ಗುಂಡುರಾವ್ ದೇಸಾಯಿ ಓದಿದ ʻನನ್ನ ಪ್ರಯಾಸದ ಕಥನಗಳುʼ

ಪ್ರಬಂಧ ಸಾಹಿತ್ಯ ಇಂಗ್ಲಿಷ್‌ ಮೂಲದ್ದಲ್ಲ. ಫ್ರಾನ್ಸಿನ ಖ್ಯಾತ ಲೇಖಕ ಮಾಂಟೇನ ಇದರ ಹುಟ್ಟುಹಾಕಿದನು. ಬೇಕನ್‌ಗೂ ಹಿಡಿಸಿತು. ಆ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಮೈತಳೆಯಲು ಕಾರಣವಾಯಿತು. ʻಪ್ರಬಂಧʼ ಪದ ಕನ್ನಡಕ್ಕೂ ಹೊಸದಲ್ಲ. ನಮ್ಮ ಪ್ರಾಚೀನ ಕಾವ್ಯಗಳಲ್ಲೂ ಉಲ್ಲೇಖಗೊಂಡಿರುವಂತದ್ದು. ʻನಾಟಕʼ ಪದದೊಳಗೆ ಎಲ್ಲಾ ಸಾಹಿತ್ಯ ಪ್ರಕಾರಗಳು ಅಡಗಿರುವ ಹಾಗೆ ಪ್ರಬಂಧದಲ್ಲೂ ಹುದುಗಿವೆ. ಗದ್ಯರೂಪದ ಭಾವಗೀತೆ ಎಂದೇ ಈ ಪ್ರಕಾರವನ್ನು ಬಿಂಬಸಲ್ಪಡುತ್ತದೆ. ತೀ.ನಂ.ಶ್ರೀಯವರು ʻಪ್ರಬಂಧಗಳು ಮಂದ ಶೃತಿಯ ಭಾವಗೀತೆಗಳುʼ ಎಂದು ಹೇಳಿರುವುದು ಇದೇ ಅರ್ಥದಲ್ಲಿಯೇ. ಕತೆ ಕಾವ್ಯದಿಂದ ಸಂತೋಷ ಅಥವಾ ದುಃಖ ಅಥವಾ ಕೋಪ ಮೊದಲಾದ ಭಾವಗಳು ಮೂಡಬಹುದು. ಆದರೆ ಒಂದು ಲಲಿತ ಪ್ರಬಂಧವನ್ನು ಓದಿದಾಗ ಇಂತಹ ಯಾವ ಗೊಂದಲಗಳು ಉಂಟಾಗದೆ, ಒಂದು ಅಮಿತಾನಂದದ ಲೋಕದಲ್ಲಿ ಸಾಗಿಬಂದ ಹಾಗಾಗುತ್ತದೆ. ಲಲಿತ ಪ್ರಬಂಧಗಳು ಬಹುತೇಕ  ಎಲ್ಲರ ಅನುಭವಗಳೇ ಆಗಿರುವುದರಿಂದ ಬಹು ಆಪ್ತವಾಗಿ ಮುದನೀಡುತ್ತವೆ.

ಕನ್ನಡದಲ್ಲಿ ಪ್ರಬಂಧ ಸಾಹಿತ್ಯ ೧೮೯೮ರಲ್ಲಿ ಬಂದದ್ದು. ಬಿ. ವೆಂಕಟಾಚಾರ್ಯರ ʻಲೋಕರಹಸ್ಯʼ ಎಂಬ ಬಂಕಿಮ ಚಂದ್ರರ ಪ್ರಬಂಧಗಳನ್ನು ಕನ್ನಡಕ್ಕೆ ತರುವ ಮೂಲಕ. ಮೂರ್ತಿರಾಯರು, ರಾ.ಶಿ. ಗೊರೂರು, ಆನಂದರು, ಪು.ತಿ.ನ, ಕುವೆಂಪು ಮೊದಲಾದವರು ಈ ಪ್ರಕಾರವನ್ನು ಬೆಳಸಿದರು. ಪ್ರಸಿದ್ಧಿಗೊಳಿಸಿದರು. ಪ್ರಬಂಧ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಕಥೆ, ಕಾವ್ಯ, ನಾಟಕಗಳ ಬರವಣಿಗೆ ಜೊತೆಯಲ್ಲಿ ಇದು ಒಂದು ಭಾಗವಾಗಿ ಪರಿಗಣಿಸಿದವರೇ ಹೆಚ್ಚು. ಕಥೆ ನಾಟಕದಂತೆ ಇದನ್ನೇ ಪ್ರಮುಖವಾಗಿಸಿಕೊಂಡವರು ಕೆಲವರು ಮಾತ್ರ. ಆ ಹಿನ್ನಲೆಯಲ್ಲಿ ಸಾಹಿತ್ಯ ಪ್ರಕಾರಕ್ಕೆ ಕಥೆ, ಕಾವ್ಯಕ್ಕೆ ಸಿಕ್ಕ ಬೆಲೆ ಸಿಗಲಿಲ್ಲ. ಇವತ್ತಿಗೂ, ಪ್ರಬಂಧ, ಹಾಸ್ಯ, ವಿಡಂಬನಾ ಸಾಹಿತ್ಯ ತೃತೀಯ ದರ್ಜೆಯ ಸಾಹಿತ್ಯ ಎಂದು ಪರಿಗಣಿಸಲಾಗುತ್ತಿರುವುದು ನಿಜಕ್ಕೂ ಸಾಹಿತ್ಯಿಕ ದುರಂತ.

ನಮ್ಮ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಈ ಲಲಿತ ಪ್ರಬಂಧ ಸಾಹಿತ್ಯ ಬೆಳವಣಿಗೆ ಇದ್ದರೂ, ರಾಯಚೂರು ಜಿಲ್ಲೆಯ ಸಾಹಿತ್ಯ ದೃಷ್ಟಿಯಲ್ಲಿ ಬಹಳ ಕಡಿಮೆ. ಸಂಖ್ಯಾ ದೃಷ್ಟಿಯಿಂದ ಕಡಿಮೆ ಇದ್ದಾಗ್ಯೂ ಗಟ್ಟಿತನಕ್ಕೇನೂ ಕಡಿಮೆ ಇಲ್ಲ. ಅಂತಹವರ ಸಾಲಿನಲ್ಲಿ ಮಂಡಲಗಿರಿ ಪ್ರಸನ್ನ ಅವರ ʻನನ್ನ ಪ್ರಯಾಸದ ಕಥನಗಳುʼ ಪ್ರಮುಖವಾದ ಲಲಿತ ಪ್ರಬಂಧ ಸಂಕಲನವಾಗಿದೆ. ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಪ್ರಕಟಿಸಿರುವ ಪ್ರಸುತ ಸಂಕಲನದಲ್ಲಿ ೧೭ ಪ್ರಬಂಧಗಳು ಇವೆ. ಅವರು ತಮ್ಮ ಪುಸ್ತಕದ ಶೀರ್ಷಿಕೆಗೆ ಇಟ್ಟ ಹೆಸರಿನಂತೆ ಅವರಿಗೆ  ಪ್ರಯಾಸದ ಕಥನಗಳಾದರೂ, ಓದುಗರನ್ನು ಆಪ್ತವಾಗಿ ಒಂದು ಸುತ್ತ ಕರೆದುಕೊಂಡು ಹೋಗಿ, ಬದುಕಿನ ನಾನಾ ಮಜಲುಗಳನ್ನು ತಿಳಿಸಿಕೊಡುವ ಸಹ್ಯ ಕಥನ ಎನಿಸುತ್ತವೆ.

ಮಂಡಲಗಿರಿ ಪ್ರಸನ್ನ, ಲೇಖಕರು.

ಸಾಹಿತ್ಯ ಓದಿದವರು ಮಾತ್ರ ಸಾಹಿತ್ಯ ರಚನೆ ಮಾಡಬಲ್ಲರು ಎನ್ನುವ ಮಾತೇ ಈಗ ಔಟ್ ಡೇಟೆಡ್. ಹಾಗೆ ನೋಡಿದರೆ ಸಾಹಿತ್ಯವನ್ನು ಅಂತರ್‌ಶಿಸ್ತೀಯವಾಗಿ ಅಧ್ಯಯನ ಮಾಡಿದವರೇ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಸಾಹಿತ್ಯದಿಂದ ದೂರವಾಗುತ್ತಿದ್ದರೆ, ಸಾಹಿತ್ಯ   ಅಧ್ಯಯನ ನಡೆಸದ ತಾಂತ್ರಿಕ, ವ್ಯವಹಾರಿಕ, ಪತ್ರಿಕೋದ್ಯಮ, ಔದ್ಯೋಗಿಕ ಇನ್ನಿತರ ಸೇವಾಕ್ಷೇತ್ರದ ಅನೇಕರು ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿದ್ದಾರೆ. ಅದೇ ಹಾದಿಯಲ್ಲಿರುವ ಮಂಡಲಗಿರಿ ಪ್ರಸನ್ನ ವೃತ್ತಿಯಲ್ಲಿ ಪ್ರತಿಷ್ಠಿತ ಕಂಪನಿಯ ಇಂಜಿನಿಯರಾಗಿ, ಕಂಪನಿಯ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ಸ್ವಯಂನಿವೃತ್ತಿ ಪಡೆದು ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅವರು ಈಗಾಗಲೇ ಕಾವ್ಯ, ಗಜಲ್, ನಾಟಕ, ಪತ್ರಿಕಾ ಬರಹಗಳ ಮೂಲಕ ಅಕ್ಷರಲೋಕದಲ್ಲಿ ಹಿರಿತನ ಮೆರೆದವರು. ಅವರು ಮಕ್ಕಳ ಸಾಹಿತ್ಯಕ್ಕೆ ಕೈ ಹಾಕಿದ್ದು ನನಗೆ ಈ ಹೊತ್ತಿನ ಅಚ್ಚರಿ ಕೂಡಾ ಹೌದು. ಅಂತಹ ಪ್ರಸನ್ನ ಅವರು ಲಲಿತ ಪ್ರಬಂಧದಲ್ಲೂ ತಮ್ಮ ಪ್ರಸನ್ನತೆಯನ್ನು ತೋರಿದ್ದಾರೆ.

ʻನನ್ನ ಪ್ರಯಾಸದ ಕಥನಗಳʼ ಪ್ರತಿಯೊಂದು ಪ್ರಬಂಧಗಳ ವಿಶ್ಲೇಷಣೆಗಿಂತ ಅದರ ಭಾವವನ್ನು ಓದಿಯೇ ಸವಿಯಬೇಕು ಎನ್ನುವುದು ನನ್ನ ಅಭಿಪ್ರಾಯ. ಇಲ್ಲಿಯ ಹದಿನೇಳು ಪ್ರಬಂಧಗಳ ಹೆಸರೇ ಆಕರ್ಷಕ. ಹೆಸರಿನ ಮೂಲಕವೇ ಕುತೂಹಲ ಹೆಚ್ಚಿಸುವ ಶಕ್ತಿ ಪ್ರಬಂಧಕನ ಶಕ್ತಿಯೂ ಹೌದು. ಪ್ರಬಂಧವೆಂದರೆ ಕೈಗೆತ್ತಿಕೊಂಡ ಸಂಗತಿಯ ಸುತ್ತ ಗಿರಿಕಿ ಹೊಡೆಯುವ ತಾಕತ್ತು ಇರಬೇಕು. ಆ ಅಂಶ ಇಲ್ಲಿಯ ಬಹುತೇಕ ಪ್ರಬಂಧಗಳಲ್ಲಿವೆ. ಗದ್ಯ ಬರೆದಾದ ಮೇಲೆ ಅಕ್ಷರರೂಪದಲ್ಲಿ ನಿರ್ವಹಿಸುವಾಗ ದಕ್ಕಬೇಕಾದ ಲವಲವಿಕೆ, ಕಾಲಪ್ರಜ್ಞೆ, ಸ್ವವಿಡಂಬನೆ, ಲಹರಿ ಎಲ್ಲವೂ ಇವೆ.

 ಪ್ರಬಂಧ ಸಂಕಲನದಲ್ಲಿ ತಮ್ಮ ಹರೆಯದ ದಿನಗಳಿಂದ ಹಿಡಿದು ಲೇಖಕರು ತಾತನಾಗುವರೆಗೂ ನಡೆದ ಬದುಕಿನ ಸ್ವಾರಸ್ಯ ಘಟನೆಗಳ ಮೆಲಕು ಇದೆ. ಕಾವ್ಯ ಮನಸ್ಸಿನ ಪ್ರಸನ್ನರವರು ತಮ್ಮ ಬರವಣಿಗೆ ಶೈಲಿಯಿಂದ ಪ್ರಬಂಧವನ್ನೇ ಕಾವ್ಯವಾಗಿಸಿದ್ದಾರೆ.

ಕಲಬುರ್ಗಿಯ ಖಾಸಗಿ ಕಂಪನಿಯ ವೃತ್ತಿ ಹಿನ್ನಲೆಯ ʻನನ್ನ ಪ್ರಯಾಸ ಕಥನಗಳುʼ,  ʻನನ್ನ ಕೊಯಮತ್ತೂರಿನ ಪ್ರವಾಸʼ, ʻಕಿಟಕಿಯ ಪ್ರಸಂಗʼ, ʻಇದು ವೃತ್ತಿಮಾತ್ಸರ್ಯವಲ್ಲʼ, ʻಒಂದು ಬ್ರೀಫ್‌ಕೇಸ್ ಪ್ರಕರಣʼ ಇವುಗಳೆಲ್ಲವೂ ಪ್ರವಾಸದ ಹಾಗೂ ಕಂಪನಿಯ ಸಂದರ್ಭದಲ್ಲಿ ನಡೆಯುವ ಸ್ವಾರಸ್ಯ ಘಟನೆಗಳ ಮೂಲಕ ಸೆಳೆಯುತ್ತವೆ. ಮನೆಯಾಕೆ ಸಾಕಿದ ನಾಯಿ ಸತ್ತ ಮೇಲೆ ಅದಕ್ಕೊಂದು ಪೋಖರಣದ ಶಕ್ತಿಸೌಧದಂತೆ ಶ್ವಾನಸೌಧ ಕಟ್ಟಿಸುವ ಚರ್ಚೆಯ ʻಪೋಖರಣದ ಪ್ರಭಾವʼ ಒಂದು ಬಗೆಯಾದರೆ, ಪಕ್ಕದಮನೆಯವರು ಬಿಟ್ಟು ಹೋದ ನಾಯಿಯಿಂದ ಪಡುವ ತಾಪತ್ರಯಗಳು, ಮನಯಾಕೆ ಮಾಡಿದ ಉಪಾಯದ ಬಗ್ಗೆ ಸ್ವಾರಸ್ಯಕರ ಅನುಭವವನ್ನು ʻಎದುರು ಮನೆ ನಾಯಿʼ ಕೊಡುತ್ತದೆ. ʻಕಥಾ ಸ್ಪರ್ಧೆಯ ಕಥೆʼ, ʻಇತಿ ಸಂಪದಾಯಣʼ ಈ ಎರಡು ಪ್ರಬಂಧಗಳು ಸಾಹಿತ್ಯದ ಒಟನಾಟದಲ್ಲಿ ನಡೆಯುವ ಖುಷಿ ಹಾಗೂ ಮುಜುಗರ ಸನ್ನಿವೇಶದ ಸಂದರ್ಭದ ಘಟನೆಗಳನ್ನು ತಿಳಿಸುವಂತಹವು.

ಹರಟೆ ಮತ್ತು ತಲೆಹರಟೆ ಚಹಾರಾಧನೆ, ಆ ಸಣ್ಣ ಸಂಗತಿ, ಒಂದು ಬ್ರೀಫ್‌ಕೇಸ್ ಪ್ರಕರಣ ಕಚುಗುಳಿ ನೀಡುವ ಪ್ರಬಂಧಗಳು. ಸಾಫ್ಟ್‌ವೇರ್‌ ಜಗತ್ತಿನ ಬದುಕನ್ನು ತೋರಿಸುವ ʻಜಗತ್ತಿನಲ್ಲೊಂದು ಜಗತ್ತುʼ ವಿಶೇಷ ಪ್ರಬಂಧ. ಒಂದು ದಿನ ಕಳೆಯಲು ಹತ್ತು ಸಾವಿರ ಖರ್ಚು ಮಾಡಿಸಿದ ದೀಪಾವಳಿಯ ಅಳಿತನದ ಬಗೆಗಿರುವ ʻಶೌಚಾಲಯ ಪ್ರಸಂಗʼ ಪತ್ನಿಯ ಹೆಸರಲ್ಲೇ ಸೊಗಸಾಗಿ ಚಿತ್ರಿಸಿದ ಮಮತಾನಿಂದ ಮಮ್ಸ್‌ವರೆಗೂ ಹೆಸರಿನ ದಶಾವತಾರ ಕತೆಗಳನ್ನು ತಿಳಿಸುವ ʻನಮ್ಮ ಹೆಸರಲ್ಲೇನಿದೆ?ʼ ಪ್ರಬಂಧ ಇವರೆಡು ಸಂಕಲನದ ಮಹತ್ವದ ಪ್ರಬಂಧಗಳು.

ಈ ಸಂಕಲನದ ಮೂಲಕ ಮೂಲಕ ಸಿಹಿಕಹಿ ಅನುಭವನಗಳನ್ನು ಬಹು ಆಪ್ತವಾಗಿ ಕಟ್ಟಿಕೊಟ್ಟಿರುವ ಮಂಡಲಗಿರಿ ಪ್ರಸನ್ನ ಅವರಲ್ಲಿ ಬಾಲ್ಯದ ದಟ್ಟ ಅನುಭವಗಳ ಜೊತೆಗೆ ದೇಶ ಸುತ್ತಿದಾಗ ಕಂಡ ಅಪಾರ ಅನುಭವಗಳ ಖಜಾನೆ ಇದೆ. ಬರವಣಿಗೆಲ್ಲೂ ಲಾಲಿತ್ಯ, ಪ್ರಬಂಧಕ್ಕೆ ಬೇಕಾದ ಕ್ಯಾನವಾಸ್ ಜೋಡಿಸುವ ಕಲೆ ಅವರಿಗೆ ಸಿದ್ಧಿಸಿರುವುದರಿಂದ ಮುಂದೆ ಅವರಿಂದ ದೀರ್ಘ ಪ್ರಬಂಧಗಳ ಬರಲಿ ಎಂದು ನಾನು ಆಶಿಸುತ್ತೇನೆ.

* * *

‍ಲೇಖಕರು Adminm M

August 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: