'ಗಾಂಧೀಜಿಯ ಅಂತರಾಳ' – ನಾ ದಿವಾಕರ್

ಹಿಂದ್ ಸ್ವರಾಜ್ ಕುರಿತು ಒಂದಿಷ್ಟು

divakar

ನಾ ದಿವಾಕರ್

(ಗಾಂಧಿ ಜಯಂತಿಯ ಸಂದರ್ಭದಲ್ಲಿ ಅವರ ಮಹತ್ವದ ಕೃತಿ, ಬಹು ಚರ್ಚಿತ ಕೃತಿ ಹಿಂದ್ ಸ್ವರಾಜ್ ಕುರಿತಂತೆ ಕೆಲವು ಅನಿಸಿಕೆಗಳು)

ತಮ್ಮ ಹಿಂದ್ ಸ್ವರಾಜ್ 30 ಕೋಟಿ ಭಾರತೀಯ ಜನತೆಯ ಮುಕ್ತಿಯ ಮಾರ್ಗ ತೋರುವ ಕೃತಿ ಎಂದು ತಾವೇ ಹೇಳಿಕೊಳ್ಳುವ ಹಿಂದ್ ಸ್ವರಾಜ್ನ ಮೂಲ ಸ್ವರೂಪವೇ ವಿಭಿನ್ನವಾಗಿದೆ. ತಮ್ಮ ಪುಸ್ತಕ ದ್ವೇಷದ ಬದಲು ಪ್ರೀತಿಯನ್ನು ಬೋಧಿಸುತ್ತದೆ, ಹಿಂಸೆಗೆ ಬದಲು ಪ್ರೀತಿಯನ್ನು ಬೋಧಿಸುತ್ತದೆ, ಆತ್ಮತ್ಯಾಗವನ್ನು ಕಲಿಸುತ್ತದೆ, ಪಶುಬಲಕ್ಕೆ ವಿರುದ್ಧವಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ ( ಯಂಗ್ ಇಂಡಿಯಾ ಜನವರಿ 21 1921 ಹಿಂದ್ ಸ್ವರಾಜ್ಯ ಪು. ಘಿ ) ಎಂದು ಹೆಗ್ಗಳಿಕೆಯಿಂದ ಹೇಳಿಕೊಳ್ಳುವ ಗಾಂಧೀಜಿ ಇದರಲ್ಲಿ ಒಂದು ಪದವನ್ನೂ ಬದಲಿಸಲಾರೆ ಎಂಬ ದಾಢ್ರ್ಯತೆಯನ್ನೂ ತೋರುತ್ತಾರೆ. ಈ ಪರಿಯ ಆತ್ಮಬಲದಿಂದಲೇ ರಚಿಸಿದ ತಮ್ಮ ಕೃತಿಯಲ್ಲಿನ ಆಶಯಗಳು ಪ್ರಸ್ತುತ ಸಂದರ್ಭದಲ್ಲಿ ತಮ್ಮ ಗುರಿಯಾಗಿಲ್ಲ ಎಂದೂ ಗಾಂಧೀಜಿ ಹೇಳುವುದು ಕೆಲವೊಮ್ಮೆ ಗೊಂದಲಮಯ ಎನಿಸುತ್ತದೆ. ಆದರೆ ತಾವಿಲ್ಲಿ ಹೇಳಿರುವಂತೆ ಸ್ವರಾಜ್ಯವನ್ನು ತಾವಿಂದು ಕೇಳುತ್ತಿಲ್ಲ. ಹಿಂದುಸ್ತಾನ ಅದಕ್ಕೆ ಸಾಕಷ್ಟು ಮಾಗಿಬಂದಿಲ್ಲ ,,,, ನನ್ನ ಸಾಮೂಹಿಕ ಪ್ರಯತ್ನವೇನೋ ಭಾರತೀಯರಭಿಮತದಂತೆ ಶಾಸನ ಸಮ್ಮತ ಪ್ರಜಾತಂತ್ರಕ್ಕಾಗಿ ನಡೆದಿದೆ,,, ( ಯಂಗ್ ಇಂಡಿಯಾ ಜನವರಿ 21 1921 ಹಿಂದ್ ಸ್ವರಾಜ್ಯ ಪು. ಘಿ ) ಎಂದು ಗಾಂಧೀಜಿ ಹೇಳಿದ್ದು 12 ವರ್ಷಗಳ ನಂತರ.

121

ಗಾಂಧೀಜಿಯವರ ಈ ಹೇಳಿಕೆಗಳ ಹಿನ್ನೆಲೆಯನ್ನು ಗಮನಿಸಿದರೆ, ಹಿಂದ್ ಸ್ವರಾಜ್ ಕೃತಿಯ ಸ್ವರೂಪದ ಒಳಗುಟ್ಟನ್ನೂ ಗ್ರಹಿಸಬಹುದು. ಇಡೀ ಕೃತಿ ಪ್ರಶ್ನೋತ್ತರ ರೂಪದಲ್ಲಿದೆ. ಓದುಗನೊಬ್ಬನು ಕೇಳುವ ಪ್ರಶ್ನೆಗಳಿಗೆ ಸಂಪಾದಕ ಉತ್ತರಿಸುತ್ತಾ ಹೋಗುತ್ತಾನೆ. ಈ ಪ್ರಕ್ರಿಯೆಯಲ್ಲಿ ಓದುಗನನ್ನು ತನ್ನ ಅಭಿಪ್ರಾಯಕ್ಕೆ ತಲೆದೂಗುವಂತೆ ಮಾಡುವ ಚಾಣಾಕ್ಷತನವನ್ನೂ ಸಂಪಾದಕ ತೋರುತ್ತಾನೆ. ಇಲ್ಲಿ ಓದುಗ ಜನಸಾಮಾನ್ಯರ ಸಂಕೇತವಾದರೆ ಸಂಪಾದಕ ಗಾಂಧೀಜಿಯ ಪ್ರತೀಕವಾಗುತ್ತಾನೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜನಸಮುದಾಯಗಳ ನಡುವೆ ಉದ್ಭವಿಸಬಹುದಾದ ಅನೇಕ ಗೊಂದಲಗಳಿಗೆ ತಮ್ಮಿಂದ ಉತ್ತರ ನೀಡಲು ಸಾಧ್ಯ ಎಂಬ ಆತ್ಮನಿಷ್ಠೆಯ ನೆಲೆಗಟ್ಟಿನಲ್ಲೇ ಗಾಂಧೀಜಿ ಇಡೀ ಕೃತಿಯನ್ನು ರಚಿಸಿದ್ದಾರೆ. ಈ ಪ್ರಯೋಗದ ಸಾಫಲ್ಯ ವೈಫಲ್ಯಗಳನ್ನು ಬದಿಗಿಟ್ಟು ನೋಡಿದರೂ, ಗಾಂಧೀಜಿಯ ಪ್ರಯತ್ನದ ಹಿಂದೆ ತಮ್ಮದೇ ಅಭಿಪ್ರಾಯವನ್ನು ಸಮೂಹ ಪ್ರತಿಪಾದನೆ ಎಂದು ನಿರೂಪಿಸುವ ದಾಷ್ಟ್ರ್ಯತೆ ಕಂಡುಬರುತ್ತದೆ. ಹಿಂದ್ ಸ್ವರಾಜ್ನ ಓದುಗ ಜನಸಾಮಾನ್ಯರನ್ನು ಪ್ರತಿನಿಧಿಸಿದರೂ ಆತನಿಂದ ಮೂಡುವ ಪ್ರಶ್ನೆಗಳು ಗಾಂಧೀಜಿಯ ಮನದಾಳದ ಗೊಂದಲಗಳನ್ನು ಹೊರಸೂಸುವುದೇ ಹೊರತು, ಭಾರತೀಯರಭಿಮತವನ್ನಲ್ಲ. ಹಾಗಾಗಿ ಕೃತಿಯಲ್ಲಿ ಮೂಡಿಬರುವ ಪ್ರಶ್ನೆಗಳಲ್ಲಿ ಭಾರತೀಯ ಜನಸಮೂಹಗಳ ಅಂತರಾಳಕ್ಕಿಂತಲೂ ಹೆಚ್ಚಾಗಿ ಗಾಂಧೀಜಿಯವರ ಅಂತರಾಳವೇ ಎದ್ದುಕಾಣುತ್ತವೆ. ತತ್ಪರಿಣಾಮವಾಗಿ ಸಮಸ್ತ ಭಾರತೀಯ ಸಂಸ್ಕೃತಿ (ಹಿಂದೂ ಅಥವಾ ಸನಾತನ ಸಂಸ್ಕೃತಿಯಲ್ಲ)ಯನ್ನು ಪ್ರತಿನಿಧಿಸುವ ಪ್ರಶ್ನೆಗಳು ಎಲ್ಲಿಯೂ ಮೂಡುವುದಿಲ್ಲ. ವಿಭಿನ್ನ ಸಂಸ್ಕೃತಿಗಳ ಭಾರತೀಯ ಜನಸಮೂಹಗಳ ಸಾಮಾಜಿಕ-ಸಾಂಸ್ಕೃತಿಕ ಆಶಯಗಳೂ ವ್ಯಕ್ತವಾಗುವುದಿಲ್ಲ. ಇದು ಹಿಂದ್ ಸ್ವರಾಜ್ನ ನ್ಯೂನತೆಯೂ ಹೌದು ಶಕ್ತಿಯೂ ಹೌದು.

ತಮ್ಮ ಇಡೀ ಕೃತಿಯಲ್ಲಿ ಗಾಂಧೀಜಿಯವರು ನಾಗರಿಕತೆಯನ್ನೇ ಕೇಂದ್ರ ಬಿಂದುವನ್ನಾಗಿ ಪರಿಗಣಿಸುತ್ತಾರೆ. ಪೌವರ್ಾತ್ಯ-ಪಾಶ್ಚಿಮಾತ್ಯ ನಾಗರಿಕತೆಗಳ ನಡುವಿನ ಸಂಘರ್ಷ ಮತ್ತು ದ್ವಂದ್ವಗಳು ಅವರ ಪ್ರತಿಪಾದನೆಗೆ ಆಕರಗಳಾಗಿ ಪರಿಣಮಿಸುತ್ತವೆ. ತಾವು ಕಲ್ಪಿಸಿಕೊಂಡ ಅಥವಾ ಭಾರತೀಯ ಸಮಾಜದ ಒಂದು ವರ್ಗದ ನಾಗರಿಕತೆಯ ಪರಿಕಲ್ಪನೆಯನ್ನೇ ಸಾಕ್ಷಾತ್ಕರಿಸುವ ಪ್ರಯತ್ನದಲ್ಲಿ ಗಾಂಧೀಜಿಯವರು ಭಾರತೀಯ ನಾಗರಿಕತೆ ಸಭ್ಯತೆಯನ್ನು, ನ್ಶೆತಿಕತೆಯನ್ನು ಬೆಳೆಸುತ್ತದೆ, ಆದರೆ ಇದಕ್ಕೆ ತದ್ವಿರುದ್ಧವಾಗಿ ಪಾಶ್ಚಿಮಾತ್ಯ ನಾಗರಿಕತೆಯು ದೈವದಲ್ಲಿ ನಂಬಿಕೆ ಇರಿಸದೆ ನಾಸ್ತಿಕತೆಯನ್ನು ಬೆಳೆಸುತ್ತದೆ ಮತ್ತು ಅನ್ಶೆತಿಕತೆಯನ್ನು ಪೋಷಿಸುತ್ತದೆ ಎಂಬ ಅರ್ಥದಲ್ಲಿ ನಾಗರಿಕತೆಯನ್ನು ವಿಶ್ಲೇಷಿಸುತ್ತಾರೆ. ದೈವತ್ವದ ಪರಿಕಲ್ಪನೆಗೂ, ನಾಗರಿಕತೆಗೂ ಸಂಬಂಧ ಕಲ್ಪಿಸುವ ಭರದಲ್ಲಿ ಗಾಂಧೀಜಿ ಯಾವುದೇ ನಾಗರಿಕತೆ ಬೆಳೆಯುವುದು ಹಲವು ಜನಸಮುದಾಯಗಳ ಸಮಷ್ಟಿ ಪ್ರಜ್ಞೆ ಮತ್ತು ಸಾಮೂಹಿಕ ಜೀವನ ಶೈಲಿಯಿಂದ ಎಂಬ ಅಂಶವನ್ನು ಸಂಪೂರ್ಣವಾಗಿ ಮರೆಮಾಚುತ್ತಾರೆ.

ಭಾರತೀಯ ನಾಗರಿಕತೆಯ ಪರಮ ಶ್ರೇಷ್ಠತೆಯನ್ನು ಸಾಕ್ಷೀಕರಿಸುವ ಮುನ್ನ ಗಾಂಧೀಜಿಯವರು ವಿಶ್ವದ ಇತರ ನಾಗರಿಕತೆಗಳನ್ನು ಕುರಿತು ಆಳವಾದ ಅಧ್ಯಯನ ಮಾಡಿರಲೇಬೇಕು. ಆದಾಗ್ಯೂ ಗಾಂಧೀಜಿವರು ತಮ್ಮ ಕೃತಿಯಲ್ಲಿ ವಿಭಿನ್ನ ನಾಗರಿಕತೆಗಳ ತೌಲನಿಕ ಅಧ್ಯಯನದ ಕುರುಹನ್ನೂ ನೀಡದೆ ಭಾರತೀಯ ಸಂಸ್ಕೃತಿ-ನಾಗರಿಕತೆಯ ಬಗ್ಗೆ ತಮ್ಮ ಅತೀವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಪಾಶ್ಚಿಮಾತ್ಯ ಜಗತ್ತನ್ನು ರಾಜಕೀಯವಾಗಿ ಸಾಮ್ರಾಜ್ಯಶಾಹಿಯ ರೂಪದಲ್ಲಿ ಎದುರುಗೊಳ್ಳುವ ಗಾಂಧೀಜಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಾಗರಿಕತೆಯ ಸಂಘರ್ಷವೆಂದೇ ಭಾವಿಸುತ್ತಾರೆ. 1895ರಲ್ಲೇ ಪಾಶ್ಚಿಮಾತ್ಯ ನಾಗರಿಕತೆಯ ಬಗ್ಗೆ ಅನೇಕ ರೀತಿಯ ಪೂವರ್ಾಗ್ರಹಗಳನ್ನು ಬೆಳೆಸಿಕೊಂಡಿದ್ದ ಗಾಂಧೀಜಿಯವರಿಗೆ, ಈ ನಾಗರಿಕತೆಯ ಲೌಕಿಕತೆ ಹಾಗು ಸಾಮ್ರಾಜ್ಯಶಾಹಿ ವಿಸ್ತéರಣೆಯ ದಾಹಗಳೆರಡೂ ಸಮಾನವಾಗಿ ಕಂಡಿದ್ದವು. ಈ ಹಂತದಲ್ಲಿ ಜಾನ್ ರಸ್ಕಿನ್ ಅವರ ಅನ್ ಟು ದಿ ಲಾಸ್ಟ್ ಕೃತಿ ಗಾಂಧೀಜಿಯ ಮೇಲೆ ತೀವ್ರತೆರನಾದ ಪ್ರಭಾವ ಬೀರಿತೆಂದು ರಾಜ್ ಮೋಹನ್ ಗಾಂಧಿ ಹೇಳುತ್ತಾರೆ. ( ದಿ ಗುಡ್ ಬೋಟ್ ಮ್ಯಾನ್ ಕೃತಿಯಿಂದ ) ಇದೇ ಸಂದರ್ಭದಲ್ಲಿ ರಷ್ಯಾದ ಖ್ಯಾತ ಲೇಖಕ ಟಾಲ್ಸ್ಟಾಯ್ ಅವರ ಪ್ರತಿಪಾದನೆಗಳೂ ಗಾಂಧೀಜಿಯನ್ನು ಆಕಷರ್ಿಸಿದ್ದವು. ಬಂದೂಕಿನ ರಾಜಕೀಯ, ರಾಜಕೀಯ ಅಧಿಕಾರದ ಅಪೇಕ್ಷೆ, ಭಾರಿ ನಗರಗಳ ನಿಮರ್ಾಣ ಇವೆಲ್ಲವನ್ನೂ ವಿರೋಧಿಸುತ್ತಿದ್ದ ಟಾಲ್ಸ್ಟಾಯ್ನ ಅಭಿಪ್ರಾಯಗಳಿಗೆ ಸಮ್ಮತಿ ಸೂಚಿಸಿದ್ದ ಗಾಂಧೀಜಿಗೆ ಹಿಂದ್ ಸ್ವರಾಜ್ನ ಪರಿಕಲ್ಪನೆ ಮೂಡಿದ್ದೂ ಈ ಹಿನ್ನೆಲೆಯಲ್ಲಿಯೇ ಇರಬಹುದು.

ಆಧುನಿಕ ಜಗತ್ತಿನಲ್ಲಿ ಶೀಘ್ರಗತಿಯಲ್ಲಿ ಬದಲಾಗುತ್ತಿರುವ ನಾಗರಿಕತೆಯ ಲಕ್ಷಣಗಳು ಮತ್ತು ಸಾಂಸ್ಕೃತಿಕ ಲಕ್ಷಣಗಳು ಹಿಂದ್ ಸ್ವರಾಜ್ನ ಪರಿಶೀಲನೆಗೊಳಗಾಗಿಲ್ಲ. ತಾವು ನಂಬಿದ್ದ ಅಥವಾ ತಮ್ಮ ಸುತ್ತಲಿನ ಜೀವನದಲ್ಲಿ ಕಂಡಿದ್ದ ನಾಗರಿಕತೆಯ ಲಕ್ಷಣಗಳನ್ನೇ ಪರಮಶ್ರೇಷ್ಠವೆಂದು ಗ್ರಹಿಸಿ ತಮ್ಮ ಅಂತಿಮ ತೀಪರ್ು ನೀಡುವ ಗಾಂಧೀಜಿಯವರಿಗೆ ಭಾರತೀಯ ನಾಗರಿಕತೆ ನಿಭರ್ೀತಿಯ ಪ್ರತೀಕ, ಪಾಶ್ಚಿಮಾತ್ಯ ನಾಗರಿಕತೆ ಎಂದರೆ ಕ್ಷಣಿಕ ವಿಸ್ಮಯ ಭಾವನೆ ದಟ್ಟವಾಗಿ ಮೂಡಿತ್ತು. ಇಲ್ಲಿ ಗಾಂಧೀಜಿಯವರ ಸಮೂಹ ಪ್ರಜ್ಞೆಗಿಂತಲೂ ಅನಾಥ ಪ್ರಜ್ಞೆ ಪ್ರಖರವಾಗಿ ವ್ಯಕ್ತವಾಗುತ್ತದೆ. ಪೌವರ್ಾತ್ಯ ನಾಗರಿಕತೆ ಅಥವಾ ಜಗತ್ತು ತನ್ನ ರಾಜಕೀಯ-ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ನಾಗರಿಕತೆಯನ್ನು ವಿಜೃಂಭಿಸುವ ಅಥವಾ ವೈಭವೀಕರಿಸುವ ಪ್ರಯತ್ನವನ್ನು ಗಾಂಧಿ ಮಾಡುತ್ತಾರೆ. ತೀವ್ರ ರಾಷ್ಟ್ರೀಯವಾದ ಹಾಗು ಅಪ್ರತಿಮ ದೇಶಾಭಿಮಾನವನ್ನು ಸಮಥರ್ಿಸುವ ನಿಟ್ಟಿನಲ್ಲಿ ಗಾಂಧೀಜಿ ಆತ್ಮಾಭಿಮಾನದ ಪರಾಕಾಷ್ಠೆಯನ್ನು ತಲುಪಿ ಶ್ರೇಷ್ಠತೆಯ ಮೊರೆ ಹೋಗುತ್ತಾರೆ. ಹಾಗಾಗಿ ಹಿಂದ್ ಸ್ವರಾಜ್ ಸದಾ ಚಚರ್ೆಗೊಳಗಾಗುವ ಕೃತಿಯಾದರೂ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸರ್ವಕಾಲಿಕ ಕೃತಿ ಎನಿಸಿಕೊಳ್ಳುವುದಿಲ್ಲ.

‍ಲೇಖಕರು G

October 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: