” ಅಂದಳು. “ಹ್ಞೂ, ಖಂಡಿತ. ಬೆಳಿಗ್ಗೆ ಬಾ. ಲೈಬ್ರರಿಗೆ ಹೋಗಿ ನಮ್ಮನೇಲಿ ಊಟ ಮಾಡಿ ಸಂಜೆ ಹೋಗಬಹುದು ವಾಪಿಸ್,” ಎಂದ. ಅವಳು ಒಪ್ಪಿದಳು.
ಅಂದು ಬೆಳಿಗ್ಗೆ ಲೈಬ್ರರಿಗೆ ಹೋಗಿ ಅವಳಿಗೆ ಬೇಕಾದ ಪುಸ್ತಕ ಎಲ್ಲ ನೋಡಿ ಮನೆಗೆ ಬಂದೆವು. ಅವಳಿಗೆ ಅಗತ್ಯವಿದ್ದ ಪುಸ್ತಕಗಳು ಅಷ್ಟಾಗಿ ಇಲ್ಲದ ಕಾರಣ ಬೇಗನೆ ಮನೆಗೆ ಬಂದೆವು. ಮನೆಗೆ ಬಂದು ಸುಮ್ಮನೆ ಹರಟೆ ಹೊಡೆಯುತ್ತ ಕುಳಿತಾಗ ಸಹಜವಾಗಿ ಮಾತು ಗುಲ್ಜಾರ್ ಕಾವ್ಯದ ಕಡೆ ಹೋಯಿತು. ನಾನು ನನ್ನ ಪುಸ್ತಕ ತಂದು, “ಕೇಳು” ಎಂದು ಗುಲ್ಜಾರ್ ಕಾವ್ಯವನ್ನು ಅವಳಿಗೆ ಓದಿ ಹೇಳುತ್ತಾ ಹೋದೆ.
ಹಾಗೆ ಕಾವ್ಯ ವಾಚನ ನಡೆಯುತ್ತಿರುವ ಸಂದರ್ಭದಲ್ಲಿ ಬಟ್ಟೆ ಒಗೆದು ಮುಗಿಸಿದ ಅಮ್ಮ ಒಂದು ಬಕೆಟ್ ಅಲ್ಲಿ ಒಗೆದ ಬಟ್ಟೆಗಳನ್ನೆಲ್ಲ ತುಂಬಿಕೊಂಡು ಒಣಗಿಸಲು ತೆಗೆದುಕೊಂಡು ಹೋಗುತ್ತಿದ್ದರು. ಅವರನ್ನು ನೋಡಿದ ದಿವ್ಯ, “ಏಯ್, ಅಮ್ಮ ಪಾಪ ಒಬ್ಬರೆ ಬಟ್ಟೆ ಒಣಗಿಸ್ತಾ ಇದ್ದಾರೆ,” ಎಂದು ಕೂತಲ್ಲಿಂದ ಎದ್ದಳು. ನಾನು ಏನು ಹೇಳದೆ ಹಾಗೆ ಕೂತೆ.
ನನ್ನನ್ನೇ ಒಮ್ಮೆ ದಿಟ್ಟಿಸಿ ನೋಡಿದ ದಿವ್ಯ, “ಅಮ್ಮನ ಕಷ್ಟಕ್ಕೆ ಕರಗದ ಹೃದಯ ಗುಲ್ಜಾರ್ ಕಾವ್ಯಕ್ಕೆ ಕರಗಿದರೆ ಏನು ಉಪಯೋಗ?” ಎಂದು ಅಮ್ಮನಿಗೆ ಸಹಾಯ ಮಾಡಲು ಹೋದಳು.
0 ಪ್ರತಿಕ್ರಿಯೆಗಳು